ಜ್ಞಾನವಾಪಿ ಮಸೀದಿ; ಸೋಮವಾರ ಕೋರ್ಟ್ ತೀರ್ಪು, ವಾರಣಾಸಿಯಲ್ಲಿ ಬಿಗಿಭದ್ರತೆ, ನಿಷೇಧಾಜ್ಞೆ

ವಾರಾಣಸಿ, ಸೆ. 11: ಜ್ಞಾನವಾಪಿ ಮಸೀದಿ ಶೃಂಗಾರ್ ಗೌರಿ ವಿವಾದದ ಪ್ರಕರಣದಲ್ಲಿ ಇಲ್ಲಿನ ಜಿಲ್ಲಾ ನ್ಯಾಯಾಲಯ ಸೋಮವಾರ ತೀರ್ಪು ನೀಡಲಿದೆ. ಈ ಹಿನ್ನೆಲೆಯಲ್ಲಿ ಗಲಭೆಯಾಗದಂತೆ ಮುಂಜಾಗ್ರತೆಯಾಗಿ ವಾರಾಣಸಿಯಲ್ಲಿ ನಿರ್ಬಂಧಕಾಜ್ಞೆಗಳನ್ನು ಹೇರಲಾಗಿದೆ. ಬಿಗಿಭದ್ರತೆಯ ವ್ಯವಸ್ಥೆ ಮಾಡಲಾಗಿದೆ.

ವಾರಾಣಸಿಯ ಜ್ಞಾನವಾಪಿ ಮಸೀದಿಯ ಹೊರಗಿನ ಗೋಡೆಯಲ್ಲಿ ಹಿಂದೂ ದೇವರ ಮೂರ್ತಿಗಳಿದ್ದು, ಅವುಗಳಿಗೆ ಪೂಜೆ ಸಲ್ಲಿಸಲು ಕೋರಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ಕಳೆದ ತಿಂಗಳು ಮಾಡಿ ಮುಗಿಸಿತ್ತು. ಸೆಪ್ಟೆಂಬರ್ 12ಕ್ಕೆ ಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.

ಸೋಮವಾರ ಆದೇಶ ಹೊರಬೀಳಲಿದೆ. ಇದು ಕೋಮುಸೂಕ್ಷ್ಮ ವಿಚಾರವಾದ್ದರಿಂದ ಗಲಭೆಗಳಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

Gyanvapi Mosque Case: Prohibitory Orders in Varanasi Ahead of District Court Judgement

ವಿವಿಧ ಪ್ರದೇಶಗಳಲ್ಲಿರುವ ಧಾರ್ಮಿಕ ಮುಖಂಡರನ್ನು ಸಂಪರ್ಕಿಸಿ ಅವರೊಂದಿಗೆ ಚರ್ಚಿಸಿ ಶಾಂತಿ ಪಾಲನೆಗೆ ಧಕ್ಕೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡುವಂತೆ ಎಲ್ಲಾ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಇಡೀ ವಾರಾಣಸಿ ನಗರವನ್ನು ವಿವಿಧ ವಲಯಗಳಾಗಿ ವಿಭಜಿಸಿ ಸೂಕ್ತ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಪಥ ಸಂಚಲನ, ಫ್ಲ್ಯಾಗ್ ಮಾರ್ಚ್‌ಗಳನ್ನು ನಡೆಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ವಾರಾಣಸಿಯ ಪೊಲೀಸ್ ಆಯುಕ್ತ ಎ ಸತೀಶ್ ಗಣೇಶ್ ಭಾನುವಾರ ಹೇಳಿದ್ದಾರೆ.

ಗಲಭೆಕೋರರ ಮೇಲೆ ಹದ್ದಿನ ಕಣ್ಣಿಡಲು ವಾರಾಣಸಿ ಜಿಲ್ಲೆಯ ಗಡಿ ಭಾಗದ ಪ್ರದೇಶಗಳು, ಹೋಟೆಲ್, ಗೆಸ್ಟ್ ಹೌಸ್ ಇತ್ಯಾದಿ ಸ್ಥಳಗಳ ಮೇಲೆ ನಿಗಾ ಇರಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳು ಬರುವ ಸಾಧ್ಯತೆ ಇರುವುದರಿಂದ ಅದರ ಮೇಲೂ ಒಂದು ಕಣ್ಣಿಡಲಾಗಿದೆ.

ಏನಿದು ಪ್ರಕರಣ?
ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದ ಭಾಗವಾಗಿತ್ತು ಎಂಬುದು ಹಿಂದೂಗಳ ವಾದ. ಈ ಮಸೀದಿಯ ಹೊರ ಗೋಡೆಯಲ್ಲಿ ಶೃಂಗಾರ ಗೌರಿ ಸೇರಿದಂತೆ ಹಿಂದೂ ದೇವರ ವಿಗ್ರಹಗಳಿವೆ. ಇವುಗಳಿಗೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಐವರು ಹಿಂದೂ ಮಹಿಳೆಯರು ಅರ್ಜಿ ಹಾಕಿದ್ದರು.

Gyanvapi Mosque Case: Prohibitory Orders in Varanasi Ahead of District Court Judgement

ಜ್ಞಾನವಾಪಿ ಮಸೀದಿ ವಕ್ಫ್ ಆಸ್ತಿ ಆಗಿದೆ ಎಂದು ವಾದಿಸಿರುವ ಅಂಜುಮನ್ ಇಂತೇಜಾಮಿಯಾ ಮಸ್ಜಿದ್ ಕಮಿಟಿ, ಹಿಂದೂಗಳ ಮನವಿಯ ಔಚಿತ್ಯವನ್ನು ಪ್ರಶ್ನಿಸಿದೆ.

ಹಿಂದೂ ಮಂದಿರವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂಬುದು ಹಿಂದೂ ಮಹಿಳಾ ಅರ್ಜಿದಾರರ ಪರ ವಕೀಲ ಮದನ್ ಮೋಹನ್ ಯಾದವ್ ಅವರು ಕೋರ್ಟ್ ಮುಂದೆ ವಾದಿಸಿದ್ದರು.

ವಿಡಿಯೋ ಸರ್ವೆ
ಜಿಲ್ಲಾ ಕೋರ್ಟ್ ವಿಚಾರಣೆಗೆ ಮುನ್ನ ಕೆಳಗಿನ ನ್ಯಾಯಾಲಯವೊಂದು ಜ್ಞಾನವಾಪಿ ಮಸೀದಿಯಲ್ಲಿ ವಿಡಿಯೋ ಸರ್ವೇಕ್ಷಣೆ ನಡೆಸಲು ಆದೇಶಿಸಿತ್ತು. ಕೆಲ ಅಡೆತಡೆಗಳ ನಂತರ ಮೇ 16ರಂದು ಸರ್ವೆ ಕೆಲಸ ಮುಗಿದು ಮೇ 19ರಂದು ವಿಡಿಯೋ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಮಾಡಿರುವ ವಿಡಿಯೋ ರೆಕಾರ್ಡಿಂಗ್ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂಬುದು ಹಿಂದೂ ಅರ್ಜಿದಾರರ ಪರವಾಗಿರುವವರ ವಾದ. ಆದರೆ, ಅದು ಶಿವಲಿಂಗವಲ್ಲ ಎಂಬುದು ಮುಸ್ಲಿಮರ ಪ್ರತಿವಾದ. ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿರುವ ವಿಡಿಯೋಗ್ರಫಿ ಸರ್ವೆಯ ಅಂಶಗಳನ್ನು ಹೊರಗೆ ಹೇಗೆ ಸೋರಿಕೆಯಾಯಿತು ಎಂದೂ ಮುಸ್ಲಿಮ್ ಕಡೆಯವರು ಪ್ರಶ್ನಿಸಿದ್ದರು.

ಕಳೆದ ತಿಂಗಳು ಕೋರ್ಟ್‌ನಲ್ಲಿ ವಾದ ಪ್ರತಿವಾದ, ಸಾಕ್ಷ್ಯಗಳ ಸಲ್ಲಿಕೆ ಎಲ್ಲವೂ ಮುಗಿದಿದ್ದು, ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಸೆಪ್ಟೆಂಬರ್ 12, ಸೋಮವಾರ ಕೋರ್ಟ್ ಆದೇಶ ಪ್ರಕಟಿಸುತ್ತಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+