ಭಾರತಾಂಬೆ ನೆಲದಲ್ಲಿ ಉಪ್ಪು ತಿಂದವರು ದ್ರೋಹ ಎಸಗುವುದಿಲ್ಲ: ಮೋದಿ
ಲಕ್ನೋ, ಫೆಬ್ರವರಿ 21: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಗರೀಬ್ ಕಲ್ಯಾಣ್ ಯೋಜನೆ ಅಡಿ ಪ್ರತಿಯೊಂದು ಮನೆಗೆ ಪಡಿತರವನ್ನು ತಲುಪಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ. ರಾಜ್ಯದ ಮತದಾರರು ಉಪ್ಪು ತಿಂದು ನನಗೆ ದ್ರೋಹ ಮಾಡುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಹಾರ್ದೊಯ್ ನಾಲ್ಕನೇ ಹಂತದಲ್ಲಿ ಮತದಾನಕ್ಕೆ ಅಣಿಯಾಗಿದೆ. ರಾಜ್ಯದ ಹಾರ್ದೊಯ್ ಎಂಬಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಮೋದಿಯ ಉಪ್ಪನ್ನು ತಿಂದ ಮೇಲೆ ದ್ರೋಹವೆಸಗಲು ಬಯಸುವುದಿಲ್ಲ ಎಂಬ ವೃದ್ಧೆಯೊಬ್ಬರು ವರದಿಗಾರನಿಗೆ ನೀಡಿದ ಹೇಳಿಕೆಯ ವಿಡಿಯೋವನ್ನು ಉಲ್ಲೇಖಿಸಿದರು.
"ನಾವೆಲ್ಲರೂ ಭಾರತ ಮಾತೆಯ ಉಪ್ಪನ್ನು ತಿಂದಿದ್ದೇವೆ, ಹಿಂದೂಸ್ತಾನದ ಉಪ್ಪನ್ನು ತಿಂದಿದ್ದೇವೆ. ದೇಶದ ಬಡವರಿಗೆ ಅನ್ನ ನೀಡುವುದೇ ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಯಾವುದೇ ತಾರತಮ್ಯವಿಲ್ಲದೇ ಲಸಿಕೆ ವಿತರಣೆ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲಿ ನಾವು ಯಾವುದೇ ಧರ್ಮ, ಜಾತಿ ಮತ್ತು ಸಮುದಾಯವನ್ನು ನೋಡದೇ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿದ್ದೇವೆ. ಆದರೆ ವಿರೋಧ ಪಕ್ಷಗಳೇ ಭಾರತದಲ್ಲಿ ಉತ್ಪಾದಿಸುವ ಕೊವಿಡ್-19 ಲಸಿಕೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದರು. ಒಂದು ಹಂತದಲ್ಲಿ ಲಸಿಕೆ ಪಡೆದುಕೊಳ್ಳದಂತೆ ಸಾರ್ವಜನಿಕರಲ್ಲಿ ಅಪಪ್ರಚಾರವನ್ನು ಮಾಡುತ್ತಿದ್ದರು.
ಬಿಜೆಪಿ ಲಸಿಕೆ ಎಂದವರಿಗೆ ಪ್ರಧಾನಿ ತಿರುಗೇಟು:
ಕೊವಿಡ್-19 ಲಸಿಕೆಯು ಬಿಜೆಪಿಯ ಲಸಿಕೆ ಎಂದ ಅಖಿಲೇಶ್ ಯಾದವ್ ಹೇಳಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದರು. "ಇಂಥವರಿಗೆ ರಾಜ್ಯದ ಜನರು ಮಾರ್ಚ್ 10ರಂದು ಸರಿಯಾಗಿ ಉತ್ತರ ನೀಡುತ್ತಾರೆ. ಏಕೆಂದರೆ ಅದೇ ಬಿಜೆಪಿ ಲಸಿಕೆಯ ಪ್ರೇರೇಪಣೆಯಿಂದಾಗಿ ಮತದಾರರು ಕಮಲದ ಗುರುತಿಗೆ ತಮ್ಮ ಮತವನ್ನು ನೀಡುತ್ತಾರೆ," ಎಂದಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಕೊವಿಡ್-19 ಪಿಡುಗಿನ ಹಾವಳಿ ಹೆಚ್ಚಾಗಿದ್ದು, ಬಿಜೆಪಿಯು ಪ್ರಚಾರದ ಅಖಾಡದಿಂದ ಹಿಂದೆ ಸರಿಯುತ್ತಾರೆ ಎಂದು ರಾಜಕೀಯ ಮುಖಂಡರು ವಿಶ್ಲೇಷಿಸಿದ್ದಾರೆ. ಆದರೆ ಬಿಜೆಪಿಯ ಅದೇ ಲಸಿಕೆಯಿಂದಾಗಿ ಕೊರೊನಾವೈರಸ್ ಸಂಖ್ಯೆ ಇಳಿಮುಖವಾಗಿದೆ. ಅದರ ಪರಿಣಾಮದಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಹಿರಂಗ ಸಮಾವೇಶಗಳಲ್ಲಿ ಪ್ರಚಾರವನ್ನು ಮುಂದುವರಿಸುತ್ತಿದ್ದಾರೆ.
ಪರಿವಾರವಾದಿಗಳ ಕುಟುಂಬದಲ್ಲೇ ಕಿತ್ತಾಟ:
ಉತ್ತರ ಪ್ರದೇಶದಲ್ಲಿ ಪರಿವಾರವಾಗಿಗಳು ಅಧಿಕಾರ ಪಡೆದುಕೊಳ್ಳಲು ತಮ್ಮಲ್ಲಿಯೇ ಕಿತ್ತಾಡಿಕೊಳ್ಳುತ್ತಿವೆ ಎಂದ ಪ್ರಧಾನಿ ಮೋದಿ, ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಅವರ ಸರ್ಕಾರ ಬಂದರೆ ಅಕ್ರಮ ಬಂದೂಕು ಮಾರಾಟ, ಜೂಜು ಮತ್ತು ಮಾಫಿಯಾವಾದಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಂತೆ ಆಗುತ್ತದೆ ಎಂದರು. ಕೇವಲ ಒಂದು ಕುಟಂಬಕ್ಕಾಗಿ ಆಡಳಿತ ನಡೆಸುವ ಅಂಥ ಜನರಿಗೆ ಮಾರ್ಚ್ 10ರಂದು ಮತದಾರರು ಸರಿಯಾಗಿ ಉತ್ತರಿಸಲಿದ್ದಾರೆ ಎಂದು ಮೋದಿ ಹೇಳಿದರು.
ಬೆಳಕಿನ ಭರವಸೆ ನೀಡಿ ಕತ್ತಲೆಗೆ ತಳ್ಳುವರು:
ರಾಜ್ಯದಲ್ಲಿ ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದರೆ ರೈತರು ಮತ್ತು ಸಾಮಾನ್ಯರಿಗೆ 300 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಅಖಿಲೇಶ್ ಯಾದವ್ ಘೋಷಿಸಿದ್ದಾರೆ. ಇದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಹೊಸ ಬೆಳಕಿನ ಭರವಸೆಗಳನ್ನು ನೀಡುತ್ತಿರುವವರು ರಾಜ್ಯದ ಜನರನ್ನು ಕತ್ತಲೆಗೆ ತಳ್ಳುತ್ತಾರೆ ಎಂದು ಆರೋಪಿಸಿದರು.
ಫೆಬ್ರವರಿ 23ರಂದು ನಾಲ್ಕನೇ ಹಂತದ ಮತದಾನ:
ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯು ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಫೆಬ್ರವರಿ 23ರಂದು ಚುನಾವಣೆಯ ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದ ಒಟ್ಟು 403 ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್ 7ರಂದು ಅಂತಿಮ ಹಾಗೂ ಏಳನೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರ ಬೀಳಲಿದೆ.












Click it and Unblock the Notifications