ದೆಹಲಿ ಧರ್ಮಸಭೆಯಲ್ಲಿ 65 ವಿದೇಶಿಗರು; ಕೇಸ್ ಹಾಕಿದ ಪೊಲೀಸರು
ನವದೆಹಲಿ, ಏಪ್ರಿಲ್.03: ದೆಹಲಿಯ ನಿಜಾಮುದ್ದೀನ್ ಮರ್ಕಾಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗವಹಿಸಿದ 65 ಮಂದಿ ವಿದೇಶಿಗರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Recommended Video
ಭಾರತ ಲಾಕ್ ಡೌನ್ ನಡುವೆಯೂ ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗಿಯಾದ 65 ವಿದೇಶಿಗರ ಪೈಕಿ 57 ಜನರನ್ನು ಶಹಾಪುರ್ ಮತ್ತು 8 ಜನರನ್ನು ಕಾನ್ಪುರ್ ನಲ್ಲಿ ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ.
ಕೊರೊನಾ ಭೀತಿ ನಡುವೆ ಮೌಲಾನಾ ಸಾದ್ ಆಡಿದ್ದು ಅದೆಂಥ ಮಾತು?
ಶಹಾಪುರ ಎಸ್ಎಸ್ ಪಿ ದಿನೇಶ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 65 ವಿದೇಶಿಗರನ್ನು ಇಲ್ಲಿಯೇ ಇರಿಸಿಕೊಂಡಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದರು. ಇನ್ನು, ಉತ್ತರ ಪ್ರದೇಶದಿಂದ ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ 20 ಮಂದಿ ಭಾಗಿಯಾಗಿದ್ದು ಎಲ್ಲರನ್ನೂ ದಿಗ್ಬಂಧನದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
ದೆಹಲಿಯ ತಬ್ಲಿಘಿ ಜಮಾತ್ ಧರ್ಮಸಭೆಯಲ್ಲಿ ಭಾಗಿಯಾಗಿ ಬಂದು ಉತ್ತರ ಪ್ರದೇಶದ ಕಾನ್ಪುರ್ ನಲ್ಲಿ ಇರುವ ಬಾಬು ಪೂರ್ವ ಪ್ರದೇಶದಲ್ಲಿ ಇರುವ ಮಸೀದಿಯಲ್ಲಿ ಉಳಿದುಕೊಂಡಿದ್ದ ಎಂಟು ಮಂದಿ ವಿದೇಶಿಗರನ್ನು ಕೂಡಾ ದಿಗ್ಬಂಧನದಲ್ಲಿ ಇರಿಸಲಾಗಿದ್ದು, ಎಲ್ಲರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಕಳೆದ ಮಾರ್ಚ್.01ರಿಂದ 15ರವರೆಗೂ ದೆಹಲಿಯ ನಿಜಾಮುದ್ದೀನ್ ಮರ್ಕಾಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಎಂಬ ಧರ್ಮಸಭೆಯಲ್ಲಿ ಭಾಗವಹಿಸಿದವರಲ್ಲಿ ಸೋಂಕು ಪತ್ತೆಯಾಗಿದ್ದು, ದೇಶಾದ್ಯಂತ ಸೋಂಕಿತರ ಸಂಖ್ಯೆ ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.