ಕಾಂಗ್ರೆಸ್ ಪಕ್ಷ ನಮ್ಮನ್ನು ವಂಚಿಸಿದೆ: ಅಖಿಲೇಶ್ ಯಾದವ್ ಆರೋಪ
ಕಾನ್ಪುರ, ಏಪ್ರಿಲ್ 25: ಲೋಕಸಭೆ ಚುನಾವಣೆ ಪ್ರಗತಿಯಲ್ಲಿರುವಂತೆಯೇ ಎನ್ಡಿಎ ವಿರೋಧಪಕ್ಷಗಳ ಪಾಳಯದಲ್ಲಿನ ಬಿರುಕು ದೊಡ್ಡದಾಗುತ್ತಿವೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ಪಕ್ಷವನ್ನು ತಮ್ಮನ್ನು ವಂಚಿಸಿದೆ ಎಂದು ಆರೋಪಿಸಿದ್ದಾರೆ.
ಕಾನ್ಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅಖಿಲೇಶ್ ಯಾದವ್, 'ಯಾರಾದರೂ ಸಮಾಜವಾದಿ ಪಕ್ಷಕ್ಕೆ ಮೋಸ ಮಾಡಿದೆ ಎಂದರೆ ಅದು ಕಾಂಗ್ರೆಸ್ ಪಕ್ಷ' ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಚುನಾವಣೆಯಲ್ಲಿ ಎರಡೂ ಪಕ್ಷಗಳು ಹೀನಾಯ ಸೋಲು ಅನುಭವಿಸಿದ ಬಳಿಕ ಅವರ ಮೈತ್ರಿಯಲ್ಲಿ ಒಡಕು ಉಂಟಾಗಿತ್ತು.

'ನಾವು ಈ ಹಿಂದೆ ಮೈತ್ರಿ ಮಾಡಿಕೊಂಡಿದ್ದು ಸತ್ಯ. ಆದರೆ, ಕಾಂಗ್ರೆಸ್ ಪಕ್ಷ ಹೆಚ್ಚು ಅಹಂಕಾರ ಹೊಂದಿದೆ ಎನ್ನುವುದು ಆಗ ಗೊತ್ತಿರಲಿಲ್ಲ. ಅವರಿಗೆ ಅಹಂಕಾರವೇ ಮುಖ್ಯ ಹೊರತು ಮೈತ್ರಿ ಏನೂ ಅಲ್ಲ' ಎಂದು ಅಖಿಲೇಶ್ ಆರೋಪಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಅಖಿಲೇಶ್ ಯಾದವ್, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಲು ಮನಸು ಮಾಡಿಲ್ಲ. ಬದಲಾಗಿ ರಾಜ್ಯದಲ್ಲಿ ಪ್ರಬಲವಾಗಿರುವ ಮತ್ತೊಂದು ಪಕ್ಷ ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಸೀಟು ಹಂಚಿಕೆ ಒಪ್ಪಂದದಿಂದ ಕಾಂಗ್ರೆಸ್ ಅನ್ನು ಅದು ದೂರ ಇರಿಸಿದೆ. ಇದರಿಂದ ಕಾಂಗ್ರೆಸ್ಗೆ ತೀವ್ರ ಇರಿಸುಮುರಿಸು ಉಂಟಾಗಿದೆ.












Click it and Unblock the Notifications