ಕೊರೊನಾ ಭೀತಿ : ಅಯೋಧ್ಯೆಯಲ್ಲಿ ರಾಮನವಮಿ ಇಲ್ಲ
ಲಕ್ನೋ, ಮಾರ್ಚ್ 21 : ಕೊರೊನಾ ಹರಡುವ ಭೀತಿ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮನವಮಿ ಆಚರಿಸದಂತೆ ಸರ್ಕಾರ ಸೂಚನೆ ನೀಡಿದೆ. ಜಿಲ್ಲಾಡಳಿತ ಅಯೋಧ್ಯೆಗೆ ಹೊರಗಿನ ಜನರು ಬರದಂತೆ ನಿಷೇಧ ಹೇರಿದೆ.
ರಾಮನವಮಿಗೂ ಮೊದಲು ಸಾವಿರಾರು ಭಕ್ತಾದಿಗಳು ಅಯೋಧ್ಯೆಗೆ ಭೇಟಿ ನೀಡುತ್ತಿದ್ದರು. ಸರಯೂ ನದಿಯಲ್ಲಿ ಪುಣ್ಯ ಸ್ನಾನದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಭೀತಿ ಹಿನ್ನಲೆಯಲ್ಲಿ ಜನರು ಗುಂಪು ಗೂಡದಂತೆ ಸೂಚಿಸಲಾಗಿದೆ.
ಬೇರೆ ಜಿಲ್ಲೆಗಳಿಂದ ಅಯೋಧ್ಯೆಗೆ ಆಗಮಿಸುವ ಭಕ್ತರನ್ನು ಜಿಲ್ಲಾಡಳಿತ ಗಡಿಯಲ್ಲಿಯೇ ತಡೆದು ವಾಪಸ್ ಕಳಿಸಲಿದೆ. ವಿದೇಶಿಗರು, ಅಯೋಧ್ಯೆಗೆ ಹೊರಗಿನ ಜಿಲ್ಲೆಯವರಿಗೆ ಯಾವುದೇ ಹೋಟೆಲ್ನಲ್ಲಿ ಬುಕ್ಕಿಂಗ್ ನೀಡದಂತೆ ಜಿಲ್ಲಾಡಳಿತ ಶನಿವಾರ ಸೂಚನೆ ನೀಡಿದೆ.

ಇದುವರೆಗೂ ಉತ್ತರ ಪ್ರದೇಶದಲ್ಲಿ 24 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ, ಮುಂದಿನ ವಾರ ನಡೆಯಲಿರುವ ರಾಮನವಮಿ ಉತ್ಸವಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಈ ನಿರ್ಬಂಧ ಏಪ್ರಿಲ್ 2ರ ತನಕ ಜಾರಿಯಲ್ಲಿರುತ್ತದೆ.
ಉತ್ತರ ಪ್ರದೇಶದ ಜನರನ್ನು ಉದ್ದೇಶಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಬೆಂಬಲ ನೀಡಬೇಕು. ಭಾನುವಾರದ'ಜನತಾ ಕರ್ಫ್ಯೂ' ನಿಯಮವನ್ನು ಎಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.
2019ರ ನವೆಂಬರ್ನಲ್ಲಿ ಸುಪ್ರೀಂಕೋರ್ಟ್ ಅಯೋಧ್ಯೆ ವಿವಾದದ ಅಂತಿಮ ತೀರ್ಪನ್ನು ನೀಡಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು. ತೀರ್ಪಿನ ಬಳಿಕ ಮೊದಲ ರಾಮನವಮಿ ನಡೆಯುತ್ತಿದ್ದು, ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇತ್ತು.












Click it and Unblock the Notifications