ಅಯೋಧ್ಯೆ ತೀರ್ಪು: ಮೇಲ್ಮನವಿ ಸಲ್ಲಿಸದಿರಲು 2 ಕಾರಣ ನೀಡಿದ ಮುಸ್ಲಿಂ ಮುಖಂಡ
Recommended Video
ಲಕ್ನೋ, ನವೆಂಬರ್ 14: ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಹಲವರಿಗೆ ತೃಪ್ತಿ ತಂದಿಲ್ಲ. ತನ್ನ ಅತೃಪ್ತಿಯನ್ನು ಅರ್ಜಿದಾರರಲ್ಲೊಬ್ಬರಾದ ಸುನ್ನಿ ವಕ್ಫ್ ಬೋರ್ಡ್ ಸಹ ವ್ಯಕ್ತಪಡಿಸಿದ್ದರೂ ಈ ಕುರಿತು ಮೇಲ್ಮನಿವಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅದಕ್ಕೆ ಎರಡು ಕಾರಣಗಳನ್ನೂ ಅದು ನೀಡಿದೆ. ಹಲವು ದಶಕಗಳಿಂದ ವಿವಾದದಲ್ಲಿದ್ದ ಅಯೋಧ್ಯೆ ವಿವಾದದ ಅಂತಿಮ ತೀರ್ಪು ನವೆಂಬರ್ 09 ರಂದು ಹೊರಬಿದ್ದಿದ್ದು, ತೀರ್ಪಿನಲ್ಲಿ ರಾಮಜನ್ಮಭೂಮಿ ವಿವಾದಿತ ಜಾಗವನ್ನು ರಾಮಜನ್ಮಭೂಮಿ ನ್ಯಾಸ ಟ್ರಸ್ಟ್ ಗೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಸುನ್ನಿ ವಕ್ಫ್ ಬೋರ್ಡಿಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪರ್ಯಾಯ ಜಮೀನು ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿತ್ತು.
ತೀರ್ಪಿನ ನಂತರ ಸುನ್ನಿ ವಕ್ಫ್ ಬೋರ್ಡ್ ಮೇಲ್ಮನವಿ ಸಲ್ಲಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಮೇಲ್ಮನವಿ ಸಲ್ಲಿಸದಿರಲು ಇರುವ ಎರಡು ಕಾಣಗಳು ಇವು.

ಕಾರಣ 1
ಈ ಕುರಿತು ಮಾತನಾಡಿದ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಅಧ್ಯಕ್ಷ ಜಾಫರ್ ಫಾರೂಖಿ, "ಸುಪ್ರೀಂ ಕೋರ್ಟ್ ತೀರ್ಪು ಏನೇ ಬಂದರೂ ನಾವದಕ್ಕೆ ಬದ್ಧವಾಗಿರುತ್ತೇವೆ ಎಂದು ಈ ಮೊದಲೇ ಹೇಳಿದ್ದೆವು. ಆದ್ದರಿಂದ ಈಗಲೂ ನಮ್ಮ ಆ ಮಾತಿಗೆ ನಾವು ಬದ್ಧರಾಗಿದ್ದೇವೆ. ಆ ಕಾರಣದಿಂದ ನಾವು ಮೇಲ್ಮನವಿ ಸಲ್ಲಿಸುವುದಿಲ್ಲ" ಎಂದಿದ್ದಾರೆ.

ಕಾರಣ 2
"ಜೊತೆಗೆ ಈ ವಿವಾದ ಹಲವು ವರ್ಷಗಳಿಂದಲೂ ಸಮಾಜದ ಎರಡು ಮತಗಳಲ್ಲಿ ಒಡಕು ಮೂಡಿಸುತ್ತಿದೆ. ಭಿನ್ನಾಭಿಪ್ರಾಯ ಸೃಷ್ಟಿಸುತ್ತಿದೆ. ಕೋಮುಸೌಹಾರ್ದ ಕದಡುತ್ತಿದೆ. ಆದ್ದರಿಂದ ಇದೇ ಪರಿಸ್ಥಿತಿ ಮತ್ತೆ ಭವಿಷ್ಯದಲ್ಲೂ ಮುಂದುವರಿಯುವುದು ನಮಗೆ ಇಷ್ಟವಿಲ್ಲ. ಆದ್ದರಿಂದ ನಾವು ಮೇಲ್ಮನಿ ಸಲ್ಲಿಸುವುದಿಲ್ಲ" ಎಂದು ಫಾರೂಖಿ ಹೇಳಿದ್ದಾರೆ.

ತಕರಾರು ತೆಗೆದ ಮೂಲ ಅರ್ಜಿದಾರ
ಅಯೋಧ್ಯೆ ತೀರ್ಪನ್ನ್ ಸ್ವಾಗತಿಸಿದ್ದ ಮೂಲ ಅರ್ಜಿದಾರ, ಅಯೋಧ್ಯಾ ನಿವಾಸಿ ಇಕ್ಬಾಲ್ ಅನ್ಸಾರಿ ನಂತರ ತಕರಾರು ಎತ್ತಿದ್ದಾರೆ. 5 ಎಕರೆ ಭೂಮಿ ನೀಡುವುದಿದ್ದರೆ ಆಯೋಧ್ಯಾದಲ್ಲಿ ಸರ್ಕಾರ ವಶಪಡಿಸಿಕೊಂಡ 67 ಎಕರೆ ಸ್ಥಳದಲ್ಲೇ ನೀಡುವಂತೆ ಒತ್ತಾಯಿಸಿದ್ದರು.

ಓವೈಸಿ ತಗಾದೆ
"ಬಾಬ್ರಿ ಮಸೀದಿ ಅಕ್ರಮ ಎಂದಾದರೆ ಎಲ್ ಕೆ ಅಡ್ವಾನಿ ಅವರ ಮೇಲೆ ಪ್ರಕರಣವೇಕೆ? ಅವರ ಮೇಲೆ ಪ್ರಕರಣವಿದೆ ಎಂದಾದ ಮೇಲೆ ಬಾಬ್ರಿ ಮಸೀದಿ ಸಕ್ರಮ ಎಂದೇ ಅಲ್ಲವೇ?" ಎಂದಿದ್ದ ಹೈದರಾಬಾದ ಸಂಸದ ಅಸಾದುದ್ದೀನ್ ಓವೈಸಿ, "ಐದು ಎಕರೆ ಜಮೀನಿನ ಭಿಕ್ಷೆ ನಮಗೆ ಬೇಕಿಲ್ಲ. ಹೈದರಬಾದಿನಲ್ಲಿ ರಸ್ತೆಗಿಳಿಸುವ ದೇಣಿಗೆ ಎತ್ತಿಯೇ ಆ ಜಮೀನು ಪಡೆಯಬಹುದು. ನಮಗೆ ನ್ಯಾಯ ಬೇಕು. ತೀರ್ಪು ತೃಪ್ತಿ ತಂದಿಲ್" ಎಂದಿದ್ದರು.











Click it and Unblock the Notifications