ರಾಜಕೀಯದತ್ತ ರಾಕೇಶ್ ಟಿಕಾಯತ್: ಬಿಕೆಯುನಿಂದ ಉಚ್ಚಾಟನೆ
ಲಕ್ನೋ ಮೇ 16: ಭಾರತೀಯ ಕಿಸಾನ್ ಒಕ್ಕೂಟಕ್ಕೆ ಸಂಬಂಧಿಸಿದ ದೊಡ್ಡ ಸುದ್ದಿ ಹೊರಬಿದ್ದಿದೆ. ರೈತರ ಆಂದೋಲನದ ಪ್ರಮುಖ ವ್ಯಕ್ತಿಯಾಗಿದ್ದ ರಾಕೇಶ್ ಟಿಕಾಯತ್ ಅವರಿಗೆ ಭಾರತೀಯ ಕಿಸಾನ್ ಒಕ್ಕೂಟದಿಂದ ಹೊರಹೋಗುವ ಮಾರ್ಗವನ್ನು ತೋರಿಸಲಾಗಿದೆ. ಜೊತೆಗೆ ಅವರ ಸಹೋದರ ನರೇಶ್ ಟಿಕಾಯತ್ ಅವರನ್ನೂ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ. ನರೇಶ್ ಟಿಕಾಯತ್ ಬದಲಿಗೆ ರಾಜೇಶ್ ಸಿಂಗ್ ಚೌಹಾಣ್ ಅವರನ್ನು ಬಿಕೆಯು ಅಧ್ಯಕ್ಷರನ್ನಾಗಿ ಮಾಡಲಾಗಿದ್ದು ಹರಿನಾಮ್ ಸಿಂಗ್ ವರ್ಮಾ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ.
ಲಕ್ನೋದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ: ಭಾರತೀಯ ಕಿಸಾನ್ ಯೂನಿಯನ್ನ ಸಂಸ್ಥಾಪಕ ದಿವಂಗತ ಚೌಧರಿ ಮಹೇಂದ್ರ ಸಿಂಗ್ ಟಿಕಾಯತ್ ಅವರ ಪುಣ್ಯತಿಥಿಯ ಸಂದರ್ಭದಲ್ಲಿ (ಮೇ 15) ಭಾನುವಾರದಂದು ಲಕ್ನೋದ ಶುಗರ್ಕೇನ್ ಇನ್ಸ್ಟಿಟ್ಯೂಟ್ನಲ್ಲಿ BKU ನಾಯಕರ ದೊಡ್ಡ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ರಾಕೇಶ್ ಟಿಕಾಯತ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು ಮತ್ತು ನರೇಶ್ ಟಿಕಾಯತ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಯಿತು. ಸದ್ಯ ರಾಷ್ಟ್ರೀಯ ಉಪಾಧ್ಯಕ್ಷ ರಾಜೇಶ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಹೊಸ ಬಿಕೆಯು (ರಾಜಕೀಯೇತರ) ರಚಿಸಲಾಗಿದೆ.

ಅಧ್ಯಕ್ಷ ರಾಜೇಶ್ ಸಿಂಗ್
ರಾಜೇಶ್ ಸಿಂಗ್ ಚೌಹಾಣ್ ಅವರು ಬಿಕೆಯು (ರಾಜಕೀಯೇತರ) ರಾಷ್ಟ್ರೀಯ ಅಧ್ಯಕ್ಷರಾದ ನಂತರ ಲಕ್ನೋದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. 'ನನ್ನ 33 ವರ್ಷಗಳ ಸಂಘಟನೆಯ ಇತಿಹಾಸದಲ್ಲಿ ಈಗ ಭಾರತೀಯ ಕಿಸಾನ್ ಯೂನಿಯನ್ (ರಾಜಕೀಯೇತರ) ರಚನೆಯಾಗಿದೆ' ಎಂದರು. '13 ತಿಂಗಳ ಆಂದೋಲನದ ನಂತರ ನಾವು ಮನೆಗೆ ಬಂದಾಗ, ನಮ್ಮ ನಾಯಕ ರಾಕೇಶ್ ಟಿಕಾಯಿತ್ ರಾಜಕೀಯ ಪ್ರೇರಿತರಾಗಿ ಕಾಣಿಸಿಕೊಂಡರು. ನಮ್ಮ ನಾಯಕರು ಯಾವುದೋ ರಾಜಕೀಯ ಪಕ್ಷದ ಪ್ರಭಾವಕ್ಕೆ ಒಳಗಾಗಿ ಒಂದು ಪಕ್ಷದ ಪರ ಪ್ರಚಾರ ಮಾಡುವಂತೆ ಆದೇಶ ನೀಡಿರುವುದನ್ನು ನೋಡಿದ್ದೇವೆ. ನನ್ನ ಕೆಲಸ ರಾಜಕೀಯ ಮಾಡುವುದು ಅಥವಾ ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದು ಅಲ್ಲ. ರೈತ ಪರ ಹೋರಾಟವೇ ನನ್ನ ಕೆಲಸ. ನಾನು ಯಾವುದೇ ವಿವಾದ ಸೃಷ್ಟಿಸಲು ಬಯಸುವುದಿಲ್ಲ. ಇದೊಂದು ಹೊಸ ಸಂಸ್ಥೆಯಾಗಿದೆ ಇದನ್ನು ಗೌರವಿಸಿ' ಎಂದಿದ್ದಾರೆ.

ಯಶಸ್ವಿ ಕಾಣದ BKU
ರಾಕೇಶ್ ಟಿಕಾಯತ್ ಶುಕ್ರವಾರದಿಂದ ಲಕ್ನೋದಲ್ಲಿ ತಂಗುವ ಮೂಲಕ ಬಿಕೆಯು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ತೊಡಗಿದ್ದರು. ಆದಾಗ್ಯೂ, ಅವರು ಯಶಸ್ವಿಯಾಗಲಿಲ್ಲ. ರಾಕೇಶ್ ಟಿಕಾಯತ್ ಅವರ ರಾಜಕೀಯ ದೃಷ್ಟಿಕೋನದಿಂದ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಹೇಳಲಾಗುತ್ತಿದೆ. ರಾಕೇಶ್ ಟಿಕಾಯತ್ ಈಗ ರೈತರ ಸಮಸ್ಯೆಗಳನ್ನು ಬಿಟ್ಟು ರಾಜಕೀಯದತ್ತ ಮುಖ ಮಾಡುತ್ತಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರ್ದಿಷ್ಟ ಪಕ್ಷವನ್ನು ವಿರೋಧಿದ ಟಿಕಾಯತ್
ಇತ್ತೀಚೆಗೆ ನಡೆದ ಯುಪಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ನಿರ್ದಿಷ್ಟ ಪಕ್ಷವನ್ನು ವಿರೋಧಿಸುವ ಟಿಕಾಯತ್ ಬಗ್ಗೆ BKU ನಾಯಕರು ಆಕ್ಷೇಪಣೆಗಳನ್ನು ಎತ್ತಿದ್ದರು. ಬಿಕೆಯು ಉದ್ದೇಶ ಯಾವುದೇ ಪಕ್ಷವನ್ನು ದೂರುವುದಲ್ಲ ಅಥವಾ ಕಡೆಗಣಿಸುವುದಿಲ್ಲ. ಹೀಗಾಗಿ ಅವರು ರಾಜಕೀಯದತ್ತ ಮುಳ ಮಾಡಿದ್ದಾರೆ ಎಂದು ಆರೋಪಿಲಾಗಿದೆ. ಸಂಘಟನೆಯೊಳಗೆ ಗೊಂದಲವನ್ನು ಅನುಭವಿಸಿದ ರಾಕೇಶ್ ಟಿಕಾಯತ್ ಅವರು ಶುಕ್ರವಾರ ಲಕ್ನೋಗೆ ಭೇಟಿ ನೀಡಿದ್ದರು ಮತ್ತು ಬಂಡಾಯಗಾರರೊಂದಿಗೆ ಚರ್ಚೆ ನಡೆಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ಕೃಷಿ ಕಾಯ್ದೆ ವಿರೋಧಿಸಿದ್ದ ಬಿಕೆಯು
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿದ್ದ ಬಿಕೆಯು ಹಲವು ಬೇಡಿಕೆಗಳನ್ನು ಮುಂದಿಟ್ಟಿತ್ತು. ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಕಾನೂನು, ವಿದ್ಯುತ್ ಬಿಲ್ ಮತ್ತು ಪಾರಾಲಿ ಬಿಲ್ ಜಂಕ್, ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವುದು, ಆಂದೋಲನದ ವೇಳೆ ಮೃತಪಟ್ಟ 700 ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು. ಇದಲ್ಲದೇ ನವದೆಹಲಿಯ ಕೆಂಪು ಕೋಟೆ ಹಿಂಸಾಚಾರದ ಸಂದರ್ಭದಲ್ಲಿ ದಾಖಲಿಸಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು ಮುಂತಾದ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಅಸ್ತು ಎಂಬ ಬಳಿಕ ಪ್ರತಿಭಟನೆಯನ್ನು ರೈತ ಸಮುದಾಯ ಹಿಂದಕ್ಕೆ ಪಡೆದುಕೊಂಡಿತ್ತು.












Click it and Unblock the Notifications