ಯೋಗಿ ಆಡಳಿತದಲ್ಲಿ ಅತ್ಯಾಚಾರಿಗಳ ದರ್ಬಾರ್: ಜಾಮೀನು ಪಡೆದ ದಿನವೇ ಸಂತ್ರಸ್ತೆಗೆ ಬೆಂಕಿ ಇಟ್ಟ ಆರೋಪಿ
ಉನ್ನಾವೊ, ಡಿಸೆಂಬರ್ 05: ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಒಬ್ಬಾಕೆ, ಪ್ರಕರಣದ ವಿಚಾರಣೆಗೆಂದು ನ್ಯಾಯಾಲಯಕ್ಕೆ ಹೋಗುವ ಹಾದಿಯಲ್ಲಿ ಅತ್ಯಾಚಾರ ಆರೋಪಿಯೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅದೂ ಹಾಡ ಹಗಲೇ.
ಬಿಜೆಪಿ ಶಾಸಕನೊಬ್ಬನ ಅತ್ಯಾಚಾರ ಪ್ರಕರಣದಿಂದ ದೇಶದ ಗಮನ ಸೆಳೆದಿದ್ದ ಉನ್ನಾವೊ ನಲ್ಲಿಯೇ ಈ ಘಟನೆಯೂ ನಡೆದಿದ್ದು, ಯೋಗಿ ಆದಿತ್ಯನಾಥ ರ ಆಡಳಿತವಿರುವ ಉತ್ತರ ಪ್ರದೇಶ ರಾಜ್ಯದ ಮತ್ತೊಂದು ಮುಖವನ್ನು ಇದು ಅನಾವರಣ ಮಾಡುತ್ತಿದೆ.
ಉನ್ನಾವೊ ಬಳಿ ಗ್ರಾಮವೊಂದರಲ್ಲಿ 23 ರ ಯುವತಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಇದರ ಬಗ್ಗೆ ಯುವತಿಯು ಮಾರ್ಚ್ ನಲ್ಲಿಯೇ ದೂರು ದಾಖಲಿಸಿದ್ದರು. ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದರು. ಮತ್ತೊಬ್ಬನನ್ನು ಈವರೆಗೆ ಬಂಧಿಸಲಾಗಿಲ್ಲ.

ಬಂಧಿತ ಆರೋಪಿ ಇಂದು ಬೆಳಿಗ್ಗೆಯಷ್ಟೆ ಜಾಮೀನು ಪಡೆದುಕೊಂಡಿದ್ದ. ಜಾಮೀನು ಪಡೆದು ಹಳ್ಳಿಗೆ ಬಂದು ಇನ್ನೂ ಮುವರನ್ನು ಜೊತೆ ಮಾಡಿಕೊಂಡು ನ್ಯಾಯಾಲಯಕ್ಕೆ ತೆರಳುತ್ತಿದ್ದ ಯುವತಿಯ ಮೇಲೆ ಎಲ್ಲರೆದುರೇ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾನೆ. ಶೇ 80 ಸುಟ್ಟಗಾಯಗಳೊಂದಿಗೆ ಸಂತ್ರಸ್ತೆಯು ಆಸ್ಪತ್ರೆಗೆ ಸೇರಿದ್ದು, ಬದುಕುವ ಸಾಧ್ಯತೆಗಳು ಬಹಳ ಕ್ಷೀಣ ಎನ್ನಲಾಗುತ್ತಿದೆ.
ಯುವತಿಯು ಮಾರ್ಚ್ ತಿಂಗಳಿನಲ್ಲಿಯೇ ಇಬ್ಬರ ವಿರುದ್ಧ ದೂರು ದಾಖಲು ಮಾಡಿದ್ದರೂ ಸಹ ಪೊಲೀಸರು ಎಫ್ಐಆರ್ ದಾಖಲಿಸಿದ ಕೆಲವು ದಿನಗಳ ನಂತರ ಒಬ್ಬ ಆರೋಪಿಯನ್ನು ಮಾತ್ರವೇ ಬಂಧಿಸಿದ್ದರು. ಮತ್ತೊಬ್ಬನನ್ನು ಈ ವರೆಗೂ ಬಂಧಿಸಿಲ್ಲ. ಅಷ್ಟೆ ಅಲ್ಲದೆ, ಆರೋಪಿಯ ಜಾಮೀನು ಅರ್ಜಿಗೆ ಪೊಲೀಸರು ತಕರಾರು ಅರ್ಜಿಯನ್ನೂ ಸಲ್ಲಿಸಿರಲಿಲ್ಲ.
ನಿನ್ನೆಯಷ್ಟೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಮತ್ತು ಕೇಂದ್ರ ಗೃಹ ಮಂತ್ರಿ ರಾಜನಾಥ ಸಿಂಗ್ ಅವರು 'ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ' ಎಂದು ಹೇಳಿದ್ದರು. ಅದರ ಮರುದಿನವೇ ಉತ್ತರ ಪ್ರದೇಶ ರಾಜ್ಯದ ನಿಜ ಬಣ್ಣ ಬಯಲಾಗಿದೆ.












Click it and Unblock the Notifications