ಉತ್ತರ ಪ್ರದೇಶ: ಟ್ರಕ್ ಅಪಘಾತದಲ್ಲಿ ಆರು ಮಂದಿ ರೈತರು ಸಾವು
ನವದೆಹಲಿ, ಮೇ.20: ಭಾರತದಲ್ಲಿ ನಾಲ್ಕನೇ ಅವಧಿಯ ಲಾಕ್ ಡೌನ್ ಜಾರಿಯಲ್ಲಿದೆ. ಇದರ ನಡುವೆ ಉತ್ತರ ಪ್ರದೇಶದಲ್ಲಿ ಕೃಷಿ ಮಾರುಕಟ್ಟೆಯಿಂದ ವಾಪಸ್ ತೆರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ರೈತರು ಸಾವನ್ನಪ್ಪಿದ್ದು, ಒಬ್ಬ ರೈತ ಗಾಯಗೊಂಡಿದ್ದಾರೆ.
ಕಳೆದ ರಾತ್ರಿ ಉತ್ತರ ಪ್ರದೇಶದಲ್ಲಿ ಇಟಾವಾ ಜಿಲ್ಲೆಯ ಫ್ರೆಂಡ್ಸ್ ಕಾಲೋನಿ ಬಳಿ ಎರಡು ಟ್ರಕ್ ಗಳ ನಡುವೆ ಡಿಕ್ಕಿಯಾಗಿದ್ದು ಸ್ಥಳದಲ್ಲೇ 6 ಮಂದಿ ಪ್ರಾಣ ಬಿಟ್ಟಿದ್ದಾರೆ. ಕೃಷಿ ಮಾರುಕಟ್ಟೆಯಲ್ಲಿ ಹಲಸಿನ ಹಣ್ಣು ಮಾರಾಟ ಮಾಡಿ ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.
ಇನ್ನು, ಅಪಘಾತದಲ್ಲಿ ಒಬ್ಬ ರೈತ ಗಂಭೀರವಾಗಿ ಗಾಯಗೊಂಡಿದ್ದು ಸೈಫೈ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರೈತರ ಸಾವಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.

ಮೃತ ರೈತರ ಕುಟುಂಬಕ್ಕೆ 2 ಲಕ್ಷ ಪರಿಹಾರ:
ಉತ್ತರ ಪ್ರದೇಶದ ಇಟಾವಾ ಬಳಿ ನಡೆದ ಟ್ರಕ್ ಅಪಘಾತದಲ್ಲಿ ಮೃತಪಟ್ಟ ಆರು ಮಂದಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಇದರ ಜೊತೆಗೆ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.












Click it and Unblock the Notifications