ಉತ್ತರ ಪ್ರದೇಶ ಹಿಂಸಾಚಾರ: ಇನ್ಸ್ಪೆಕ್ಟರ್ ಹತ್ಯೆಯಲ್ಲಿ ಸೈನಿಕನ ಕೈವಾಡ?
ಲಕ್ನೋ, ಡಿಸೆಂಬರ್ 7: ಉತ್ತರ ಪ್ರದೇಶದ ಬುಲಂದ್ ಶಹರ್ನಲ್ಲಿ ಸೋಮವಾರ ನಡೆದ ಹಿಂಸಾಚಾರದ ವೇಳೆ ಪೊಲೀಸ್ ಅಧಿಕಾರಿಯ ಹತ್ಯೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.
ಘಟನೆಯ ತನಿಖೆ ನಡೆಸುತ್ತಿರುವ ಪೊಲೀಸರು, ಈ ಹತ್ಯೆಯ ಹಿಂದೆ ಜೀತು ಫೌಜಿ ಎಂಬ ಸೈನಿಕನ ಕೈವಾಡ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜೀತು ಫೌಜಿಯೇ ಇನ್ ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಈಗಲೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಆದರೆ, ಗಲಭೆಗೆ ಸಂಬಂಧಿಸಿದಂತೆ ನಡೆಸಿದ ತನಿಖೆಯಲ್ಲಿ ಆತನ ಮೇಲೆ ಶಂಕೆ ಮೂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಲಂದ್ ಶಹರ್ನಲ್ಲಿ ನಡೆದ ಗುಂಪು ಹಿಂಸಾಚಾರದ ವೇಳೆ ಜೀತು ಫೌಜಿ ವಿವಿಧ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾನೆ. ಹೀಗಾಗಿ ಆತನನ್ನು ಪತ್ತೆ ಮಾಡುವ ಸಲುವಾಗಿ ಎರಡು ಪೊಲೀಸ್ ತಂಡಗಳು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿವೆ.
ಜೀತು ತಾಯಿ ರತನ್ ಕೌರ್, ಹಿಂಸಾಚಾರದ ಘಟನೆಯ ವಿಡಿಯೋಗಳಲ್ಲಿ ತಮ್ಮ ಮಗನನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಆದರೆ, ಜೀತು ಕುಟುಂಬದ ಇತರೆ ಸದಸ್ಯರು ಹತ್ಯೆ ನಡೆದ ಸ್ಥಳದಲ್ಲಿನ ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು ಆತನೇ ಎಂದು ಖಚಿತಪಡಿಸಿದ್ದಾರೆ. ಘಟನೆ ಬಳಿಕ ಆತ ಕಾರ್ಗಿಲ್ಗೆ ಮರಳಿದ್ದಾನೆ ಎನ್ನಲಾಗಿದೆ.
'ಘಟನೆ ನಡೆದ ಸ್ಥಳದಿಂದ ಮನೆಗೆ ಬಂದ ಅವನು, ಮುಂದೆ ನೋಡು ನಾಟಕ ಎಂದು ಹೇಳಿ ಅದೇ ಸಂಜೆ ಕಾರ್ಗಿಲ್ಗೆ ವಾಪಸಾಗಿದ್ದ' ಎಂದು ಆತನ ಚಿಕ್ಕಮ್ಮ ಚಂದ್ರಾವತಿ ತಿಳಿಸಿದ್ದಾರೆ.
ಗಲಭೆಯಲ್ಲಿ ಭಾಗವಹಿಸಿದ್ದವರೇ ಚಿತ್ರೀಕರಿಸಿದ್ದ ವಿಡಿಯೋದಲ್ಲಿ ಜೀತು ಫೌಜಿಯಂತೆ ಕಾಣುವ ವ್ಯಕ್ತಿ ಸಿಂಗ್ ಅವರೊಂದಿಗೆ ಇದ್ದಿದ್ದು ಸೆರೆಯಾಗಿದೆ.
ಹಿಂಸಾಚಾರ ನಡೆದ ದಿನ ಹಳ್ಳಿಯಲ್ಲೇ ಇದ್ದ ಜೀತು, ಅದೇ ದಿನ ಸಂಜೆ ಕಾಶ್ಮೀರಕ್ಕೆ ಹೊರಟಿದ್ದಾನೆ. ಇತರೆ ವಿಡಿಯೋಗಳಲ್ಲಿಯೂ ವಿವಿಧೆಡೆ ಫೌಜಿ ಇರುವುದು ಕಾಣಿಸಿದೆ.












Click it and Unblock the Notifications