ಬಡೇ ಹನುಮಾನ್ ಗೆ ನಮಿಸಿ 'ಗಂಗಾ ಯಾತ್ರೆ' ಆರಂಭಿಸಿದ ಪ್ರಿಯಾಂಕಾ
ವಾರಣಾಸಿ, ಮಾರ್ಚ್ 18 : ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮದ ಪ್ರಯಾಗ್ ರಾಜ್ ನಲ್ಲಿ ಬಡೇ ಹನುಮಾನ್ ನಿಗೆ ಪೂಜೆ ಸಲ್ಲಿಸುವ ಮೂಲಕ, ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಮೂರು ದಿನಗಳ 'ಗಂಗಾ ಯಾತ್ರೆ'ಯನ್ನು ಸೋಮವಾರ ಆರಂಭಿಸಿದರು.
ಇಲ್ಲಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಲೋಕಸಭೆ ಚುನಾವಣೆಯ ಅಭಿಯಾನವನ್ನು ಶುರು ಮಾಡಿರುವ ಅವರು, ಪ್ರಯಾಗ್ ರಾಜ್ ನಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ಬಾರಿ ಸ್ಪರ್ಧಿಸಿದ್ದ ಮತ್ತು ಈಬಾರಿಯೂ ಸ್ಪರ್ಧಿಸಲಿರುವ ವಾರಣಾಸಿವರೆಗೆ ಪ್ರಯಾಣ ಮಾಡಲಿದ್ದಾರೆ. ಹಸಿರು ಸೀರೆ ತೊಟ್ಟಿದ್ದ ಪ್ರಿಯಾಂಕಾ ಅವರು ಗಂಗೆಗೂ ಪೂಜೆ ಸಲ್ಲಿಸಿದರು.
ಈ ಮೂರು ದಿನಗಳ ಗಂಗಾ ಯಾತ್ರೆಯಲ್ಲಿ ಅವರು ಸಾರ್ವಜನಿಕರನ್ನು, ಪಕ್ಷದ ಕಾರ್ಯಕರ್ತರನ್ನು ಮತ್ತು ಸ್ಥಳೀಯ ನಾಯಕರನ್ನು ಭೇಟಿ ಮಾಡಲಿದ್ದಾರೆ. ಅವರು ಗಂಗಾ ನದಿಯ ತಟದಲ್ಲಿ ನೆಲೆಸಿರುವ ಮೀನುಗಾರು, ಬಿಂಡ್ ಸಮುದಾಯದವರು ಮತ್ತಿತರ ಜನರನ್ನು ಭೇಟಿ ಮಾಡಿ ಮತಯಾಚನೆ ಮಾಡಲಿದ್ದಾರೆ.
ಉತ್ತರ ಪ್ರದೇಶ ರಾಜಕೀಯದಲ್ಲಿ ಪ್ರಿಯಾಂಕಾ ಪ್ರಭಾವ, ಯೋಗಿ ಏನಂತಾರೆ?
ಈ ಬಾರಿ ಉತ್ತರ ಪ್ರದೇಶದಲ್ಲಿ 80 ಸೀಟುಗಳಲ್ಲಿ ಅತ್ಯಧಿಕ ಕ್ಷೇತ್ರಗಳನ್ನು ಗೆಲ್ಲುವ ಉಮೇದಿಯಿಂದ ಅವರು ಯಾತ್ರೆ ಆರಂಭಿಸಿದ್ದಾರೆ. ಕಳೆದ ಬಾರಿಯ 2014ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 80ರಲ್ಲಿ ಕೇವಲ 2 ಸೀಟು ಮಾತ್ರ ಗೆದ್ದು ಮುಖಭಂಗ ಅನುಭವಿಸಿತ್ತು. 71 ಸೀಟು ಬಿಜೆಪಿ ಪಾಲಾಗಿದ್ದರೆ, 5 ಸಮಾಜವಾದಿ ಪಕ್ಷದ ಪಾಲಾಗಿದ್ದವು.
ಪ್ರಿಯಾಂಕಾರಿಂದ ಎಲ್ಲ ವರ್ಗದವರ ಭೇಟಿ
ಜೊತೆಗೆ, ಬಿಜೆಪಿಗೆ ಹೆಚ್ಚಿನ ಮತಗಳನ್ನು ದಕ್ಕಿಸಿಕೊಟ್ಟಿದ್ದ ಮೇಲ್ವರ್ಗದ ಸಮುದಾಯದವರಾದ ಬ್ರಾಹ್ಮಣ ಮತ್ತು ರಜಪೂತ ಸಮುದಾಯದ ಜನರನ್ನು ಕೂಡ ಭೇಟಿ ಮಾಡಿ, ಭಾರತೀಯ ಜನತಾ ಪಕ್ಷಕ್ಕೆ ಭಾರೀ ಏಟು ನೀಡುವ ತಂತ್ರಗಾರಿಕೆ ರೂಪಿಸಿದ್ದಾರೆ.
ಒಟ್ಟು 140 ಕಿ.ಮೀ. ಉದ್ದದ ಗಂಗಾ ತೀರದ ಈ ಯಾತ್ರೆ ಪ್ರಯಾಗ್ ರಾಜ್ ನಿಂದ ಆರಂಭವಾಗಿ ವಾರಣಾಸಿಯ ಅಸ್ಸಿ ಘಾಟ್ ನಲ್ಲಿ ಮುಕ್ತಾಯವಾಗಲಿದೆ. ಪ್ರಿಯಾಂಕಾ ಅವರ ಈ ದೋಣಿ ಯಾತ್ರೆಯಿಂದಾಗಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಅದೃಷ್ಟ ಖುಲಾಯಿಸಲಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಂದುಕೊಂಡಿದ್ದಾರೆ.
ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಧೂಳೆಬ್ಬಿಸಲಿದ್ದಾರೆ ಪ್ರಿಯಾಂಕಾ ಗಾಂಧಿ
ಉತ್ತರ ಪ್ರದೇಶದ ಜನತೆಗೆ ಮುಕ್ತ ಪತ್ರ
ಗಂಗಾ ಯಾತ್ರೆ ಆರಂಭಿಸುವ ಮುನ್ನ ಉತ್ತರ ಪ್ರದೇಶದ ಪ್ರಿಯಾಂಕಾ ವಾದ್ರಾ ಅವರು ಮುಕ್ತ ಪತ್ರ ಬರೆದಿದ್ದು, ರಾಜ್ಯದಲ್ಲಿ ರಾಜಕೀಯ ನಿಂತ ನೀರಾಗಿರುವುದರಿಂದ ರಾಜ್ಯದ ಯುವಕರು, ಮಹಿಳೆಯರು, ರೈತರು ಮತ್ತು ಕಾರ್ಮಿಕರು ತೀರ ಸಂಕಷ್ಟದಲ್ಲಿದ್ದಾರೆ. ಈ ಜನರು ತಮ್ಮ ದುಃಖ, ದುಮ್ಮಾನ, ನೋವುಗಳನ್ನು ಹಂಚಿಕೊಳ್ಳಬಯಸುತ್ತಾರೆ. ಆದರೆ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅವರ ದನಿಯನ್ನು ಹತ್ತಿಕ್ಕಲಾಗಿದೆ. ಇದನ್ನು ಬದಲಾಸುವುದೇ ತಾವು ರಾಜಕೀಯಕ್ಕೆ ಬಂದಿರುವ ಹಿಂದಿನ ಉದ್ದೇಶ. ಜನರ ಅಭಿಮತವನ್ನು ಕೇಳುವ ಉದ್ದೇಶದಿಂದಲೇ ಈ ಗಂಗಾ ಯಾತ್ರೆ ಕೈಗೊಂಡಿರುವುದಾಗಿ ಪ್ರಿಯಾಂಕಾ ವಾದ್ರಾ ಅವರು ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಪ್ರಿಯಾಂಕ ಎಂಟ್ರಿಯ ನಂತರ ಕಾಂಗ್ರೆಸ್ ಹೊಸ ಸದಸ್ಯತ್ವಕ್ಕೆ ಎಲ್ಲೆಲ್ಲೂ ಜನಸಾಗರ
ರಾಜಕೀಯದ ದಿಕ್ಕುದೆಸೆಗಳನ್ನು ಬದಲಿಸುತ್ತೇನೆ
ಜನರೊಂದಿಗೆ 'ಸಚ್ಚಾ ಸಂವಾದ್' (ನಿಜವಾದ ಮಾತುಕತೆ) ನಡೆಸಿದ ನಂತರ, ಅವರ ಅಭಿಮತ ತಿಳಿದುಕೊಂಡು ಉತ್ತರ ಪ್ರದೇಶದ ರಾಜಕೀಯದ ದಿಕ್ಕುದೆಸೆಗಳನ್ನು ಬದಲಿಸುತ್ತೇನೆ. ಅವರ ಎಲ್ಲ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುತ್ತೇನೆ. ತಾವು ಗಂಗಾ ಯಾತ್ರೆಯಲ್ಲಿ ನದಿ ತಟದ ಮೂಲಕ ಮಾತ್ರ ಜನರನ್ನು ತಲುಪುವುದಿಲ್ಲ, ಬದಲಾಗಿ ಬಸ್ಸು, ರೈಲು ಮತ್ತು ಪಾದಯಾತ್ರೆ ನಡೆಸಿ ಜನರ ಆಶೋತ್ತರಗಳನ್ನು ತಿಳಿಯಬಯಸುತ್ತೇನೆ ಎಂದು ಪ್ರಿಯಾಂಕಾ ಪತ್ರದಲ್ಲಿ ಹೇಳಿದ್ದಾರೆ.
ಗಂಗಾ ನದಿ ಸತ್ಯ, ಸಮಾನತೆಯ ಸಂಕೇತ
ಗಂಗಾ ನದಿ ಸತ್ಯ, ಸಮಾನತೆಯ ಸಂಕೇತ. ಗಂಗಾ-ಜಮುನಿ ಸಂಸ್ಕೃತಿಯ ಪ್ರತೀಕವೂ ಹೌದು. ಗಂಗೆ ಯಾರಲ್ಲೂ ತಾರತಮ್ಯ ಮಾಡುವುದಿಲ್ಲ. ಉತ್ತರ ಪ್ರದೇಶದ ಜೀವನಾಡಿಯಾಗಿರುವ ಗಂಗೆಯ ಮೂಲಕ ನಾನು ಉತ್ತರ ಪ್ರದೇಶದ ಜನರನ್ನು ತಲುಪುತ್ತೇನೆ ಎಂದಿರುವ ಅವರು, ಗಂಗಾ ಯಾತ್ರೆಯಲ್ಲಿ ಮಕ್ಕಳೊಂದಿಗೆ ಬೆರೆತು ನಲಿದಾಡಿದರು.