Video: ಉತ್ತರ ಪ್ರದೇಶದಲ್ಲಿ ಶಾಸಕರು ತೆಂಗಿನಕಾಯಿ ಒಡೆದರೆ ಹೊಸ ರಸ್ತೆಯೇ ಬಿರುಕು!
ಲಕ್ನೋ, ಡಿಸೆಂಬರ್ 4: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಂತೆ ಭಾರತೀಯ ಜನತಾ ಪಕ್ಷ ತೀವ್ರ ಮುಜುಗರಕ್ಕೆ ಒಳಗಾಗುವಂತಾ ಘಟನೆಯೊಂದು ಬಿಜ್ನೋರ್ ನಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಆಗುತ್ತಿದೆ.
ರಾಜ್ಯದಲ್ಲಿ ಬರೋಬ್ಬರಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಡಾಂಬರ್ ರಸ್ತೆಯು ಕೇವಲ ಒಂದು ತೆಂಗಿನಕಾಯಿ ಪೆಟ್ಟಿಗೆ ಬಿರುಕು ಬಿಟ್ಟಿದೆ. ಬಿಜ್ನೋರ್ ಜಿಲ್ಲೆಯಲ್ಲಿ ಬರೋಬ್ಬರಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ 7.5 ಕಿಲೋ ಮೀಟರ್ ಉದ್ದದ ರಸ್ತೆಯನ್ನು ಉದ್ಘಾಟಿಸಲು ಬಿಜ್ನೋರ್ ಸದರ್ ವಿಧಾನಸಭೆ ಕ್ಷೇತ್ರದ ಶಾಸಕಿ ಸುಚಿ ಮೌಸಮ್ ಚೌಧರಿರನ್ನು ಆಹ್ವಾನಿಸಲಾಗಿತ್ತು.
ಹೊಸ ರಸ್ತೆ ಉದ್ಘಾಟಿಸಲೆಂದು ಶಾಸಕಿಯು ರಸ್ತೆಯ ಮೇಲೆ ತೆಂಗಿನಕಾಯಿ ಒಡೆದರು. ಆದರೆ ತೆಂಗಿನಕಾಯಿ ಒಡೆಯುವುದರ ಬದಲಿಗೆ ಹೊಸ ರಸ್ತೆಯೇ ಬಿರುಕು ಬಿಟ್ಟಿರುವುದು ಸ್ವತಃ ಶಾಸಕರೇ ತೀವ್ರ ಮುಜುಗರಕ್ಕೆ ಈಡಾಗುವಂತೆ ಮಾಡಿತು.

ಮೂರು ಗಂಟೆ ಸ್ಥಳದಲ್ಲೇ ಕುಳಿತ ಶಾಸಕಿ:
ಹೊಸ ರಸ್ತೆ ಉದ್ಘಾಟನೆ ದಿನವೇ ರಸ್ತೆ ಬಿರುಕು ಬಿಟ್ಟ ಘಟನೆಯಿಂದ ಕುಪಿತಗೊಂಡ ಶಾಸಕಿ ಸುಚಿ ಮೌಸಮ್ ಚೌಧರಿಯವರು ಮೂರು ಗಂಟೆಗಳ ಕಾಲ ಸ್ಥಳದಲ್ಲೇ ಕುಳಿತರು. ಈ ರಸ್ತೆಯ ಕಾಮಗಾರಿ ನಡೆಸಿದವರು ಯಾರು, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಆಗ್ರಹಿಸಿದರು. ತದನಂತರ ರಸ್ತೆಯ ಮಾದರಿಯನ್ನು ಪಡೆದುಕೊಂಡು ಪರೀಕ್ಷೆಗೆ ರವಾನಿಸಲಾಯಿತು. ಕಳಪೆ ಕಾಮಗಾರಿಗೆ ಹೊಣೆಯಾದವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಶಾಸಕಿ ಸೂಚನೆ ನೀಡಿದರು.












Click it and Unblock the Notifications