ಫ್ರಾನ್ಸ್ನಲ್ಲಿ ಶಿಕ್ಷಕನ ಹತ್ಯೆಗೆ ಬೆಂಬಲ ಆರೋಪ: ಉರ್ದು ಕವಿ ವಿರುದ್ಧ ಪ್ರಕರಣ
ಲಕ್ನೋ, ನವೆಂಬರ್ 2: ಪ್ರವಾದಿ ಮಹಮ್ಮದ್ ವ್ಯಂಗ್ಯಚಿತ್ರಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ನಲ್ಲಿ ಶಿಕ್ಷಕನ ಹತ್ಯೆ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದಕ್ಕಾಗಿ ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫ್ರಾನ್ಸ್ನಲ್ಲಿ ನಡೆದ ಕ್ರೂರ ಹತ್ಯೆಯನ್ನು ಬೆಂಬಲಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಲಕ್ನೋದ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಒಬ್ಬರು ದೂರು ದಾಖಲಿಸಿದ್ದಾರೆ. ರಾಣಾ ಅವರ ಹೇಳಿಕೆಯು ಧರ್ಮದ ಆಧಾರದಲ್ಲಿ ಎರಡು ವಿಭಿನ್ನ ಗುಂಪುಗಳ ನಡುವೆ ವೈರತ್ವ ಮೂಡಿಸುವ ಸಾಧ್ಯತೆ ಇದ್ದು, ಸಾರ್ವಜನಿಕ ವ್ಯವಸ್ಥೆಗೆ ಧಕ್ಕೆ ತರುವಂತಿದೆ ಎಂದು ಅವರು ಹೇಳಿದ್ದಾರೆ.
ಹಿಂದಿ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ರಾಣಾ ಅವರು ಶಿಕ್ಷಕನ ಶಿರಚ್ಛೇದ ಕೊಲೆಗಡುಗರನ್ನು ಸಮರ್ಥಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. 67 ವರ್ಷದ ಕವಿಯ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

'ಯಾರಾದರೂ ನನ್ನ ತಂದೆ, ನನ್ನ ತಂದೆಯ ಬಗ್ಗೆ ಅಶ್ಲೀಲ ಕಾರ್ಟೂನುಗಳನ್ನು ರಚಿಸಿದರೆ ನಾನು ಆತನನ್ನು ಕೊಂದುಬಿಡುತ್ತೇನೆ. ಭಾರತದಲ್ಲಿ ಯಾರಾದರೂ ಯಾವುದೇ ದೇವರು ಅಥವಾ ದೇವತೆ ಅಥವಾ ಸೀತಾ ಮತ್ತು ಶ್ರೀರಾಮನ ಬಗ್ಗೆ ಕೀಳಾದ, ದುರದೃಷ್ಟಕರ ಮತ್ತು ಆಕ್ಷೇಪಾರ್ಹವಾದ, ಅಶ್ಲೀಲತೆಗೆ ಎಡೆಮಾಡಿಕೊಡುವಂತಹ ಕಾರ್ಟೂನು ಮಾಡಿದರೆ ನಾನು ಆತನನ್ನು ಕೊಲ್ಲಬೇಕು ಎನಿಸುತ್ತದೆ' ಎಂದು ರಾಣಾ ಹೇಳಿದ್ದರು ಎನ್ನಲಾಗಿದೆ.
'ನಾನು ಹೇಳಿದ್ದು, ಈ ರೀತಿ ಕಾರ್ಟೂನು ಯಾರೇ ಮಾಡಿದ್ದರೂ ಅದು ತಪ್ಪು. ಒಬ್ಬರನ್ನು ಯಾರಾದರೂ ಕೊಲ್ಲುವುದು ಇನ್ನೂ ದೊಡ್ಡ ತಪ್ಪು ಎಂದು. ಇದನ್ನೇ ನಾನು ಹೇಳಿರುವುದು. ಆದರೆ ನಾನು ಹೇಳದೆ ಇರುವುದನ್ನು ಜನರು ಹುಡುಕಿದ್ದಾರೆ. ಧರ್ಮದ ಹೆಸರಿನಲ್ಲಿ ಈ ರೀತಿಯ ಕ್ರೌರ್ಯವನ್ನು ಹರಡಿಸುವುದು ಸರಿಯಲ್ಲ ಎನ್ನುವುದು ನನ್ನ ಹೇಳಿಕೆಯಾಗಿತ್ತು' ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications