'ಈ ಪಾಪಿಗಳು ದೇವಿ ಲಕ್ಷ್ಮಿಯನ್ನು ಗೋಡೆಯಲ್ಲಿ ಬಂಧಿಸಿದ್ದಾರೆ': ಯೋಗಿ ವಾಗ್ದಾಳಿ
ಲಕ್ನೋ, ಡಿಸೆಂಬರ್ 28: "ನೋಟು ಅಮಾನೀಕರಣಕ್ಕೆ 2016 ರಲ್ಲಿ ಎಸ್ಪಿ ಹಾಗೂ ಬಿಎಸ್ಪಿ ನಾಯಕರು ಯಾಕೆ ವಿರೋಧ ಮಾಡಿದ್ದರು ಎಂಬುವುದು ತೆರಿಗೆ ಇಲಾಖೆಗಳು ಎಸ್ಪಿ, ಬಿಎಸ್ಪಿ ನಾಯಕರುಗಳ ಮನೆ, ಸಂಸ್ಥೆಯ ಮೇಲೆ ದಾಳಿ ನಡೆಸಿ ಭಾರೀ ಹಣ ಲಭಿಸಿದಾಗ ತಿಳಿದು ಬಂದಿದೆ," ಎಂದು ಹೇಳಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಈ ಪಾಪಿಗಳು ದೇವಿ ಲಕ್ಷ್ಮಿಯನ್ನು ಗೋಡೆಯಲ್ಲಿ ಬಂಧಿಸಿರಿಸಿದ್ದರು," ಎಂದು ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭ ಮಾಡಿದೆ. ಈ ನಡುವೆ ಬಿಜೆಪಿ ಹಲವಾರು ಯೋಜನೆಗಳನ್ನು ಜಾರಿ ಮಾಡುವ ಮೂಲಕ ಚುನಾವಣಾ ಕಾರ್ಯತಂತ್ರವನ್ನು ರೂಪಿಸಿದೆ. ಹಾಗೆಯೇ ಉತ್ತರ ಪ್ರದೇಶದಲ್ಲಿ ವಿರೋಧ ಪಕ್ಷಗಳು ಹಾಗೂ ಆಡಳಿತರೂಢ ಪಕ್ಷಗಳ ನಾಯಕರುಗಳು ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದಾರೆ. ಸೀತಾಪುರದಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಕಾನ್ಪುರದ ಉದ್ಯಮಿ ಪಿಯೂಷ್ ಜೈನ್ ಮನೆಯಲ್ಲಿ ಭಾರೀ ಹಣ ಲಭ್ಯವಾದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಕಾನ್ಪುರದ ಉದ್ಯಮಿ ಪಿಯೂಷ್ ಜೈನ್ ಸಮಾಜವಾದಿ ಪಕ್ಷದ ನಾಯಕರುಗಳಿಗೆ ಆಪ್ತರು ಎಂದು ಬಿಜೆಪಿಯ ಹೇಳಿಕೊಂಡಿದೆ.
ಜೈನ್ ಮನೆಯಲ್ಲಿ ಮುಂದುವರೆದ ಐಟಿ ಶೋಧ: 284 ಕೋಟಿ ರೂ. ಪತ್ತೆ
"ನಾವೆಲ್ಲರೂ ದೀಪಾವಳಿ ಸಂದರ್ಭದಲ್ಲಿ ದೇವಿ ಲಕ್ಷ್ಮಿ ನಮ್ಮ ಮನೆಗೆ ಆಗಮಿಸುತ್ತಾಳೆ ಎಂದು ನಂಬಿಕೆ ಇಟ್ಟುಕೊಂಡಿದ್ದೇವೆ. ಆದರೆ ಈ ಪಾಪಿಗಳು ದೇವಿ ಲಕ್ಷ್ಮಿಯನ್ನು ಗೋಡೆಯಲ್ಲಿ ಬಂಧಿಸಿದ್ದಾರೆ. ಸಮಾಜವಾದಿ ನಾಯಕರುಗಳ ಮನೆಯ ಗೋಡೆಯಲ್ಲಿ ದೇವಿ ಲಕ್ಷ್ಮಿ ಹೊರಬರುತ್ತಿರುವುದನ್ನು ನೀವು ನೋಡಿಲ್ಲವೇ,?" ಎಂದು ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.
"ಬಂಡಲ್ಗಟ್ಟಲೆ ನೋಟುಗಳು, ಲೆಕ್ಕ ಮಾಡಲು ಸಾಧ್ಯವಾಗದಷ್ಟು ಬಂಡಲುಗಟ್ಟಲೆ ನೋಟುಗಳು, ಮೂರನೇ ದಿನ ಕೂಡಾ ಲೆಕ್ಕ ಮಾಡಲಾಗುತ್ತಿದೆ. ಇನ್ನೂ ಕೂಡಾ ಲೆಕ್ಕ ಪೂರ್ತಿಯಾಗಿಲ್ಲ," ಎಂದು ಕಾನ್ಪುರ ದಾಳಿಯ ಬಗ್ಗೆ ಉಲ್ಲೇಖಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಬುವಾ-ಬಾಬುವ ಯಾಕೆ ನೋಟು ಅಮಾನೀಕರಣ ವಿರೋಧಿಸಿದ್ದರು?
"ಸಹೋದರ ಸಹೋದರಿಯರೇ ಈ ಬುವಾ ಹಾಗೂ ಬಾಬುವ ಈ ನೋಟ ಅಮಾನೀಕರಣವನ್ನು ಯಾಕೆ ವಿರೋಧ ಮಾಡಿದ್ದರು ಎಂಬುವುದು ನಿಮಗೆ ಈಗ ತಿಳಿಯಿತೇ," ಎಂದು ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ. ಯೋಗಿ ಆದಿತ್ಯನಾಥ್ ವಿರೋಧ ಪಕ್ಷ ಬಿಎಸ್ಪಿ ನಾಯಕಿ ಮಾಯಾವತಿಯನ್ನು ಬುವಾ ಹಾಗೂ ಎಸ್ಪಿ ನಾಯಕ ಅಖಿಲೇಶ್ ಯಾದವ್ರನ್ನು ಬಾಬುವಾ ಎಂದು ಟೀಕೆ ಮಾಡುವ ಸಂದರ್ಭದಲ್ಲಿ ಕರೆಯುತ್ತಾರೆ.
ಕಾನ್ಪುರ ಉದ್ಯಮಿ ಮನೆ ಮೇಲೆ ದಾಳಿ: ಈವರೆಗೆ 187 ಕೋಟಿ ವಶ
ಏನಿದು ಉದ್ಯಮಿ ಪಿಯೂಷ್ ಜೈನ್ ಐಟಿ ದಾಳಿ ಪ್ರಕರಣ?
ಸುಮಾರು ಮೂರು ದಿನಗಳಿಂದ ಕಾನ್ಪುರ ಮೂಲದ ಸುಗಂಧ ದ್ರವ್ಯ ತಯಾರಕ ಪಿಯೂಷ್ ಜೈನ್ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಶೋಧ ನಡೆಸಿದ್ದಷ್ಟು ಚಿನ್ನಾಭರಣ ಹಣ ಲಭ್ಯವಾಗುತ್ತಿದೆ. ಕಾನ್ಪುರ ಮತ್ತು ಕನೌಜ್ನಲ್ಲಿರುವ ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ಅವರ ನಿವಾಸದ ಮೇಲೆ 120 ಗಂಟೆಗಳ ದಾಳಿಯಲ್ಲಿ, ಜಿಎಸ್ಟಿ ಗುಪ್ತಚರ ಮಹಾನಿರ್ದೇಶನಾಲಯ (ಡಿಜಿಜಿಐ) ಜಂಟಿ ತಂಡವು 284 ಕೋಟಿ ರೂ.ಗೂ ಹೆಚ್ಚು ನಗದು ವಶಪಡಿಸಿಕೊಂಡಿದೆ. ಇದಲ್ಲದೇ ಪಿಯೂಷ್ ಜೈನ್ ಮನೆಯಲ್ಲಿ ನಡೆದ ದಾಳಿ ವೇಳೆ 16 ದುಬಾರಿ ಆಸ್ತಿಗಳ ದಾಖಲೆಗಳು ಪತ್ತೆಯಾಗಿವೆ. ಇವುಗಳಲ್ಲಿ ಕಾನ್ಪುರದಲ್ಲಿ 4, ಕನೌಜ್ನಲ್ಲಿ 7, ಮುಂಬೈನಲ್ಲಿ 2 ಮತ್ತು ದೆಹಲಿಯಲ್ಲಿ 1 ಆಸ್ತಿಗಳಿವೆ. ದುಬೈನಲ್ಲಿ ಎರಡು ಆಸ್ತಿಗಳನ್ನು ಪತ್ತೆಹಚ್ಚಲಾಗಿದೆ. ನಗದು ಮತ್ತು ಆಸ್ತಿ ಪತ್ರಗಳಲ್ಲದೆ, ಪಿಯೂಷ್ ಜೈನ್ ಅವರ ಮನೆಯಲ್ಲಿ ಹಲವಾರು ಕಿಲೋಗ್ರಾಂಗಳಷ್ಟು ಚಿನ್ನವನ್ನು ಸಹ ವಶಪಡಿಸಿಕೊಳ್ಳಲಾಗಿದೆ. (ಒನ್ಇಂಡಿಯಾ ಸುದ್ದಿ)
Recommended Video