ಅಯೋಧ್ಯೆಯ ರಾಮ-ಲಕ್ಷ್ಮಣರ ಮೂರ್ತಿಗೆ ಮೀಸೆ ಕಡ್ಡಾಯ!
ಲಕ್ನೋ, ಆಗಸ್ಟ್.03: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಇರಿಸುವ ರಾಮ ಮತ್ತು ಲಕ್ಷ್ಮಣರ ಮೂರ್ತಿಗೆ ಕಡ್ಡಾಯವಾಗಿ ಮೀಸೆ ಇರತಕ್ಕದ್ದು ಎಂದು ಹಿಂದೂ ಮುಖಂಡ ಸಂಭಾಜಿ ಭಿದೆ ಆಗ್ರಹಿಸಿದ್ದಾರೆ.
Recommended Video
ಸಾಂಗ್ಲಿಯಲ್ಲಿ ಮಾತನಾಡಿದ ಹಿಂದೂ ಮುಖಂಡ ಸಂಭಾಜಿ ಭಿದೆ ಅವರು ಈ ಬಗ್ಗೆ ಪ್ರಸ್ತಾಪಿಸಿದರು. ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸುವ ರಾಮ ಮತ್ತು ಲಕ್ಷ್ಮಣ ಮೂರ್ತಿಗಳಿಗೆ ಕಡ್ಡಾಯವಾಗಿ ಮೀಸೆ ಇರಲೇಬೇಕು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿ ಆಗಿರುವ ಗೋವಿಂದ್ ಗಿರಿಜಿ ಮಹಾರಾಜ್ ಬಳಿ ಆಗ್ರಹಿಸಿದ್ದಾರೆ.
ಇಂಥ ಸಣ್ಣಪುಟ್ಟ ತಪ್ಪುಗಳನ್ನು ನೀವು ಮಾಡುವಂತಿಲ್ಲ. ಒಂದು ವೇಳೆ ರಾಮ ಮತ್ತು ಲಕ್ಷ್ಣಣ ಮೂರ್ತಿಗಳಿಗೆ ಮೀಸೆಯನ್ನು ಅಂಟಿಸದೇ ಹೋದಲ್ಲಿ ನನ್ನಂಥಾ ಸಾವಿರಾರು ಭಕ್ತರ ಪಾಲಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿಯೂ ಪ್ರಯೋಜನ ಆಗುವುದಿಲ್ಲ ಎಂದು ಸಂಭಾಜಿ ಭಿದೆ ಹೇಳಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜ್ ರಿಗೆ ಮೊದಲು ಪೂಜೆ:
ಅಯೋಧ್ಯೆಯಲ್ಲಿ ಐತಿಹಾಸಿಕ ರಾಮ ಮಂದಿರ ನಿರ್ಮಾಣ ಕಾರ್ಯದ ಭೂಮಿ ಪೂಜೆಗೂ ಮೊದಲು ಛತ್ರಪತಿ ಶಿವಾಜಿ ಮಹಾರಾಜ್ ಅವರ ಭಾವಚಿತ್ರವನ್ನು ಪೂಜಿಸಬೇಕು ಎಂದು ಸಂಭಾಜಿ ಬಿಧೆ ಆಗ್ರಹಿಸಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರೊಬ್ಬರ ಪ್ರಕಾರ, ಆಗಸ್ಟ್.05ರ ಮಧ್ಯಾಹ್ನ 12.15ಕ್ಕೆ ಸಲ್ಲುವ "ಅಭಿಜಿತ್ ಮುಹೂರ್ತ"ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇನ್ನು, "ಅಭಿಜಿತ್ ಮುಹೂರ್ತ ಎಲ್ಲಾ ಅಡೆತಡೆಗಳನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಮಹಂತ್ ನರ್ತ್ಯ ಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಮಹಂತ್ ಕಮಲ್ ನಯನ್ ದಾಸ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಉನ್ನತ ಶ್ರೇಣಿಯ ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಬಿಜೆಪಿಯ ಹಿರಿಯ ಮುಖಂಡರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications