ಮತದಾರ ಎಡವಿದರೆ ಯುಪಿ ಕೇರಳವಾಗುತ್ತೆ; ಯೋಗಿ ಏಟಿಗೆ ಪಿಣರಾಯಿ ತಿರುಗೇಟು
ಲಕ್ನೋ, ಫೆಬ್ರವರಿ 10: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನೀವು ಸ್ವಲ್ಪ ಎಡವಿದರೂ ರಾಜ್ಯವು ಕಾಶ್ಮೀರ, ಪಶ್ಚಿಮ ಬಂಗಾಳ ಮತ್ತು ಕೇರಳದಂತೆ ಪರಿವರ್ತನೆ ಆಗುತ್ತದೆ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದಾರೆ.
ಒಂದು ವೇಳೆ ಉತ್ತರ ಪ್ರದೇಶವು ಕೇರಳದ ರೀತಿಯಲ್ಲಿ ಬದಲಾಗಬಹುದು ಎಂಬ ಭಯವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕಾಡುತ್ತಿದೆ ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.
"ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಯದಂತೆ ಉತ್ತರ ಪ್ರದೇಶವು ಕೇರಳ ಆಗಿ ಪರಿವರ್ತನೆ ಆದರೆ, ಅದು ಅತ್ಯುತ್ತಮ ಶಿಕ್ಷಣ, ಆರೋಗ್ಯ ಸೇವೆಗಳು, ಸಮಾಜ ಕಲ್ಯಾಣ, ಉತ್ತಮ ಜೀವನಮಟ್ಟವನ್ನು ಅನುಭವಿಸುತ್ತದೆ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡದ ಸಾಮರಸ್ಯದ ಸಮಾಜವನ್ನು ಹೊಂದಿರುತ್ತದೆ. ಯುಪಿಯ ಜನ ಬಯಸುವುದು ಅದನ್ನೇ," ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದಾರೆ.

ಯುಪಿ ಸಿಎಂಗೆ ಶಶಿ ತರೂರ್ ತಿರುಗೇಟು:
ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಉತ್ತರ ಪ್ರದೇಶವು ಕಾಶ್ಮೀರ, ಬಂಗಾಳ ಅಥವಾ ಕೇರಳವಾಗಿ ಬದಲಾಗುತ್ತದೆ ಎಂಬ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಟೀಕೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ. 'ಕಾಶ್ಮೀರದ ಸೌಂದರ್ಯ, ಪಶ್ಚಿಮ ಬಂಗಾಳದ ಸಂಸ್ಕೃತಿ ಮತ್ತು ಕೇರಳದ ಶಿಕ್ಷಣವು ಈ ಸ್ಥಳದ ಅದ್ಭುತ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ:
ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಶಾಮ್ಲಿ, ಮೀರತ್, ಹಾಪುರ್, ಮುಜಾಫರ್ ನಗರ್, ಭಾಗ್ಪತ್, ಗಜಿಯಾಬಾದ್, ಬುಲಂದ್ ಶಹರ್, ಅಲಿಘರ್, ಆಗ್ರಾ, ಗೌತಮ್ ಬುದ್ಧ ನಗರ್ ಹಾಗೂ ಮಥುರಾ ಜಿಲ್ಲೆಗಳಲ್ಲಿ ಮತದಾನ ನಡೆದಿದೆ. ಕಳೆದ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 53 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಉತ್ತರ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣಾ ಭದ್ರತೆಗಾಗಿ 412 ಸೆಂಟ್ರಲ್ ಪ್ಯಾರಾಮಿಲಿಟರ್ ಫೋರ್ಸ್ ಕಂಪನಿಗಳ 50,000 ಸಿಬ್ಬಂದಿಯನ್ನು ವಿವಿಧ ಕ್ಷೇತ್ರಗಳಲ್ಲಿ ನಿಯೋಜನೆ ಮಾಡಲಾಗಿದೆ.












Click it and Unblock the Notifications