ಕೋಮು ಹಿಂಸೆಯೇ ನಮ್ಮಪ್ಪನ ಜೀವ ಕಿತ್ತುಕೊಂಡಿತು: ಪುತ್ರನ ಭಾವುಕ ನುಡಿ
ಲಕ್ನೋ, ಡಿಸೆಂಬರ್ 04: "ಧರ್ಮದ ಹೆಸರಿನಲ್ಲಿ ಹಿಂಸೆ ನಡೆಯುವುದನ್ನು ನಮ್ಮ ತಂದೆ ಎಂದಿಗೂ ವಿರೋಧಿಸುತ್ತಿದ್ದರು. ಆದರೆ ಇಂದು ನನ್ನ ತಂದೆ ಹಿಂದು-ಮುಸ್ಲಿಂ ಸಂಘರ್ಷದಿಂದ ನಡೆದ ಹಿಂಸೆಯಲ್ಲಿ ಮೃತರಾದರು. ನಾಳೆ ಇನ್ಯಾರ ತಂದೆ ಮೃತರಾಗುತ್ತಾರೋ...?"
ಇದು ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಮೃತರಾದ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರ ಪುತ್ರ ಅಭಿಷೇಕ್ ಅವರ ಭಾವುಕ ಮಾತು.
ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಸೋಮವಾರ ನಡೆಯುತ್ತಿದ್ದ ಪ್ರತಿಭಟನೆಯೇ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಆರಂಭವಾದ ಕೋಮು ಸಂಘರ್ಷವನ್ನು ತಡೆಯಲು ಮುಂದಾದ ಸುಬೋಧ್ ಕುಮಾರ್ ಸಿಂಗ್ ಅವರು ಮೃತಪಟ್ಟಿದ್ದರು.

ಮೃತ ತಂದೆಯ ಬಗ್ಗೆ ಅವರ ಪುತ್ರ ಆಡಿದ ಮಾತು ಕಣ್ಣೀರುಕ್ಕಿಸುವಂತಿತ್ತು. "ನಮ್ಮ ತಂದೆ ಒಬ್ಬ ಅತ್ಯುತ್ತಮ ನಾಗರಿಕರಾಗಿದ್ದರು. ಅವರಿಗೆ ಸಮಾಜದಲ್ಲಿ ಹಿಂಸೆ ನಡೆಯುವುದು ಎಂದಿಗೂ ಇಷ್ಟವಿರಲಿಲ್ಲ. ಆದರೆ ಆ ಹಿಂಸೆಯಿಂದಲೇ ಅವರು ಮೃತರಾಗಿದ್ದು ದುರದೃಷ್ಟಕರ. ಇಂಥ ಹಿಂಸೆಗಳಿಗೆ ಕೊನೆ ಎಂದು? ಇಂದು ನನ್ನ ತಂದೆ ಮೃತರಾದರು, ನಾಳೆ ಯಾರ ತಂದೆಯೋ?" ಎಂದು ಅಭಿಷೇಕ್ ಭಾವುಕರಾಗಿ ಹೇಳಿದರು.
ಬುಲಂದ್ ಶಹರ್ ನಲ್ಲಿ ಇಂದು ಸಹ ಪ್ರತಿಭಟನೆ ಮುಂದುವರಿದಿದ್ದು, ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.












Click it and Unblock the Notifications