ಉತ್ತರಪ್ರದೇಶದಲ್ಲಿ 6ನೇ ಹಂತದ ಮತದಾನ ಆರಂಭ
ಲಕ್ನೋ ಮಾರ್ಚ್ 3: ಉತ್ತರಪ್ರದೇಶದಲ್ಲಿಂದು ವಿಧಾನಸಭೆ ಚುನಾವಣೆಯ 6ನೇ ಹಂತದ ಮತದಾನ (ಮಾರ್ಚ್ 3) ಆರಂಭಗೊಂಡಿದೆ. ಉತ್ತರ ಪ್ರದೇಶ ರಾಜ್ಯ ಚುನಾವಣಾ ಆಯೋಗವು ಉತ್ತರ ಪ್ರದೇಶದಲ್ಲಿ ಆರನೇ ಹಂತದ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಬಿಜೆಪಿ, ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿಯ ಹಿರಿಯ ನಾಯಕರು ಮತದಾರರನ್ನು ಸೆಳೆಯಲು ಕೊನೆಯ ಹಂತದ ಪ್ರಯತ್ನ ಈಗಾಗಲೇ ಮುಗಿದಿದೆ. ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿದ್ದರೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಉರುಳಿಸಲು ಹವಣಿಸುತ್ತಿವೆ.
ಕೊರೊನಾ ಮಾರ್ಗಸೂಚಿಗಳೊಂದಿಗೆ ಆರನೇ ಹಂತದ ಚುನಾವಣೆ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. ಈ ಹಂತದಲ್ಲಿ 2.14 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.ಉತ್ತರ ಪ್ರದೇಶ ಪೊಲೀಸರ ಪ್ರಕಾರ, ಆರನೇ ಹಂತದಲ್ಲಿ 179 ಪೊಲೀಸ್ ಠಾಣೆ ವ್ಯಾಪ್ತಿಯ 25,319 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 13,930 ಮತಗಟ್ಟೆಗಳಿಗೆ 150,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹತ್ತು ಜಿಲ್ಲೆಗಳಲ್ಲಿ ಹರಡಿರುವ ಒಟ್ಟು 57 ಸ್ಥಾನಗಳಿಗೆ ಆರನೇ ಹಂತದಲ್ಲಿ ಮತದಾನ ನಡೆಯಲಿದೆ. ಅಂಬೇಡ್ಕರ್ ನಗರ, ಬಲರಾಮ್ಪುರ, ಸಿದ್ಧಾರ್ಥನಗರ, ಬಸ್ತಿ, ಸಂತ ಕಬೀರ್ ನಗರ, ಮಹಾರಾಜ್ಗಂಜ್, ಗೋರಖ್ಪುರ, ಕುಶಿನಗರ, ಡಿಯೋರಿಯಾ ಮತ್ತು ಬಲ್ಲಿಯಾ ಜಿಲ್ಲೆಗಳ 57 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಈ ಹಂತದಲ್ಲಿ ಒಟ್ಟು 676 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರಲ್ಲಿ ಪ್ರಮುಖರೆಂದರೆ ಗೋರಖ್ಪುರ ನಗರ ಕ್ಷೇತ್ರದಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮ್ಕುಹಿ ರಾಜ್ ಕ್ಷೇತ್ರದಿಂದ ಕಾಂಗ್ರೆಸ್ ಯುಪಿ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು, ಫಾಜಿಲ್ನಗರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್. ಬನ್ಸ್ದಿಹ್ ಕ್ಷೇತ್ರದಿಂದ ಗೋವಿಂದ್ ಚೌಧರಿ, ಪಥರ್ದೇವ ಸ್ಥಾನದಿಂದ ಯುಪಿ ಸಚಿವ ಸೂರ್ಯ ಪ್ರತಾಪ್ ಶಾಹಿ, ಇತ್ವಾ ಕ್ಷೇತ್ರದಿಂದ ಸತೀಶ್ ಚಂದ್ರ ದ್ವಿವೇದಿ, ಬನ್ಸಿ ಸ್ಥಾನದಿಂದ ಜೈ ಪ್ರತಾಪ್ ಸಿಂಗ್, ಖಜಾನಿ ಕ್ಷೇತ್ರದಿಂದ ಶ್ರೀ ರಾಮ್ ಚೌಹಾನ್ ಮತ್ತು ರುದ್ರಪುರ ಕ್ಷೇತ್ರದಿಂದ ಜೈ ಪ್ರಕಾಶ್ ನಿಶಾದ್ ಸೇರಿದಂತೆ ಮತ್ತಿತರ ಅಭ್ಯರ್ಥಿಗಳು ಈ ಹಂತದಲ್ಲಿ ಸ್ಪರ್ಧಿಸುತ್ತಿದ್ದಾರೆ.
ಈ ಹಿಂದೆ 2017ರ ಚುನಾವಣೆಯಲ್ಲಿ ಬಿಜೆಪಿ 57 ಸ್ಥಾನಗಳ ಪೈಕಿ 46 ಸ್ಥಾನಗಳನ್ನು ಗೆದ್ದಿತ್ತು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಅಭಿಪ್ರಾಯ ಸಂಗ್ರಹ ಮತ್ತು ಬಹುಪಾಲು ಸಮೀಕ್ಷೆಗಳು ಸಮಾಜವಾದಿ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿಗೆ ನೀಡಿವೆ.
ಹಿಂದಿನ ಹಂತಕ್ಕೆ ಹೋಲಿಸಿದರೆ ಆರನೇ ಹಂತದಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆಯೂ ಕಡಿಮೆ ಇದೆ. ಜೊತೆಗೆ ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಉಪಸ್ಥಿತಿಯಿಂದಾಗಿ ಈ ಹಂತದ ಸುಮಾರು 65 ಪ್ರತಿಶತ ವಿಧಾನಸಭಾ ಸ್ಥಾನಗಳನ್ನು ಸೂಕ್ಷ್ಮವೆಂದು ಘೋಷಿಸಲಾಗಿದೆ. ಆರನೇ ಹಂತದಲ್ಲಿ ಎಡಿಆರ್ ಪರಿಶೀಲನೆ ಮಾಡಿದ 670 ಅಭ್ಯರ್ಥಿಗಳಲ್ಲಿ 182 (ಶೇಕಡಾ 27) ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅದರಲ್ಲಿ ಶೇಕಡಾ 23ರಷ್ಟು ಅಭ್ಯಾರ್ಥಿಗಳ ವಿರುದ್ಧ ಗಂಭೀರ ಪ್ರಕರಣಗಳು ಬಾಕಿ ಉಳಿದಿವೆ. ಹಣಬಲದ ವಿಷಯದಲ್ಲಿ, ಆರನೇ ಹಂತವು ಇತರರಿಗಿಂತ ಭಿನ್ನವಾಗಿಲ್ಲ. 38 ಪ್ರತಿಶತ ಕೋಟ್ಯಧಿಪತಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇನ್ನೂ ನಿನ್ನೆಯಷ್ಟೇ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಮತ್ತೆ ಸರ್ಕಾರ ರಚಿಸುತ್ತದೆ. ಮಾರ್ಚ್ 10 ರಂದು ಶೇ.80 ರಷ್ಟು ಸೀಟುಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ. ಸಮಾಜವಾದಿ ಪಕ್ಷ ಸೋಲಲಿದೆ. ಲಂಕಾದಂತೆ ಸಮಾಜವಾದಿ ಪಕ್ಷದ ಅಂತ್ಯವೂ ಸಮೀಪಿಸಿದೆ ಎಂದು ಸಿಎಂ ಯೋಗಿ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಸಿಎಂ ಆದಿತ್ಯನಾಥ್ ವಿರುದ್ಧ ಎಸ್ಪಿ ಬಿಜೆಪಿಯ ಮಾಜಿ ನಾಯಕ ದಿವಂಗತ ಉಪೇಂದ್ರ ದತ್ ಶುಕ್ಲಾ ಅವರ ಪತ್ನಿಯನ್ನು ಕಣಕ್ಕಿಳಿಸಿದೆ. ಇನ್ನೂ ದಲಿತ ಮುಖಂಡ, ಆಜಾದ್ ಸಮಾಜ ಪಕ್ಷದ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಕೂಡ ಸಿಎಂ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದಾರೆ.












Click it and Unblock the Notifications