ನೋಯ್ಡಾ ಏರ್ಪೋರ್ಟ್: ಚುನಾವಣೆ ಸಂದರ್ಭ ಸರ್ಕಾರದ ಈ ಕ್ರಮ ಅನುಮಾನಕಾರಿ ಎಂದ ಮಾಯಾವತಿ
ಲಕ್ನೋ, ನವೆಂಬರ್ 25: ಪ್ರಧಾನಿ ನರೇಂದ್ರ ಮೋದಿ ಅವರು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಶಂಕುಸ್ಥಾಪನೆ ಮಾಡಿದ್ದಾರೆ. ಈ ಬೆನ್ನಲ್ಲೇ ವಿರೋಧ ಪಕ್ಷಗಳು ವಾಗ್ದಾಳಿ ಆರಂಭ ಮಾಡಿದೆ. ಬಿಎಸ್ಪಿ ವರಿಷ್ಠೆ ಮಾಯಾವತಿ, "ಚುನಾವಣೆ ಸಂದರ್ಭದಲ್ಲಿ ಸರ್ಕಾರದ ಇಂತಹ ಕ್ರಮಗಳ ಉದ್ದೇಶ ಹಾಗೂ ನೀತಿ ಬಗ್ಗೆ ನಮಗೆ ಅನುಮಾನ ಉಂಟಾಗಿದೆ," ಎಂದು ತಿಳಿಸಿದರು.
ಇನ್ನು ಈಗಾಗಲೇ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕು ಸ್ಥಾಪನೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್, "ಬಿಜೆಪಿ ಪಕ್ಷವು ನೋಯ್ಡಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಾರಾಟ ಮಾಡುವ ಉದ್ದೇಶದಿಂದಲೇ ನಿರ್ಮಾಣ ಮಾಡುತ್ತಿದೆ," ಎಂದು ಆರೋಪ ಮಾಡಿದ್ದಾರೆ. ಈ ನಡುವೆ ಬಿಎಸ್ಪಿ ನಾಯಕಿ, "ಚುನಾವಣೆ ನಡುವೆ ಬಿಜೆಪಿಯ ಇಂತಹ ಕ್ರಮಗಳು ಅನುಮಾನವನ್ನು ಹುಟ್ಟು ಹಾಕುತ್ತದೆ," ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ತನ್ನ ಆಡಳಿತ ಅವಧಿಯಲ್ಲಿ ತಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಗಂಗಾ ಎಕ್ಸ್ಪ್ರೆಸ್ವೇ ಮೂಲಕ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡಿತ್ತು. ಆದರೆ ಕೇಂದ್ರದಲ್ಲಿ ಇದ್ದ ಕಾಂಗ್ರೆಸ್ ಸರ್ಕಾರ ಮಾತ್ರ ಅದಕ್ಕೆ ಅಡೆತಡೆಯನ್ನು ಉಂಟು ಮಾಡಿತ್ತು ಎಂದು ಆರೋಪವನ್ನು ಮಾಡಿದ್ದಾರೆ.

ಈ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ
"ಉತ್ತರ ಪ್ರದೇಶದಲ್ಲಿ ಉದ್ಯೋಗ ಹಾಗೂ ಅಭಿವೃದ್ಧಿಗೆ ಹೊಸ ಆಯಾಮವನ್ನು ನಮ್ಮ ಬಿಎಸ್ಪಿ ಸರ್ಕಾರವು ನೀಡಿತ್ತು. ನಮ್ಮ ಸರ್ಕಾರವು ತಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಗೌತಮ್ ಬುದ್ ನಗರದ ಜೆವಾರ್ ಪ್ರದೇಶದಲ್ಲಿ ವಾಯುಯಾನ ಕೇಂದ್ರ ಮತ್ತು ನೋಯ್ಡಾದಿಂದ ಬಲ್ಲಿಯಾಗೆ 8-ಲೇನ್ ಗಂಗಾ ಎಕ್ಸ್ಪ್ರೆಸ್ವೇ ಮೂಲಕ ಉದ್ಯೋಗ ಹಾಗೂ ಅಭಿವೃದ್ಧಿಗೆ ಹೊಸ ಆಯಾಮವನ್ನು ನಮ್ಮ ಬಿಎಸ್ಪಿ ಸರ್ಕಾರವು ನೀಡಿತ್ತು. ಆದರೆ ಎಲ್ಲಾ ಸಿದ್ಧತೆಗಳ ಬಳಿಕ ಕಾಂಗ್ರೆಸ್ನ ಕೇಂದ್ರ ಸರ್ಕಾರವು ಯಾವುದೇ ಸಹಕಾರವನ್ನು ನಮಗೆ ನೀಡಿಲ್ಲ," ಎಂದು ಮಾಯಾವತಿ ತನ್ನ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅನುಮಾನ ಮೂಡುವುದು ಸಹಜ ಎಂದ ಮಾಯಾವತಿ
ಇನ್ನು ತನ್ನ ಮತ್ತೊಂದು ಟ್ವೀಟ್ನಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ, "ಈ ಮಹತ್ವಾಕಾಂಕ್ಷೆಯ ಯೋಜನೆಗಳ ಅಡಿಪಾಯವನ್ನು ಮೊದಲ ಎಸ್ಪಿ ಮತ್ತು ಈಗ ಬಿಜೆಪಿ ಸರ್ಕಾರದ ಅಧಿಕಾರ ಅವಧಿ ಮುಗಿದು ಹಲವಾರು ವರ್ಷಗಳ ನಂತರ ಹಾಕಲಾಗಿದೆ. ಆದರೆ ಇಂತಹ ಅಭಿವೃದ್ಧಿ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು. ಆದರೆ ಈಗ ಚುನಾವಣೆಗೂ ಮುನ್ನ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ ಮಾಡಿದಾಗ ಸರ್ಕಾರದ ಉದ್ದೇಶ ಹಾಗೂ ನೀತಿಯ ಬಗ್ಗೆ ಅನುಮಾನ ಮೂಡುವುದು ಸಹಜ," ಎಂದು ಕೂಡಾ ಮಾಯಾವತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಮಾಯಾವತಿ ತನ್ನ ಮೂರನೇ ಟ್ವೀಟ್ನಲ್ಲಿ, "ಇದರೊಂದಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸದೆ ಭೂಸ್ವಾಧೀನಪಡಿಸಿಕೊಂಡಿರುವ ಬಗ್ಗೆಯೂ ಮಾನ್ಯ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸರ್ಕಾರ ಯಾರದೇ ಆಗಿರಲಿ, ಬಿಎಸ್ಪಿ ಎಂದಿಗೂ ಬಡತನ, ನಿರುದ್ಯೋಗ, ಹಿಂದುಳಿದ ವರ್ಗಕ್ಕಾಗಿ ದುಡಿಯುತ್ತದೆ. ಉತ್ತರ ಪ್ರದೇಶವನ್ನು ವಲಸೆ ಮುಕ್ತ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬೆಂಬಲ ನೀಡುತ್ತದೆ," ಎಂದರು.
2. पहले सपा व अब भाजपा सरकार का कार्यकाल गुजरने के लगभग एक दशक बाद इन महत्त्वाकांक्षी योजनाओं का शिलान्यास हुआ है, जबकि विकास के ऐसे कामों को समय से शुरू होकर पूरा भी हो जाना चाहिए था। किन्तु अब चुनाव के समय इसकी नींव रखे जाने पर सरकार की नीयत व नीति पर शक उठना स्वाभाविक।
— Mayawati (@Mayawati) November 25, 2021
ಗೌತಮ್ ಬುದ್ಧ ನಗರದಲ್ಲಿ ಜೇವಾರ್ ಬಳಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆಯನ್ನು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ್ದಾರೆ. ಈ ವಿಚಾರದಲ್ಲಿ ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಕೂಡಾ ಸರ್ಕಾರವನ್ನು ಟೀಕೆ ಮಾಡಿದ್ದಾರೆ. "ಬಿಜೆಪಿಯು ಈಗ ಎಲ್ಲಾ ವಿಮಾನ ನಿಲ್ದಾಣಗಳನ್ನು ಮಾರಾಟ ಮಾಡುತ್ತಿದೆ. ಈ ನಡುವೆ ಮಾರಾಟ ಮಾಡುವ ಉದ್ದೇಶದಿಂದಲೇ ಹೊಸ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುತ್ತಿದೆ. ಒಂದು ಕಡೆಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿ, ಇನ್ನೊಂದು ಕಡೆಯಲ್ಲಿ ವಿಮಾನ ನಿಲ್ದಾಣವನ್ನು ಮಾರಾಟ ಮಾಡುವ ಬಿಜೆಪಿಯನ್ನು ನಂಬುವುದು ಹೇಗೆ," ಎಂದು ಪ್ರಶ್ನಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications