ಉತ್ತರ ಪ್ರದೇಶದ ದಲಿತ ಸಹೋದರಿಯರ ಅತ್ಯಾಚಾರ, ಕೊಲೆ ತನಿಖೆಗೆ ವಿಶೇಷ ತಂಡ ರಚನೆ
ಲಕ್ನೋ, ಸೆ.16: ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದ 15 ಮತ್ತು 17 ವರ್ಷದ ಇಬ್ಬರು ದಲಿತ ಸಹೋದರಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗಾಗಿ ಉತ್ತರ ಪ್ರದೇಶ ಪೊಲೀಸರು ಶುಕ್ರವಾರ ಏಳು ಸದಸ್ಯರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದ್ದಾರೆ.
ಬುಧವಾರ ರಾತ್ರಿ ಇಬ್ಬರು ದಲಿತ ಸಹೋದರಿಯರ ಮೃತದೇಹಗಳು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರ ಮೇಲೆ ಅತ್ಯಾಚಾರವೆಸಗಲಾಗಿದೆ ಮತ್ತು ಕತ್ತು ಹಿಸುಕಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ತ್ವರಿತ ತನಿಖೆಗಾಗಿ ಎಸ್ಐಟಿ ರಚಿಸಲಾಗಿದೆ ಎಂದು ಲಖಿಂಪುರ ಖೇರಿ ಎಸ್ಪಿ ಸಂಜೀವ್ ಸುಮನ್ ಹೇಳಿದ್ದಾರೆ. ನಿಘಶನ್ನ ಸರ್ಕಲ್ ಆಫೀಸರ್ ಸಂಜಯ್ ನಾಥ್ ತಿವಾರಿ ತಂಡದ ನೇತೃತ್ವ ವಹಿಸಲಿದ್ದು, ಇಬ್ಬರು ಇನ್ಸ್ಪೆಕ್ಟರ್ಗಳು, ಮೂವರು ಸಬ್ ಇನ್ಸ್ಪೆಕ್ಟರ್ಗಳು, ಒಬ್ಬ ಮಹಿಳೆ ಅಧಿಕಾರಿ ತಂಡದಲ್ಲಿ ಇರುತ್ತಾರೆ.

ಈ ಪ್ರಕರಣದಲ್ಲಿ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಪೊಲೀಸರು ಎನ್ಕೌಂಟರ್ ನಡೆಸಿದ ನಂತರ ಒಬ್ಬನನ್ನು ಸೆರೆಹಿಡಿಯಲಾಗಿದೆ. ಬಂಧಿತ ವ್ಯಕ್ತಿಗಳಲ್ಲಿ ಸ್ಥಳೀಯ ಗ್ರಾಮಸ್ಥರಾದ ಛೋಟು ಗೌತಮ್ ಮತ್ತು ಪಕ್ಕದ ಹಳ್ಳಿಯ ಜುನೈದ್, ಸೊಹೈಲ್, ಹಫೀಜುಲ್ ರೆಹಮಾನ್, ಕರಿಮುದ್ದೀನ್ ಮತ್ತು ಆರಿಫ್ ಎಂಬ ಇತರ ಐವರು ಸೇರಿದ್ದಾರೆ.
ಆರೋಪಿಗಳಾದ ಜುನೈದ್ ಮತ್ತು ಸೊಹೈಲ್ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ನಂತರ ಕತ್ತು ಹಿಸುಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಸುಮನ್ ಹೇಳಿದ್ದಾರೆ. ಜುನೈದ್, ಸೊಹೈಲ್ ಮತ್ತು ರೆಹಮಾನ್ ಬಾಲಕಿಯರೊಂದಿಗೆ ಸ್ನೇಹ ಬೆಳೆಸಿ ಸಮೀಪದ ಕಬ್ಬಿನ ಗದ್ದೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಸಹೋದರಿಯರು ತಮ್ಮನ್ನು ಮದುವೆಯಾಗುವಂತೆ ಆರೋಪಿಗಳನ್ನು ಒತ್ತಾಯಿಸಿದಾಗ ಅವರನ್ನು ಕೊಂದು ಅವರದ್ದೇ ದುಪಟ್ಟಾದಿಮದ ಮರಕ್ಕೆ ನೇಣು ಹಾಕಿದ್ದಾರೆ ಎಂದು ಸುಮನ್ ಹೇಳಿದ್ದಾರೆ.

ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಶವಗಳನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಮೃತ ಬಾಲಕಿಯರ ಕುಟುಂಬವು ಆರಂಭದಲ್ಲಿ ನಿರಾಕರಿಸಿತ್ತು. ಜಿಲ್ಲಾಡಳಿತವು ಕುಟುಂಬಕ್ಕೆ ಆರ್ಥಿಕ ನೆರವು ಮತ್ತು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ ನಂತರ ಅಂತಿಮವಾಗಿ ಗುರುವಾರ ಸಂಜೆ 5.30 ರ ಸುಮಾರಿಗೆ ಅವರ ಮನೆಯ ಸಮೀಪದ ಹೊಲದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ.
ಆರು ಆರೋಪಿಗಳನ್ನು ಗುರುವಾರ ಪೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಎಲ್ಲರನ್ನೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಆರೋಪಿಗಳಲ್ಲಿ ಯಾರೂ ಅಪ್ರಾಪ್ತರಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications