ರಾಹುಲ್, ಸಿಂಗ್ಗೆ ಅವಮಾನ: ಒಬಾಮ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯ
ಲಕ್ನೋ, ನವೆಂಬರ್ 19: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಉಲ್ಲೇಖವಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಇತ್ತೀಚನ ಪುಸ್ತಕ 'ದಿ ಪ್ರಾಮಿಸ್ಡ್ ಲ್ಯಾಂಡ್' ಕೃತಿ ವಿರುದ್ಧ ಉತ್ತರ ಪ್ರದೇಶದ ಪ್ರತಾಪಗಡದಲ್ಲಿ ವಕೀಲರೊಬ್ಬರು ಸಿವಿಲ್ ಮೊಕದ್ದಮೆ ಹೂಡಿದ್ದಾರೆ.
ತನ್ನ ನಾಯಕರನ್ನು ಅವಮಾನಿಸಿರುವ ಮತ್ತು ಅವರ ಅಭಿಮಾನಿಗಳ ಭಾವನೆಗಳಿಗೆ ನೋವನ್ನುಂಟುಮಾಡಿರುವ ಪುಸ್ತಕದ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅವರು ಒತ್ತಾಯಿಸಿದ್ದಾರೆ. ಅಖಿಲ ಭಾರತ ಗ್ರಾಮೀಣ ವಕೀಲರ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಜ್ಞಾನ ಪ್ರಕಾಶ್ ಶುಕ್ಲಾ ಅವರು ಲಗ್ಜಂಜ್ ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣವನ್ನು ಡಿಸೆಂಬರ್ 1ರಂದು ವಿಚಾರಣೆಗೆ ಒಳಪಡಿಸಲು ನಿಗದಿಗೊಳಿಸಲಾಗಿದೆ.
ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಕುರಿತು ಒಬಾಮ ಹೇಳಿರುವ ಮಾತುಗಳು ಅಪಮಾನಕಾರಿಯಾಗಿವೆ ಮತ್ತು ಇವು ದೇಶದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ. ಈ ನಾಯಕರಿಗೆ ಲಕ್ಷಾಂತರ ಬೆಂಬಲಿಗರಿದ್ದಾರೆ. ಒಬಾಮ ಪುಸ್ತಕದಲ್ಲಿರುವ ಅಂಶಗಳು ಅವರಿಗೆ ಗಾಸಿಯುಂಟುಮಾಡಿದೆ. ಇದರಿಂದ ನೋವಿಗೊಳಗಾದ ನಾಯಕರ ಬೆಂಬಲಿಗರು ಪುಸ್ತಕದ ವಿರುದ್ಧ ಪ್ರತಿಭಟನೆಗಾಗಿ ರಸ್ತೆಗೆ ಇಳಿಯಬಹುದು. ಇದು ಕ್ಷೋಭೆಗೆ ಎಡೆಮಾಡಿಕೊಡಬಹುದು. ಹೀಗಾಗಿ ಒಬಾಮ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ಅವರು ಒತ್ತಾಯಿಸಿದ್ದಾರೆ.

ಒಬಾಮ ವಿರುದ್ಧ ಎಫ್ಐಆರ್ ದಾಖಲು ಮಾಡದೆ ಹೋದರೆ ತಾವು ಅಮೆರಿಕ ರಾಯಭಾರ ಕಚೇರಿ ಎದುರು ನಿರಶನ ನಡೆಸುವುದಾಗಿ ಅವರು ಹೇಳಿದ್ದಾರೆ.












Click it and Unblock the Notifications