ಭೂಮಿ ವ್ಯಾಜ್ಯದಲ್ಲಿ 9 ಮಂದಿಯನ್ನು ಗುಂಡು ಹಾರಿಸಿ ಕೊಂದರು
ಸೋನ್ ಭದ್ರ(ಉತ್ತರಪ್ರದೇಶ), ಜುಲೈ 17: ಉತ್ತರಪ್ರದೇಶ ಪೂರ್ವಭಾಗದ ಸೋನ್ ಭದ್ರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೂವರು ಮಹಿಳೆಯರೂ ಸೇರಿದಂತೆ ಒಂಬತ್ತು ಮಂದಿಯನ್ನು ಗುಂಡಿಟ್ಟು ಕೊಲ್ಲಲಾಗಿದೆ. ಭೂ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದ್ದು, ಶೂಟೌಟ್ ನಲ್ಲಿ ಇತರ ಹತ್ತೊಂಬತ್ತು ಮಂದಿ ಗಾಯಗೊಂಡಿದ್ದಾರೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ.
"ಸೋನ್ ಭದ್ರ ಜಿಲ್ಲೆಯ ಉಭ ಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಹಳ್ಳಿ ಮುಖ್ಯಸ್ಥ ಯಗ್ಯಾ ದತ್ ಎರಡು ವರ್ಷದ ಹಿಂದೆ ಮೂವತ್ತಾರು ಎಕರೆ ಕೃಷಿ ಭೂಮಿ ಖರೀದಿಸಿದ್ದರು. ಬುಧವಾರದಂದು ಯಗ್ಯಾ ದತ್ ಮತ್ತು ಇತರರು ಆ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ತೆರಳಿದ್ದಾರೆ. ಅದಕ್ಕೆ ಸ್ಥಳೀಯ ಹಳ್ಳಿಗರು ವಿರೋಧಿಸಿದ್ದಾರೆ.
ಬಟ್ಟೆ ಅಂಗಡಿಯಲ್ಲಿ ಡಿಸ್ಕೌಂಟ್ ನೀಡಲಿಲ್ಲ ಎಂದು ಇಬ್ಬರನ್ನು ಢಂ ಎನಿಸಿದ
"ಆಗ ಹಳ್ಳಿಯ ಮುಖ್ಯಸ್ಥನ ಜತೆಗೆ ಬಂದಿದ್ದವರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಆ ವೇಳೆ ಒಂಬತ್ತು ಮಂದಿ ಹಳ್ಳಿಗರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಸಹ ಇದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
"ಹಳ್ಳಿಯ ಪ್ರಧಾನ ತನ್ನ ಜತೆಗೆ ಟ್ರ್ಯಾಕ್ಟರ್ ನಲ್ಲಿ ಹಲವು ಮಂದಿಯನ್ನು ಕರೆತಂದಿದ್ದ. ಭೂಮಿಯನ್ನು ವಶಕ್ಕೆ ಪಡೆಯಲು ಆರಂಭಿಸಿದ. ಆ ವೇಳೆಗೆ ಹಳ್ಳಿಗರು ವಿರೋಧಿಸಲು ಆರಂಭಿಸಿದ್ದರಿಂದ ಆತ ಮತ್ತು ಸಹಚರರು ಹಳ್ಳಿಗರ ಮೇಲೆ ಗುಂಡು ಹಾರಿಸಿದ್ದಾರೆ" ಎಂದು ಸೋನ್ ಭದ್ರ ಪೊಲೀಸ್ ಮುಖ್ಯಸ್ಥ ತಿಳಿಸಿದ್ದಾರೆ.
ಈ ಹಿಂದಿನಿಂದಲೂ ಹಳ್ಳಿಗರು ಮತ್ತು ಹಳ್ಳಿ ಮುಖ್ಯಸ್ಥನ ಮಧ್ಯೆ ಭೂ ವಿವಾದ ಇದ್ದು, ಉದ್ವಿಗ್ನ ಪರಿಸ್ಥಿತಿ ಸೃಷ್ಟಿ ಆಗಲು ಅದೇ ಕಾರಣ ಎಂದು ಹೇಳಲಾಗಿದೆ. ಈ ಘಟನೆ ಬಗ್ಗೆ ತಿಳಿದ ಕೂಡಲೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರು ಉತ್ತರಪ್ರದೇಶ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.