ಉತ್ತರ ಪ್ರದೇಶ, ಸಿವೋಟರ್ ಸರ್ವೇ ಫಲಿತಾಂಶ: ಮತದಾರನ ಒಲವು ಯಾವ ಪಕ್ಷದತ್ತ?
ಎಲ್ಲಾ ರಾಜಕೀಯ ಪಕ್ಷಗಳು ಉತ್ತರ ಪ್ರದೇಶದಲ್ಲಿ ಮೇಲುಗೈ ಸಾಧಿಸಲು ಜಿದ್ದಿಗೆ ಬಿದ್ದಂತೆ ಪೈಪೋಟಿ ನಡೆಸುತ್ತದೆ. ಯಾಕೆಂದರೆ, ಅಲ್ಲಿ ಅಧಿಕಾರದಲ್ಲಿ ಇದ್ದರೆ, ಮುಂದೆ ಕೇಂದ್ರದಲ್ಲೂ ಹಿಡಿತ ಸಾಧಿಸಬಹುದು ಎನ್ನುವ ಲೆಕ್ಕಾಚಾರಕ್ಕಾಗಿ.
ಮುಂದಿನ ವರ್ಷದ ಮಾರ್ಚ್ ತಿಂಗಳೊಳಗೆ ಅಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬರಬೇಕಿದೆ. ಹಾಗಾಗಿ, ಮುಂದಿನ ಆರೇಳು ತಿಂಗಳುಗಳು ಪ್ರಮುಖವಾಗಿ ನಾಲ್ಕು ಪಕ್ಷಗಳಿಗೆ ನಿರ್ಣಾಯಕವಾಗಲಿದೆ.
ಸಮಾಜವಾದಿ ಪಕ್ಷ ಮತ್ತೆ ಅಧಿಕಾರಕ್ಕೇರುವ ತವಕದಲ್ಲಿದ್ದರೆ, ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ರಣತಂತ್ರ ರೂಪಿಸುತ್ತಿದೆ. ಇನ್ನು, ಕಾಂಗ್ರೆಸ್ ಮತು ಬಿಎಸ್ಪಿ ಕೂಡಾ ತನ್ನದೇ ಆದಂತಹ ಗೇಂ ಪ್ಲ್ಯಾನ್ ಗೆ ಮುಂದಾಗಿದೆ.
ದೇಶದ ರಾಜಕೀಯದಲ್ಲಿ ಪ್ರಭಾವವನ್ನು ಬೀರುವ ಉತ್ತರ ಪ್ರದೇಶದಲ್ಲಿನ ಮತದಾರರ ಒಲವು ಯಾವ ಪಕ್ಷದತ್ತ ಇದೆ, ಯಾರು ಮುಖ್ಯಮಂತ್ರಿಯಾಗಿರಬೇಕು ಎನ್ನುವ ವಿಚಾರದಲ್ಲಿ ನಡೆಸಿದ ಪ್ರಮುಖ ಸರ್ವೇ ಒಂದು ಹೊರಬಿದ್ದಿದೆ.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿತ್ತು
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿತ್ತು. ಸಮಾಜವಾದಿ ಪಕ್ಷ ಎರಡನೇ ಸ್ಥಾನದಲ್ಲಿತ್ತು. ಇನ್ನು ಬಿಎಸ್ಪಿ ಮತ್ತು ಕಾಂಗ್ರೆಸ್ ಪಾರ್ಟಿ ಗಣನೀಯ ಸಾಧನೆ ತೋರುವಲ್ಲಿ ಹಿಂದೆ ಬಿದ್ದಿತ್ತು. ಈಗ ಹೊರಬಿದ್ದಿರುವ ಸರ್ವೇ ಫಲಿತಾಂಶ ಕೂಡಾ ಅದನ್ನೇ ಹೇಳುತ್ತಿದೆ.

ಸಿವೋಟರ್ ಮತ್ತು ಟೈಮ್ಸ್ ನೌ ಜಂಟಿಯಾಗಿ ನಡೆಸಿದ ಸಮೀಕ್ಷೆ
ಸಿವೋಟರ್ ಮತ್ತು ಟೈಮ್ಸ್ ನೌ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ ಪೂರಕವಾದ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಮತ್ತು ಎಸ್ಪಿ ನಡುವಿನ ಅಂತರ ಬಹಳ ಹೆಚ್ಚಾಗಿರುವುದು ಸರ್ವೇಯಲ್ಲಿನ ಪ್ರಮುಖಾಂಶ. ಸರ್ವೇ ಪ್ರಕಾರ ಜನರ ಒಲವು ಬಿಜೆಪಿ ಮತ್ತು ಯೋಗಿಯತ್ತ ಮುಂದುವರಿದಿದೆ.

ಸರ್ವೇ ಪ್ರಕಾರ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಪರ ಜನರ ಒಲವು
ಸರ್ವೇ ಪ್ರಕಾರ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಪರ ಜನರ ಒಲವು ಹೆಚ್ಚಿದೆ. ಯೋಗಿ ಮುಖಂಡತ್ವದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ ಎನ್ನುವವರ ಸಂಖ್ಯೆ ಶೇ. 43.1ರಷ್ಟು. ಇನ್ನು, ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಶೇ.29.6ರಷ್ಟು ಜನ ಅಭಿಪ್ರಾಯ ಪಟ್ಟಿದ್ದಾರೆ.

ಯೋಗಿ ಸರಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ
ಉಳಿದಂತೆ, ಮಾಯಾವತಿ ನೇತೃತ್ವದ ಬಿಎಸ್ಪಿಯ ಮೇಲೆ ಶೇ. 10.1, ಕಾಂಗ್ರೆಸ್ ಪರವಾಗಿ ಶೇ. 8.1ರಷ್ಟು ಜನ ಒಲವು ತೋರಿದ್ದಾರೆ. ಇತರ ಪಕ್ಷಗಳ ಬಗ್ಗೆ ಶೇ. 3.1 ಒಲವು ತೋರಿದ್ದಾರೆ. ಇನ್ನು, ಯೋಗಿ ಸರಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದವರು ಶೇ. 31.7, ಅಧಿಕಾರ ನಿರ್ವಹಣೆ ಸರಿಯಿಲ್ಲ ಎಂದವರು ಶೇ. 23.4.












Click it and Unblock the Notifications