ಯುಪಿ ಅಖಾಡದಲ್ಲಿ "ಬಾಹುಬಲಿ" ಮತ್ತು "ಭಜರಂಗಬಲಿ"ಯ ಮಾತು!
ಲಕ್ನೋ, ಫೆಬ್ರವರಿ 23: ಉತ್ತರ ಪ್ರದೇಶದಲ್ಲಿ ಈ ಹಿಂದೆ ಆಡಳಿತ ನಡೆಸಿದ ಸಮಾಜವಾದಿ ಪಕ್ಷದ ಅಧಿಕಾರವಧಿಯಲ್ಲಿನ ಕಾನೂನು ಸುವ್ಯವಸ್ಥೆ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಪ್ರತಾಪ್ಗಢ ಜಿಲ್ಲೆಯ ರಾಣಿಗಂಜ್ನಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಧೀರಜ್ ಓಜಾ ಪರ ಪ್ರಚಾರ ನಡೆಸಿದ ಅಮಿತ್ ಶಾ, ಸಮಾಜವಾದಿ ಪಕ್ಷ ಮತ್ತು ಅಖಿಲೇಶ್ ಯಾದವ್ ವಿರುದ್ಧ ವಾಕ್ಪ್ರಹಾರ ನಡೆಸಿದರು.
ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಸರ್ಕಾರವಿದ್ದಾಗ ಪ್ರತಿಯೊಂದು ಜಿಲ್ಲೆಗಳಲ್ಲಿ ದರೋಡೆಕೋರರೇ (ಬಾಹುಬಲಿ) ತುಂಬಿ ಹೋಗಿದ್ದರು. ಆದರೆ ದರೋಡೆಕೋರರು ಮತ್ತು ಕ್ರಿಮಿನಲ್ಗಳ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮ ತೆಗೆದುಕೊಂಡಿದ್ದರಿಂದ ಈಗ ಅದೇ ಜಿಲ್ಲೆಗಳಲ್ಲಿ 'ಭಜರಂಗಬಲಿ' (ಹನುಮಾನ್)ಗಳು ಮಾತ್ರ ಕಾಣುತ್ತಿದ್ದಾರೆ ಎಂದರು.

ಬಾಹುಬಲಿಗಳಿಲ್ಲ ಭಜರಂಗಬಲಿಗಳೇ ಇದ್ದಾರೆ:
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಎಲ್ಲಾ ಮಾಫಿಯಾ ಡಾನ್ಗಳು ಮತ್ತು ಗೂಂಡಾಗಳನ್ನು ನಾಶಪಡಿಸಿದೆ ಎಂದು ಪ್ರತಿಪಾದಿಸಿದ ಅಮಿತ್ ಶಾ, "ಅಬ್ ಬಾಹುಬಲಿ ನಹೀನ್, ಬಜರಂಗಬಲಿ ದಿಖ್ತೇ ಹೈ (ಬಾಹುಬಲಿಗಳಲ್ಲ, ಈಗ ಭಜರಂಗಬಲಿ ಭಗವಂತ ಎಲ್ಲೆಡೆ ಕಾಣುತ್ತಾನೆ)," ಎಂದು ಹೇಳಿದರು.
ಯುಪಿಯಲ್ಲಿ ಬಿಜೆಪಿ ಸರ್ಕಾರವನ್ನು ಶ್ಲಾಘಿಸಿದ ಶಾ, "ಕಳೆದ ಐದು ವರ್ಷಗಳಲ್ಲಿ, ಶೇ. 72ರಷ್ಟು ಡಕಾಯಿತಿ, ಶೇ.62ರಷ್ಟು ದರೋಡೆ ಘಟನೆಗಳು ಕಡಿಮೆಯಾಗಿದೆ. ಶೇ.30ರಷ್ಟು ಕೊಲೆ, ಶೇ.30ರಷ್ಟು ಅಪಹರಣ ಮತ್ತು ಶೇ.50ರಷ್ಟು ಅತ್ಯಾಚಾರ ಪ್ರಕರಣಗಳು ಇಳಿಕೆಯಾಗಿವೆ ಎಂದರು.
ಮಾಫಿಯಾ ಡಾನ್ಗಳನ್ನು ಓಡಿಸಲಾಗುವುದು:
ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಉಲ್ಲೇಖಿಸಿದ ಅಮಿತ್ ಶಾ, "ಯಾವುದೇ ಮಾಫಿಯಾ ನಿಮಗೆ ಎಲ್ಲಿಯಾದರೂ ತೊಂದರೆ ನೀಡುತ್ತಿವೆಯೇ? ಯಾರಾದರೂ ನಿಮ್ಮ ಭೂಮಿಯನ್ನು ಅತಿಕ್ರಮಿಸುತ್ತಿದ್ದಾರೆಯೇ? ತಾಯಿ ಮತ್ತು ಸಹೋದರಿಯರ ಗೌರವದೊಂದಿಗೆ ಓಡಾಡಬೇಕೇ?," ಯೋಗಿ ಸರ್ಕಾರವು ರಾಜ್ಯದಿಂದ ಮಾಫಿಯಾ ಡಾನ್ಗಳನ್ನು ರಾಜ್ಯದಿಂದಲೇ ಓಡಿಸುತ್ತದೆ ಎಂದು ಭರವಸೆ ನೀಡಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಮಾಫಿಯಾಗಳು ಮತ್ತು ಗೂಂಡಾಗಳಿಂದ 2,000 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಮುಕ್ತಗೊಳಿಸಿದೆ. ಈಗ ಅದೇ ಭೂಮಿಯಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಅಖಿಲೇಶ್ ಯಾದವ್ ವಿರುದ್ಧ ಸಿಡಿಮಿಡಿ:
"ರಾಜ್ಯದಲ್ಲಿ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅಧಿಕಾರಕ್ಕೆ ಬಂದರೆ, ಮುಕ್ತಾರ್ ಅನ್ಸಾರಿ, ಅತೀಕ್ ಅಹ್ಮದ್ ಮತ್ತು ಅಜಮ್ ಖಾನ್ ಜೈಲಿನಿಂದ ಹೊರಬರುತ್ತಾರೆ. ಜನರು ಅವರನ್ನು ಕಂಬಿಗಳ ಹಿಂದೆ ಇರಿಸಲು ಬಯಸುವುದಾದರೆ ಬಿಜೆಪಿಗೆ ಮತ ನೀಡಿ ಎಂದು ಅಮಿತ್ ಶಾ ಮನವಿ ಮಾಡಿಕೊಂಡರು.
ಬಿಜೆಪಿಗೆ ಮತ್ತೊಂದು ಅವಕಾಶ ಕೋರಿದ ಅಮಿತ್ ಶಾ:
ಉತ್ತರ ಪ್ರದೇಶದ ಜನರು 2014, ಮತ್ತು 2019ರ ಸಂಸತ್ ಚುನಾವಣೆ ಮತ್ತು 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರು. ಈಗ 2022ರಲ್ಲಿ ನಾಲ್ಕನೇ ಬಾರಿ ಹಾಗೂ ರಾಜ್ಯದಲ್ಲಿ ಎರಡನೇ ಬಾರಿ ಜಯಭೇಟಿ ಬಾರಿಸಲು ಮತ್ತೊಂದು ಅವಕಾಶವಿದೆ ಎಂದರು. ಮತ್ತೊಂದು ಅವಕಾಶವನ್ನು ಕೋರಿದ ಶಾ, "ಅಭಿವೃದ್ಧಿಗೆ ಸಂಬಂಧಿಸಿದಂತೆ ಯುಪಿಯನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಲಾಗುವುದು" ಎಂದು ಹೇಳಿದರು.












Click it and Unblock the Notifications