ರಾಮ ಮಂದಿರ ಭೂಮಿ ಪೂಜೆ ಸಮಯ ಮತ್ತು ಮುಹೂರ್ತ
ಲಕ್ನೋ, ಆಗಸ್ಟ್.03: ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ಉತ್ತರ ಪ್ರದೇಶದ ಅಯೋಧ್ಯೆ ಸಿಂಗಾರಗೊಂಡು ಝಗಮಗಿಸುತ್ತಿದೆ. ರಾಮಜನ್ಮಭೂಮಿ ಎಂತಲೇ ನಂಬಲಾಗಿರುವ ನೆಲದಲ್ಲಿ ಮಂದಿರ ನಿರ್ಮಾಣಕ್ಕೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.
Recommended Video
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆಗೆ ದಿನಾಂಕ ನಿಗದಿಗೊಳಿಸಿದ್ದು ಕರ್ನಾಟಕದ ಖ್ಯಾತ ವಿದ್ವಾಂಸರು ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯ ಖ್ಯಾತ ವಿದ್ವಾಂಸ ಎನ್.ಆರ್.ವಿಜಯೇಂದ್ರ ಶರ್ಮಾ ಅವರು ನಿಗದಿಪಡಿಸಿದ ದಿನಾಂಕವು ವಾಸ್ತು ಮುಹೂರ್ತ ಮತ್ತು ಭೂಮಿ ಪೂಜೆಗೆ ಸೂಕ್ತವಾಗಿದೆ.
ಅಯೋಧ್ಯೆಯ ರಾಮ ದೇವಾಲಯದ ಭೂಮಿ ಪೂಜೆಗೆ ಗುರುತಿಸಿರುವ ಬೆಳ್ಳಿ ಇಟ್ಟಿಗೆಯನ್ನು ಆಗಸ್ಟ್ ತಿಂಗಳಿನಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12ರೊಳಗೆ ಇರಿಸಬೇಕಿತ್ತು. ಈ ಹಿನ್ನೆಲೆ ಆಗಸ್ಟ್.05ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಾಹ್ನ 12.15 ಗಂಟೆಗೆ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಅಭಿಜಿತ್ ಮುಹೂರ್ತದಲ್ಲಿ ಭೂಮಿ ಪೂಜೆ:
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರೊಬ್ಬರ ಪ್ರಕಾರ, ಆಗಸ್ಟ್.05ರ ಮಧ್ಯಾಹ್ನ 12.15ಕ್ಕೆ ಸಲ್ಲುವ "ಅಭಿಜಿತ್ ಮುಹೂರ್ತ"ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇನ್ನು, "ಅಭಿಜಿತ್ ಮುಹೂರ್ತ ಎಲ್ಲಾ ಅಡೆತಡೆಗಳನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಮಹಂತ್ ನರ್ತ್ಯ ಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಮಹಂತ್ ಕಮಲ್ ನಯನ್ ದಾಸ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಉನ್ನತ ಶ್ರೇಣಿಯ ಅತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಬಿಜೆಪಿಯ ಹಿರಿಯ ಮುಖಂಡರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications