ಯುಪಿ: ಮತದಾನ ಹಾಕಲ್ಲ ಎಂದಿದ್ದ ಜಯಂತ್ ಚೌಧರಿ ಮಾಡಿದ್ದೇನು?
ಲಕ್ನೋ, ಫೆಬ್ರವರಿ 10: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದ ರಾಷ್ಟ್ರೀಯ ಲೋಕ ದಳ ಮುಖ್ಯಸ್ಥ ಜಯಂತ್ ಚೌಧರಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮಥುರಾ ಪ್ರದೇಶದ ಮತದಾರರಾಗಿರುವ ಆರ್ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ, ತಮ್ಮ ಚುನಾವಣಾ ಪ್ರಚಾರದ ಹಿನ್ನೆಲೆ ಗುರುವಾರ ಮತ ಚಲಾಯಿಸಲು ಹೋಗುವುದಿಲ್ಲ ಎಂದಿದ್ದರು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಪ್ತರಾಗಿರುವ ರಾಷ್ಟ್ರೀಯ ಲೋಕ ದಳ ಪಕ್ಷದ ಮುಖ್ಯಸ್ಥ ಜಯಂತ್ ಚೌಧರಿ ನೀಡಿರುವ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆ ತಾವು ಮತ ಹಾಕುವುದಕ್ಕೆ ಪ್ರಯತ್ನಿಸುವುದಾಗಿ ಹೇಳಿಕೆ ನೀಡಿದ್ದಾರೆ.

"ನಾನು ಮಥುರಾದ ಮತದಾರನಾಗಿದ್ದು, ಇದೀಗ ನಾನು ಬಿಜ್ನೋರ್ನಲ್ಲಿದ್ದೇವೆ. ಏಕೆಂದರೆ ಉತ್ತರ ಪ್ರದೇಶ ಚುನಾವಣೆಯ ಮೊದಲ ಮತ್ತು ಎರಡನೇ ಹಂತದ ಪ್ರಚಾರದ ನಡುವೆ ಕೇವಲ ಎರಡು ದಿನಗಳು ಅಂತರವಿದೆ. ನನ್ನ ಪತ್ನಿ ಬೆಳಿಗ್ಗೆ ಮತ ಹಾಕಿದ್ದಾರೆ. ಪ್ರಚಾರದ ನಂತರ ನಾನು ಸಂಜೆ 6 ಗಂಟೆಯವರೆಗೆ ತೆರೆದಿರುವ ಬೂತ್ಗಳಲ್ಲಿ ಮತ ಚಲಾಯಿಸಲು ಪ್ರಯತ್ನಿಸುತ್ತೇನೆ ಎಂದು ಆರ್ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ ಹೇಳಿದ್ದಾರೆ.
ಜಯಂತ್ ಚೌಧರಿ ವಿರುದ್ಧ ಜೆಪಿ ನಡ್ಡಾ ವಾಗ್ದಾಳಿ:
"ಇಂದು ಮತ ಚಲಾಯಿಸಿ ತನ್ನ ಹಕ್ಕು ಚಲಾಯಿಸಬೇಕಿದ್ದ ಒಬ್ಬ ನಾಯಕ ಅದನ್ನು ಸಹ ಮಾಡಲಿಲ್ಲ. ಇದು ಪರಿವಾರದ (ಸ್ವಜನಪಕ್ಷಪಾತ) ದುರಹಂಕಾರವಾಗಿದೆ. ಅಂತಹವರಿಗೆ ಪ್ರಜಾಪ್ರಭುತ್ವದಿಂದ ತಕ್ಕ ಉತ್ತರ ಸಿಗುತ್ತದೆ" ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದರು. ಭಾರತೀಯ ಜನತಾ ಪಕ್ಷದ ಮತ್ತೊಬ್ಬ ಹಿರಿಯ ನಾಯಕಿ ಉಮಾಭಾರತಿ ಕೂಡ ಜಯಂತ್ ಚೌಧರಿ ಅವರ ಮತದಾನವನ್ನು ತಪ್ಪಿಸಿಕೊಳ್ಳುವ ನಿರ್ಧಾರವನ್ನು ಪ್ರಶ್ನೆ ಮಾಡಿದ್ದರು.
ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ:
ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಶಾಮ್ಲಿ, ಮೀರತ್, ಹಾಪುರ್, ಮುಜಾಫರ್ ನಗರ್, ಭಾಗ್ಪತ್, ಗಜಿಯಾಬಾದ್, ಬುಲಂದ್ ಶಹರ್, ಅಲಿಘರ್, ಆಗ್ರಾ, ಗೌತಮ್ ಬುದ್ಧ ನಗರ್ ಹಾಗೂ ಮಥುರಾ ಜಿಲ್ಲೆಗಳಲ್ಲಿ ಮತದಾನ ನಡೆದಿದೆ. ಕಳೆದ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 53 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಉತ್ತರ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣಾ ಭದ್ರತೆಗಾಗಿ 412 ಸೆಂಟ್ರಲ್ ಪ್ಯಾರಾಮಿಲಿಟರ್ ಫೋರ್ಸ್ ಕಂಪನಿಗಳ 50,000 ಸಿಬ್ಬಂದಿಯನ್ನು ವಿವಿಧ ಕ್ಷೇತ್ರಗಳಲ್ಲಿ ನಿಯೋಜನೆ ಮಾಡಲಾಗಿದೆ.












Click it and Unblock the Notifications