ಯೋಗಿ ಬಗ್ಗೆ ಅಷ್ಟು ಉದಾರತೆ ಏಕೆ? ಆಯೋಗಕ್ಕೆ ಮಾಯಾವತಿ ಪ್ರಶ್ನೆ
ಲಕ್ನೋ, ಏಪ್ರಿಲ್ 18: ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಚುನಾವಣಾ ಆಯೋಗದಿಂದ ಪ್ರಚಾರಕ್ಕೆ 72 ಗಂಟೆಗಳ ಕಾಲ ನಿಷೇಧಕ್ಕೆ ಒಳಗಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಚುನಾವಣಾ ಆಯೋಗ ಉದಾರತೆ ತೋರಿದೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘಿಸಿರುವುದಕ್ಕೆ ಮಾಯಾವತಿ ಕೂಡ 48 ಗಂಟೆ ಚುನಾವಣಾ ಪ್ರಚಾರದಿಂದ ನಿಷೇಧಕ್ಕೆ ಒಳಗಾಗಿದ್ದಾರೆ.
ಚುನಾವಣಾ ಆಯೋಗವು ವಿಧಿಸಿರುವ ನಿಷೇಧವನ್ನು ಯೋಗಿ ಆದಿತ್ಯನಾಥ್ ಬಹಿರಂಗವಾಗಿಯೇ ಉಲ್ಲಂಘನೆ ಮಾಡುತ್ತಿದ್ದಾರೆ. ವಿವಿಧ ನಗರಗಳ ದೇವಸ್ಥಾನಗಳಿಗೆ ತೆರಳಿ ದಲಿತರ ಮನೆಗಳಲ್ಲಿ ಆಹಾರ ಸೇವನೆ ಮಾಡುತ್ತಿದ್ದಾರೆ. ಇದಕ್ಕೆ ಮಾಧ್ಯಮಗಳಿಂದ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಚುನಾವಣಾ ಆಯೋಗ ಏಕಿಷ್ಟು ಉದಾರತೆ ತೋರಿಸುತ್ತಿದೆ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಚುನಾವಣಾ ಆಯೋಗವು ಬಿಜೆಪಿ ಮುಖಂಡರ ಪರ ಇದೇ ರೀತಿ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದರೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐದು ವರ್ಷದ ಹಿಂದೆ ಕಾಂಗ್ರೆಸ್, ಬಿಜೆಪಿಯಿಂದ ಹೀನಾಯ ಸೋಲು ಅನುಭವಿಸಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಕೂಡ ಕಾಂಗ್ರೆಸ್ನಂತೆಯೇ ವಿಹ್ವಲವಾಗಿದೆ ಎಂದು ಲೇವಡಿ ಮಾಡಿದ್ದಾರೆ.
'ಇಂದು ಎರಡನೆಯ ಹಂತದ ಮತದಾನದ ನಡುವೆಯೇ, ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್ನಂತೆಯೇ ಬಿಜೆಪಿ ಮತ್ತು ಪ್ರಧಾನಿ ಕಳವಳ ಹೊಂದಿದ್ದಾರೆ. ಬಡವರ ವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ, ದಲಿತ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿ ಮತ್ತು ಮುಸ್ಲಿಮರ ವಿರೋಧಿ ಮನಸ್ಥಿತಿಯೇ ಇದಕ್ಕೆ ಕಾರಣ' ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications