ದೊಡ್ಡ ಪಕ್ಷಗಳ ಜತೆಗೆ ಮೈತ್ರಿ ಇಲ್ಲ: ಅಖಿಲೇಶ್
ಲಕ್ನೋ, ನವೆಂಬರ್ 14: ತಮ್ಮ ಪಕ್ಷದಿಂದ ಬೇರ್ಪಟ್ಟಿರುವ ಚಿಕ್ಕಪ್ಪನ ಪ್ರಗತಿಶೀಲ ಸಮಾಜವಾದಿ ಪಕ್ಷದೊಂದಿಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ವೇಳೆ ಚುನಾವಣಾ ಮೈತ್ರಿಯ ಸುಳಿವು ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ರಾಜ್ಯದಲ್ಲಿ ತಮ್ಮ ಪಕ್ಷವು ಸರ್ಕಾರ ರಚಿಸಿದರೆ ಶಿವಪಾಲ್ ಯಾದವ್ ಅವರಿಗೆ ಸಂಪುಟ ಸ್ಥಾನ ನೀಡುವುದಾಗಿ ಘೋಷಿಸಿದ್ದಾರೆ.
ಆದರೆ, ಮುಂದಿನ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜಪಕ್ಷದೊಂದಿಗೆ ಯಾವುದೇ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
'ಸಣ್ಣ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಆದರೆ ದೊಡ್ಡ ಪಕ್ಷಗಳ ಜತೆಗೆ ಯಾವುದೇ ಮೈತ್ರಿ ಇರುವುದಿಲ್ಲ' ಎಂದು ಅಖಿಲೇಶ್ ಯಾದವ್ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಚಿಕ್ಕಪ್ಪ ಶಿವಪಾಲ್ ಯಾದವ್ ಅವರ ಪ್ರಗತಿಶೀಲ್ ಸಮಾಜವಾದಿ ಪಕ್ಷದ ಜತೆಗೆ ಸಮಾಜವಾದಿ ಪಕ್ಷವು ಚುನಾವಣಾ ಮೈತ್ರಿ ಮಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ, 'ನಾವು ಆ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಜಸ್ವಂತನಗರ ಅವರ (ಶಿವಪಾಲ್ ಯಾದವ್) ಕ್ಷೇತ್ರ. ಸಮಾಜವಾದಿ ಪಕ್ಷವು ಅವರಿಗಾಗಿ ಆ ಕ್ಷೇತ್ರವನ್ನು ತೆರವುಗೊಳಿಸಿದೆ. ಮುಂಬರುವ ದಿನಗಳಲ್ಲಿ ಅವರ ಮುಖಂಡರನ್ನು ಸಂಪುಟ ಸಚಿವರನ್ನಾಗಿ ಮಾಡುತ್ತೇವೆ. ಜತೆಗೆ ಅಗತ್ಯವಿರುವ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತೇವೆ' ಎಂದರು.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯು 2022ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಶಿವಪಾಲ್ ಯಾದವ್, ಜಸ್ವಂತ್ ನಗರ ಕ್ಷೇತ್ರದಿಂದ 2017ರ ಚುನಾವಣೆಯಲ್ಲಿ ಗೆದ್ದಿದ್ದರು. ಬಳಿಕ ಎಸ್ಪಿಯಿಂದ ದೂರವಾಗಿ ಹೊಸ ಪಕ್ಷ ಸ್ಥಾಪಿಸಿದ್ದ ಅವರು, 2019ರ ಲೋಕಸಭೆ ಚುನಾವಣೆಯಲ್ಲಿ ಫಿರೋಜಾಬಾದ್ನಿಂದ ಸ್ಪರ್ಧಿಸಿದ್ದರು.












Click it and Unblock the Notifications