'ರಾಮ ಮಂದಿರ ನಿರ್ಮಿಸಿದ್ರೆ ಸಾಲದು, ರಾಮರಾಜ್ಯ ನಿರ್ಮಿಸುವುದು ನಮ್ಮ ಗುರಿ'
ಲಕ್ನೌ, ಆಗಸ್ಟ್ 04: ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಾರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿಯಿದೆ. ಆಗಸ್ಟ್ 5 ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸುವ ಮೂಲಕ ರಾಮನ ಮಂದಿರ ನಿರ್ಮಾಣಕ್ಕೆ ಅಧಿಕೃತವಾಗಿ ಅಡಿಪಾಯ ಹಾಕಲಿದ್ದಾರೆ.
ಈ ನಡುವೆ 'ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಿಸಿದರೆ ಸಾಲದು, ದೇಶವನ್ನು ರಾಮರಾಜ್ಯವನ್ನಾಗಿಸುವುದು ನಮ್ಮ ಗುರಿ' ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಸೋಮವಾರ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ವಿಶ್ವ ಹಿಂದೂ ಪರಿಷತ್ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್ಟಿ) ಸುಧಾರಣೆಗೆ ಸಹ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ. ಮುಂದೆ ಓದಿ....

ಇಡೀ ದೇಶವನ್ನು ರಾಮರಾಜ್ಯ ಮಾಡಬೇಕು
''ರಾಮ ಜನ್ಮಭೂಮಿ ಚಳವಳಿಯ ನೇತೃತ್ವ ವಹಿಸುವುದು ಮತ್ತು ಭಗವಾನ್ ರಾಮನ ಜನ್ಮಸ್ಥಳದಲ್ಲಿ ದೇವಾಲಯವನ್ನು ಸ್ಥಾಪಿಸುವುದು ಮಾತ್ರ ವಿಶ್ವ ಹಿಂದೂ ಪರಿಷತ್ ಗುರಿಯಲ್ಲ, ಈ ದೇಶವನ್ನು 'ರಾಮ ರಾಜ್ಯ'ವನ್ನಾಗಿ ಪರಿವರ್ತಿಸಲು ಬಯಸಿದೆ'' ಎಂದು ಸೋಮವಾರ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಅಲೋಕ್ ಕುಮಾರ್ ಹೇಳಿದ್ದಾರೆ.

ರಾಮನ ಆಳ್ವಿಕೆಯಲ್ಲಿ ಬಡತನ ಇರಲಿಲ್ಲ
"ಶ್ರೀ ರಾಮನ ಆಳ್ವಿಕೆಯಲ್ಲಿ ಯಾವುದೇ ಬಡತನ ಮತ್ತು ಕಾಯಿಲೆ ಇರಲಿಲ್ಲ. ವಿಶ್ವ ಹಿಂದೂ ಪರಿಷತ್ ಈಗ ಸಮಾನತೆಯ ಆಧಾರದ ಮೇಲೆ ಸಾಮರಸ್ಯದ ಸಮಾಜವನ್ನು ಸ್ಥಾಪಿಸಲು ಹೆಚ್ಚು ಗಮನ ಹರಿಸಲಿದೆ. ಅಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನೂ ಗೌರವದಿಂದ ಕಾಣಲಾಗುತ್ತದೆ. ಎಲ್ಲರಿಗೂ ಆಹಾರದ ಸಿಗಬೇಕಿದೆ. ಎಲ್ಲರಿಗೂ ಆಶ್ರಯ ಸಿಗಬೇಕಿದೆ, ಶಿಕ್ಷಣ, ಬಟ್ಟೆ ಮತ್ತು ಲಾಭದಾಯಕ ವೃತ್ತಿಗಳು ಲಭ್ಯವಾಗಲಿದೆ" ಅವರು ಹೇಳಿದರು.

ಸಮಾನ ಮನೋಭಾವದಿಂದ ಮಾತ್ರ ರಾಮರಾಜ್ಯ ಸಾಧ್ಯ
'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಏಳಿಗೆಗೆ ವಿಎಚ್ಪಿ ಕೆಲಸ ಮಾಡುತ್ತದೆ.ಅವರಿಗೆ ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಆದಾಯ ಗಳಿಸುವ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನಗಳನ್ನು ಮಾಡುತ್ತೆ. ಸಮಾಜವು ಕೆಳ ವರ್ಗಗಳನ್ನು ಸಮಾನವಾಗಿ ಸ್ವೀಕರಿಸದ ಹೊರತು ರಾಮ ರಾಜ್ಯದ ಕನಸನ್ನು ನನಸಾಗಿಸಲು ಸಾಧ್ಯವಿಲ್ಲ. ಈ ಕನಸನ್ನು ಈಡೇರಿಸಲು ಸಮಾಜದ ಎಲ್ಲ ವರ್ಗದವರು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ' ಎಂದು ಅಲೋಕ್ ಕುಮಾರ್ ತಮ್ಮ ಭವಿಷ್ಯದ ಕನಸಿನ ಬಗ್ಗೆ ಹೇಳಿದ್ದಾರೆ.

ಭಗವಂತ ಜಾತಿ ನಂಬುವುದಿಲ್ಲ
'ಭಗವಂತನು ಜಾತಿಯನ್ನು ನಂಬುವುದಿಲ್ಲ, ಆದರೆ ಪ್ರೀತಿ ಮತ್ತು ಭಕ್ತಿಯನ್ನು ನಂಬುತ್ತಾನೆ. ದೇವಾಲಯವನ್ನು ನಿರ್ಮಿಸುವ ಈ ಮೂರು ವರ್ಷಗಳಲ್ಲಿ, ಜಾತಿ ಮತ್ತು ಧರ್ಮದ ಗೋಡೆಗಳನ್ನು ಕೆಡವಲು ನಾವು ದೇಶಾದ್ಯಂತ ತೀವ್ರವಾದ ಅಭಿಯಾನವನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದೇವೆ'' ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.












Click it and Unblock the Notifications