ಚುನಾವಣೆ ಬಳಿಕ ಬಿಜೆಪಿ ಉತ್ತರ ಪ್ರದೇಶದಿಂದ ವಲಸೆ ಹೋಗಬೇಕಾಗುತ್ತದೆ: ಅಖಿಲೇಶ್
ಲಕ್ನೋ, ಫೆಬ್ರವರಿ 2: ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯು ಉತ್ತರ ಪ್ರದೇಶದಿಂದ ವಲಸೆ ಹೋಗಬೇಕಾಗುತ್ತದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿಯು ನಕಾರಾತ್ಮಕ ರಾಜಕಾರಣ ಮಾಡುತ್ತಿದೆ, ಎಸ್ಪಿ-ಆರ್ಎಲ್ಡಿ ಸಂಬಂಧವು ಸೋದರತ್ವವನ್ನು ಪ್ರತಿನಿಧಿಸುತ್ತದೆ. ಕೈರಾನಾ ನಿರ್ಗಮನದ ಬಗ್ಗೆ ಮಾತನಾಡುವವರು ಚುನಾವಣೆಯ ಬಳಿಕ ಉತ್ತರ ಪ್ರದೇಶದಿಂದ ವಲಸೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ಶಾಮ್ಲಿಕಾ ಕೈರಾನದಲ್ಲಿ ಮೈತ್ರಿಕೂಟದ ಪಾಲುದಾರ ರಾಷ್ಟ್ರೀಯ ಲೋಕದಳದ ಅಧ್ಯಕ್ಷ ಜಯಂತ್ ಚೌಧರಿ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಣಾಡಿದರು. ಬಜೆಟ್ನಲ್ಲಿ ವಜ್ರಗಳು, ಚಪ್ಪಲಿಗಳು ಮತ್ತು ಬೂಟುಗಳನ್ನು ಅಗ್ಗಗೊಳಿಸಲಾಗಿದೆ.

ಅಗ್ಗದ ವಜ್ರಗಳು ಬಡವರಿಗೆ ಹೇಗೆ ಸಹಾಯ ಮಾಡುತ್ತವೆ?, ಬಡವರ, ಯುವಕರ ಚಪ್ಪಲಿ, ಬೂಟು ಸವೆದು ಹೋಗಿದೆ ಆದ್ರೆ ಅವರ ಸಮಸ್ಯೆಗಳನ್ನು ಬಗೆಹರಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂದರು.
ವಚಾರ್ಷಿಕ ಹಣಕಾಸು ಹೇಳಿಕೆಯನ್ನು ಅಮೃತ್ ಕಾಲ ಎಂದಿರುವ ಕೇಂದ್ರವನ್ನು ಲೇವಡಿ ಮಾಡಿದ ಅವರು, ಹಿಂದಿನ ಬಜೆಟ್ಗಳು ವಿಷವೇ ಎಂದು ಪ್ರಶ್ನೆ ಮಾಡಿದರು.
ಇನ್ನೊಂದೆಡೆ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದ ಫಲವಾಗಿ ಕೋವಿಡ್ 19 ಸಾಂಕ್ರಾಮಿಕದ ಎರಡು ವರ್ಷಗಳ ಅವಧಿಯಲ್ಲಿ ಕೂಡ ದೇಶದ ಪ್ರತಿ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಉತ್ತರ ಪ್ರದೇಶದ ಅಟ್ರೌಲಿ ಕ್ಷೇತ್ರದಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿದ ಅಮಿತ್ ಶಾ, ಕೋವಿಡ್ ಸಾಂಕ್ರಾಮಿಕದ ಕಳೆದ ಎರಡು ವರ್ಷಗಳಲ್ಲಿ ಕಮಲದ ಮೇಲೆ ಕುಳಿತುಕೊಂಡ ಲಕ್ಷ್ಮಿ ದೇವತೆ ಪ್ರತಿ ಮನೆ ಮನೆಗೂ ಬಂದಿದ್ದಾಳೆ. ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಅವರು ಎಂದಿಗೂ ಬಡವರ ಬಗ್ಗೆ ಚಿಂತಿಸುವುದಿಲ್ಲ. ಹಾಗೆಯೇ ಅಭಿವೃದ್ಧಿ ಪರವಾಗಿ ಏನನ್ನೂ ಮಾಡುವುದಿಲ್ಲ ಎಂದು ಆರೋಪಿಸಿದ್ದಾರೆ.
ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ಮನವಿ ಮಾಡಿದ ಅಮಿತ್ ಶಾ, ಬಿಜೆಪಿ ಲಸಿಕೆ ಎಂಬ ಅಖಿಲೇಶ್ ಯಾದವ್ ಹೇಳಿಕೆ ಬಗ್ಗೆ ವ್ಯಂಗ್ಯವಾಡಿದರು. 'ನೀವೆಲ್ಲರೂ ಲಸಿಕೆ ಪಡೆದುಕೊಂಡಿದ್ದೀರಿ, ಅಲ್ಲವೇ? ಅಖಿಲೇಶ್ ಯಾದವ್ ಅವರು ಇದು ಬಿಜೆಪಿ ಲಸಿಕೆ ಎಂದು ಹೇಳುತ್ತಿದ್ದರು. ಕೊನೆಗೆ ಅವರೇ ಲಸಿಕೆ ಪಡೆದುಕೊಂಡರು' ಎಂದು ಟೀಕಿಸಿದ್ದಾರೆ.
2014, 2017 ಮತ್ತು 2019ರ ಚುನಾವಣೆಗಳು ಉತ್ತರ ಪ್ರದೇಶದ ಹಣೆಬರಹವನ್ನು ಬದಲಿಸಿವೆ. 'ಬುವಾ- ಭತಿಜಾ' (ಚಿಕ್ಕಮ್ಮ- ಸೋದರಳಿಯ) ಅವರ ಜಾತಿವಾದಿ ಸರ್ಕಾರಗಳು ಉತ್ತರ ಪ್ರದೇಶಕ್ಕೆ ಯಾವುದೇ ಒಳಿತು ಮಾಡಲು ಸಾಧ್ಯವಿಲ್ಲ. ಈ ರಾಜ್ಯವು 'ಬಿಮಾರು' ರಾಜ್ಯಗಳ ವರ್ಗದಲ್ಲಿ ಬರುತ್ತಿತ್ತು. ಬಿಜೆಪಿ ಸರ್ಕಾರ ಬದಲಾವಣೆ ತರುವ ಬಯಕೆಯೊಂದಿಗೆ ಕೆಲಸ ಮಾಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.












Click it and Unblock the Notifications