ಯುಪಿ ಚುನಾವಣೆಗೆ ಟಿಕೆಟ್ ನಿರಾಕರಣೆ: ಪಕ್ಷ ತೊರೆದ ಮತ್ತೊಬ್ಬ ಬಿಜೆಪಿ ಶಾಸಕ
ಲಕ್ನೋ, ಜನವರಿ 24: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳ ಮುನ್ನ ಆಗ್ರಾದ ಫತೇಹಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಜಿತೇಂದ್ರ ವರ್ಮಾ ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಹೇಳಿದ್ದಾರೆ.
ಮೊದಲ ಹಂತದ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಿತೇಂದ್ರ ವರ್ಮಾ ಅವರ ಹೆಸರು ಇರಲಿಲ್ಲ. ಅವರ ಸ್ಥಾನಕ್ಕೆ ಛೋಟೇಲಾಲ್ ವರ್ಮಾ ಅವರಿಗೆ ಟಿಕೆಟ್ ನೀಡಲಾಗಿದೆ.
ಉತ್ತರಪ್ರದೇಶ ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರಿಗೆ ಕಳುಹಿಸಿರುವ ಎರಡು ಸಾಲಿನ ರಾಜೀನಾಮೆ ಪತ್ರದಲ್ಲಿ ಜಿತೇಂದ್ರ ವರ್ಮಾ ಅವರು, "ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಅದನ್ನು ಸ್ವೀಕರಿಸಿ' ಎಂದು ಬರೆದಿದ್ದಾರೆ.

ನತರ ಪಿಟಿಐ ಜೊತೆ ಮಾತನಾಡಿದ ಜಿತೇಂದ್ರ ವರ್ಮಾ, ""ನಾನು ಬಿಜೆಪಿ ತೊರೆದಿದ್ದಕ್ಕೆ ಹಲವು ಕಾರಣಗಳಿವೆ, ಟಿಕೆಟ್ ನಿರಾಕರಿಸಿ 15 ದಿನಗಳಾದರೂ ಪಕ್ಷದ ನಾಯಕತ್ವ ನನ್ನೊಂದಿಗೆ ಮಾತನಾಡಿಲ್ಲ, ನಾನು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಮತ್ತು ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಜೆಪಿ ಕಾರ್ಯಕರ್ತರು ಮತ್ತು ಶಾಸಕರಿಗೆ ಪಕ್ಷದಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇಲ್ಲ ಎಂದು ಅವರು ಕಿಡಿಕಾರಿದರು.
ರೈತನಿಗೆ ರಸಗೊಬ್ಬರ ಕೊಡಲು ಸಾಧ್ಯವಾಗದೇ ಇದ್ದರೆ, ಶಾಸಕರಾಗಿದ್ದು ಏನು ಪ್ರಯೋಜನ? ನಾನಷ್ಟೇ ಅಲ್ಲ, ಇನ್ನೂ ಹಲವಾರು ಶಾಸಕರು ಬಿಜೆಪಿ ತೊರೆಯಲಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು. ವಿಧಾನಸಭೆ ಚುನಾವಣೆಗೂ ಮುನ್ನ ಹಲವು ಶಾಸಕರು ಪಕ್ಷ ತೊರೆದಿದ್ದು, ಬಿಜೆಪಿಗೆ ದೊಡ್ಡ ಹಿನ್ನಡೆ ಎನ್ನಬಹುದು.
ಇದಕ್ಕೂ ಮುನ್ನ ಉತ್ತರಪ್ರದೇಶದ ಸಚಿವರಾದ ಸ್ವಾಮಿ ಪ್ರಸಾದ್ ಮೌರ್ಯ, ದಾರಾ ಸಿಂಗ್ ಚೌಹಾಣ್ ಮತ್ತು ಧರಂ ಸಿಂಗ್ ಸೈನಿ ರಾಜೀನಾಮೆ ಸಲ್ಲಿಸಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಇತ್ತೀಚೆಗಷ್ಟೇ ಹಲವು ಶಾಸಕರು ಬಿಜೆಪಿ ಪಕ್ಷ ತೊರೆದಿದ್ದು, ಅವರೆಂದರೆ ಬ್ರಿಜೇಶ್ ಪ್ರಜಾಪತಿ (ಬಂದಾದಲ್ಲಿ ತಿಂದವಾರಿ), ರೋಶನ್ಲಾಲ್ ವರ್ಮಾ (ಶಹಜಹಾನ್ಪುರದಲ್ಲಿ ತಿಲ್ಹಾರ್), ಭಗವತಿ ಪ್ರಸಾದ್ ಸಾಗರ್ (ಕಾನ್ಪುರ್ ನಗರದಲ್ಲಿನ ಬಿಲ್ಹೌರ್), ವಿನಯ್ ಶಾಕ್ಯಾ (ಔರೈಯಾದಲ್ಲಿ ಬಿಧುನಾ), ದಿಗ್ವಿಜಯ್ ನಾರಾಯಣ್ ಅಲಿಯಾಸ್ ಜೈ ಚೌಬೆ (ಖಲೀಲಾಬಾದ್) ಬಹ್ರಾನಿಕ್ನಲ್ಲಿ ಮಾಧುರಿ ವರ್ಮ ಮತ್ತು ರಾಕೇಶ್ ರಾಥೋಡ್ (ಸೀತಾಪುರ).
ಏಳು ಹಂತಗಳಲ್ಲಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೊದಲ ಹಂತದಲ್ಲಿ ಫೆಬ್ರವರಿ 10ರಂದು 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
Recommended Video
ಮೊದಲ ಹಂತದಲ್ಲಿ ಶಾಮ್ಲಿ, ಮುಜಾಫರ್ನಗರ, ಬಾಗ್ಪತ್, ಮೀರತ್, ಗಾಜಿಯಾಬಾದ್, ಗೌತಮ್ ಬುದ್ಧ ನಗರ, ಹಾಪುರ್, ಬುಲಂದ್ಶಹರ್, ಅಲಿಗಢ್, ಮಥುರಾ ಮತ್ತು ಆಗ್ರಾ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 7ರಂದು ಅಂತಿಮ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications