ಮೋದಿ 2.0 ಸಂಪುಟ: ಅನುಪ್ರಿಯಗೆ ಸ್ಥಾನ ಸಿಗಬಹುದಾದ್ರೆ ಪ್ರವೀಣ್ಗೆ ಏಕಿಲ್ಲ?
ಲಕ್ನೋ, ಜುಲೈ 8: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಏಳು ಮಂದಿಗೆ ತಮ್ಮ ಸಂಪುಟದಲ್ಲಿ ಮೋದಿ ಸ್ಥಾನ ಕಲ್ಪಿಸಿದ್ದಾರೆ. ಆದರೆ, ಮೋದಿ ಆಯ್ಕೆ ಬಗ್ಗೆ ನಿಶಾದ್ ಪಕ್ಷದ ಅಧ್ಯಕ್ಷ ಸಂಜಯ್ ನಿಶಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಿಂದ ಅನುಪ್ರಿಯಗೆ ಸ್ಥಾನ ಕಲ್ಪಿಸಬಹುದಾದರೆ ತಮ್ಮ ಪುತ್ರ ಪ್ರವೀಣ್ ನಿಶಾದ್ಗೆ ಸ್ಥಾನ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅನುಪ್ರಿಯ ಪಟೇಲ್, ಪಂಕಜ್ ಚೌಧರಿ ಹಾಗೂ ಬಿ.ಎಲ್ ವರ್ಮ ಮೂವರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಯುಪಿಯಲ್ಲಿ ಶೇ 50ಕ್ಕೂ ಹಿಂದುಳಿದ ವರ್ಗಕ್ಕೆ ಸೇರಿದ ಅಧಿಕ ಮತದಾರರನ್ನು ಹೊಂದಿದೆ. ಈ ಲೆಕ್ಕಾಚಾರದಲ್ಲಿ ಜೊತೆಗೆ ಮಹಿಳಾ ಕೋಟಾದಡಿಯಲ್ಲಿ ಅನುಪ್ರಿಯರಿಗೆ ಸ್ಥಾನ ಸಿಕ್ಕಿದೆ.
ಅನುಪ್ರಿಯ ಪಟೇಲ್ ಮಿತ್ರ ಪಕ್ಷ ಅಪ್ನಾ ದಳ(ಸೊನೆಲಾಲ್) ಕ್ಕೆ ಸೇರಿದವರಾಗಿದ್ದರೆ, ಮಿಕ್ಕವರು ಬಿಜೆಪಿ ಸಂಸದರಾಗಿದ್ದಾರೆ. ಹೊಸ ಮಿತ್ರ ಪಕ್ಷ ನಿಶಾದ್ ಪಾರ್ಟಿಯಿಂದ ಸಂಸದ ಪ್ರವೀಣ್ಗೆ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೋದಿ ನಡೆಯಿಂದ ನಿರಾಶೆಯಾಗಿದೆ ಎಂದು ಸಂಜಯ್ ನಿಶಾದ್ ಪ್ರತಿಕ್ರಿಯಿಸಿದ್ದಾರೆ.

"ನಿಶಾದ್ ಸಮುದಾಯಕ್ಕೆ ಇದರಿಂದ ಬೇಸರವಾಗಿದೆ. ಈಗಾಗಲೇ ರಾಜ್ಯ ಬಿಜೆಪಿಯಿಂದ ಕಡೆಗಣನೆಗೊಳಗಾಗಿರುವ ಸಮುದಾಯ ತನ್ನ ಉತ್ತರವನ್ನು ಮುಂದಿನ ಚುನಾವಣೆಯಲ್ಲಿ ನೀಡಲಿದೆ'' ಎಂದು ಸಂಜಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನುಪ್ರಿಯ ಹಾಗೂ ಪ್ರವೀಣ್ ನಡುವೆ ಹೋಲಿಕೆ ಮಾಡಿದರೆ, ಸುಮಾರು 160ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಪ್ರವೀಣ್ ಜನಪ್ರಿಯತೆ ಗಳಿಸಿದ್ದಾರೆ. ಅನುಪ್ರಿಯಗೆ ಕೆಲ ಕ್ಷೇತ್ರಗಳಲ್ಲಿ ಮಾತ್ರ ಬೆಂಬಲವಿದೆ ಎಂದು ಸಂಜಯ್ ಹೇಳಿದ್ದಾರೆ.

''ನನ್ನ ಬೇಸರವನ್ನು ಈಗಾಗಲೇ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾರಿಗೆ ತಿಳಿಸಿದ್ದೇನೆ. ಇನ್ನು ಮುಂದಿನ ನಿರ್ಧಾರ ಅವರಿಗೆ ಬಿಟ್ಟಿದ್ದು, ಪ್ರವೀಣ್ಗೆ ಸೂಕ್ತ ಸ್ಥಾನಮಾನ ಸಿಗುವ ನಿರೀಕ್ಷೆಯಿದೆ,'' ಎಂದು ಸಂಜಯ್ ನಿಶಾದ್ ಹೇಳಿದ್ದಾರೆ.
ನಿಶಾದ್ ಪಕ್ಷ: ನಿರ್ಬಲ್ ಇಂಡಿಯನ್ ಶೋಷಿತ್ ಹಮಾರಾ ಆಮ್ ದಳ(ನಿಶಾದ್) ಪಕ್ಷ ಸದ್ಯಕ್ಕೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಏಕೈಕ ಶಾಸಕನನ್ನು ಹೊಂದಿದೆ.
ನಿಶಾದ, ಕೇವಾತ್, ಬಿಂಡ್, ಮಲ್ಲಾಹ್, ಕಶ್ಯಪ್, ಮಾಂಝಿ, ಗೋಂಡ್ ಇನ್ನಿತರ ಸಮುದಾಯಗಳ ಅಭಿವೃದ್ಧಿಗಾಗಿ ಸ್ಥಾಪಿತದ ಪಕ್ಷ ಇದಾಗಿದ್ದು, ಬಹುಜನ ಸಮಾಜವಾದಿ ಪಕ್ಷದಲ್ಲಿದ್ದ ಸಂಜಯ್ ಅವರು ಮೀನುಗಾರರು, ಅಂಬಿಗರ ಸಂಕಷ್ಟಗಳಿಗೆ ಸ್ಪಂದಿಸಲು ಪಕ್ಷ ಮುಂದಾಗಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿದೆ.

2017 ರಲ್ಲಿ ನಡೆದ ಉತ್ತರ ಪ್ರದೇಶ ಲೋಕಸಭೆ ಉಪಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಅವರ ಕ್ಷೇತ್ರವಾಗಿದ್ದ ಗೋರಖ್ಪುರದಿಂದ ಸ್ಪರ್ಧಿಸಿ ನಿಷಾದ್ ಸಮುದಾಯದ ನಾಯಕ ಪ್ರವೀಣ್ ನಿಷಾದ್ ಅಚ್ಚರಿಯ ಜಯ ಪಡೆದಿದ್ದರು.
ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಿಶಾದ್ ಗೋರಖ್ ಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯ ದಾಖಲಿಸಿದ್ದರು. ಬಹುಜನ ಸಮಾಜವಾದಿ ಪಕ್ಷದ ಬೆಂಬಲವೂ ಸಿಕ್ಕಿತ್ತು, ಬಿಜೆಪಿ ವಿರುದ್ಧ ಜಯ ದಾಖಲಿಸಿದ್ದ ನಿಶಾದ್ ಪಕ್ಷ, ಎಸ್ಪಿ-ಬಿಎಸ್ಪಿ ಕಡೆಗಣಿಸಿದ್ದರಿಂದ ಮೈತ್ರಿಕೂಟದಿಂದ ಆಚೆ ಬಂದು, ಬಿಜೆಪಿಗೆ ಬೆಂಬಲ ನೀಡಿದೆ.
ಗೋರಖ್ಪುರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರವೀಣ್ ಕುಮಾರ್ ನಿಶಾದ್ 4,56,513 ಮತಗಳನ್ನು ಪಡೆದಿದ್ದರೆ, ಅವರಿಗೆ ತೀವ್ರ ಪೈಪೋಟಿ ನೀಡಿದ್ದ ಬಿಜೆಪಿಯ ಉಪೇಂದ್ರ ದತ್ತ ಶುಕ್ಲಾ 4,34,632 ಮತಗಳನ್ನು ಪಡೆದಿದ್ದರು.
30 ವರ್ಷ ವಯಸ್ಸಿನ ಪ್ರವೀಣ್ ನಿಶಾದ್, 2019ರಲ್ಲಿ ಸಂತ್ ಕಬೀರ್ ನಗರ ಕ್ಷೇತ್ರದಿಂದ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಈ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಲಕ್ನೋದ ಗೌತಮ ಬುದ್ಧ ತಾಂತ್ರಿಕ ವಿವಿಯಿಂದ ಇಂಜಿಯರಿಂಗ್ ಪದವಿ ಗಳಿಸಿದ್ದಾರೆ. ಏಪ್ರಿಲ್ 4, 2019ರಂದು ನಿಶಾಪ್ ಪಕ್ಷವು ಅಧಿಕೃತವಾಗಿ ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿತು.
''ಬಿಜೆಪಿ ಜೊತೆ ನಿಶಾದ್ ಪಕ್ಷದ ಮೈತ್ರಿ ಅಬಾಧಿತವಾಗಿರಲಿದೆ. ಆದರೆ, ಬಿಜೆಪಿಯಿಂದ ನಿಶಾದ್ ಸಮುದಾಯ ದೂರಾಗುತ್ತಿದೆ. ಈ ಹಿಂದೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷದಿಂದ ನಿಶಾದ್ ಸಮುದಾಯ ಮೋಸಕ್ಕೊಳಗಾಗಿದೆ. ಈಗ ಬಿಜೆಪಿ ಕೂಡಾ ಇದೆ ಹಾದಿಯಲ್ಲಿರುವುದು ದುರಂತ'' ಎಂದು ಸಂಜಯ್ ನಿಶಾದ್ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications