ತಾಯಿಯ ಸಾವಿನ ಸುದ್ದಿ ನಡುವೆಯೇ 15 ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ ಆಂಬ್ಯುಲೆನ್ಸ್ ಚಾಲಕ
ಲಕ್ನೋ, ಮೇ 26: ಆಂಬುಲೆನ್ಸ್ ಚಾಲಕರೋರ್ವರು ತಾವು ಎಂದಿನಂತೆ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭ ತನ್ನ ತಾಯಿ ಮೃತಪಟ್ಟ ಬಗ್ಗೆ ಸುದ್ದಿ ತಿಳಿದರೂ ತನ್ನ ಕರ್ತವ್ಯ ಮುಂದುವರಿಸಿ ಒಟ್ಟು 15 ಕೋವಿಡ್ ಸೋಂಕಿತ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿದ ಘಟನೆ ಮಥುರಾದಲ್ಲಿ ನಡೆದಿದೆ.
ಆಂಬುಲೆನ್ಸ್ ಚಾಲಕ ಪ್ರಭಾತ್ ಯಾದವ್ ಎಂದಿನಂತೆ ಕೋವಿಡ್ ರೋಗಿಗಳನ್ನು ಮಥುರಾದ ಆಸ್ಪತ್ರೆಗಳಿಗೆ ಕರೆದೊಯ್ಯುತ್ತಿದ್ದು ಈ ವೇಳೆ, ಕುಟುಂಬಸ್ಥರು ಕರೆ ಮಾಡಿ ಪ್ರಭಾತ್ ತಾಯಿ ನಿಧನರಾದ ಸುದ್ದಿ ತಿಳಿಸಿದ್ದಾರೆ. ಆದರೆ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಪ್ರಭಾತ್ ಕೊರೊನಾದ ಈ ಸಂದರ್ಭದಲ್ಲಿ ತನ್ನ ಕರ್ತವ್ಯ ಅತೀ ಮುಖ್ಯ ಎಂದು ಭಾವಿಸಿ ತನ್ನ ಸಮಯಾವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಒಂದು ದಿನದಲ್ಲೇ ಒಟ್ಟು 15 ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಭಾತ್ ಯಾದವ್, ತಾಯಿಯ ನಿಧನದ ಸುದ್ದಿ ಕೇಳಿ ನಾನು ನಡುಗುತ್ತಿದ್ದೆ, ಆದರೆ ನಾನು ಮನಸ್ಸು ಗಟ್ಟಿ ಮಾಡಿ ನನ್ನ ಕರ್ತವ್ಯ ಮುಂದುವರಿಸಬೇಕಾಗಿತ್ತು. ನನಗೆ ಒಂದು ಕ್ಷಣಕ್ಕೆ ಏನು ಮಾಡುವುದು ಎಂದು ತೋಚಲಿಲ್ಲ. ಆದರೆ ಕೊರೊನಾದ ಈ ಸಂದರ್ಭದಲ್ಲಿ ನಾನು ಕೆಲಸ ಮುಂದುವರಿಸುವುದೇ ಸೂಕ್ತ ಎಂದು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ನನ್ನ ತಾಯಿ ಮೃತಪಟ್ಟಾಗಿದೆ. ಈ ಸಮಯದಲ್ಲಿ ನಾನು ನನ್ನ ಕೆಲಸ ಮುಂದುವರಿಸಿ ಕೆಲವು ಜನರನ್ನು ಉಳಿಸಲು ಸಾಧ್ಯವಾದರೆ, ನನ್ನ ತಾಯಿಗೆ ಹೆಮ್ಮೆಯಾಗುತ್ತದೆ ಎಂದಿದ್ದಾರೆ.
ಇನ್ನು ಯಾದವ್ ತನ್ನ ಶಿಫ್ಟ್ನ ಕೆಲಸ ಮುಗಿಸಿ 200 ಕಿ.ಮೀ ಪ್ರಯಾಣಿಸಿ ತನ್ನ ಗ್ರಾಮ ಮೈನ್ಪುರಿಯನ್ನು ತಲುಪಿದ್ದಾರೆ. ಆ ಬಳಿಕ ತನ್ನ ತಾಯಿಯ ಕೊನೆಯ ವಿಧಿಗಳನ್ನು ನೆರವೇರಿಸಿದ ಯಾದವ್ ಮರುದಿನ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ.
ಸುಮಾರು ಒಂಬತ್ತು ವರ್ಷಗಳಿಂದ 108 ಆಂಬುಲೆನ್ಸ್ಗಳನ್ನು ಓಡಿಸುತ್ತಿರುವ ಯಾದವ್ ಕಳೆದ ವರ್ಷ ಮಾರ್ಚ್ನಲ್ಲಿ ಕೋವಿಡ್ ಕರ್ತವ್ಯಕ್ಕೆ ಆಯ್ಕೆಯಾಗಿದ್ದಾರೆ. ಆದರೆ, ಕಳೆದ ವರ್ಷ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಬಳಿಕ ಯಾದವ್ರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿತ್ತು. ಆದರೆ ಈಗ ಮತ್ತೆ ಎರಡನೇ ಕೊರೊನಾ ಅಲೆ ಆರಂಭವಾದ ಹಿನ್ನೆಲೆ ಯಾದವ್ ಏಪ್ರಿಲ್ನಿಂದ ಮತ್ತೆ ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇನ್ನು ವರದಿಯ ಪ್ರಕಾರ ಯಾದವ್ ತಂದೆ ಕಳೆದ ವರ್ಷ ಜುಲೈನಲ್ಲಿ ಕೋವಿಡ್ -19 ಕಾರಣದಿಂದ ಮೃತಪಟ್ಟಿದ್ದರು. ಆಗಲೂ, ಯಾದವ್ ಮನೆಗೆ ಹೋಗಿ, ತಂದೆಯ ಕೊನೆಯ ವಿಧಿಗಳನ್ನು ನೆರವೇರಿಸಿ ಮತ್ತೆ ಕೆಲಸಕ್ಕೆ ಹಾಜರಾಗಿದ್ದರು.
ಈ ಬಗ್ಗೆ ಮಾತನಾಡಿರುವ ಮಥುರಾದ 102 ಮತ್ತು 108 ಆಂಬುಲೆನ್ಸ್ ಸೇವೆಗಳ ಪ್ರೋಗ್ರಾಂ ಮ್ಯಾನೇಜರ್ ಅಜಯ್ ಸಿಂಗ್, ಯಾದವ್ ಸಮರ್ಪಿತ ಕೆಲಸಗಾರ. ಯಾದವ್ ತಾಯಿಯ ಅಂತ್ಯಕ್ರಿಯೆಯ ನಂತರ ಕೆಲವು ದಿನಗಳ ಕಾಲ ಮನೆಯಲ್ಲಿಯೇ ಇರಿ ಎಂದು ತಿಳಿಸಿದ್ದೆವು. ಆದರೆ ಯಾದವ್ ನಿರಾಕರಿಸಿ ಕೆಲಸಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ಆಗಿರುವುದರಿಂದ ಮತ್ತು ಯಾವುದೇ ಸಾರ್ವಜನಿಕ ಸಾರಿಗೆ ಲಭ್ಯವಿಲ್ಲದ ಕಾರಣ ಅಜಯ್ ಸಿಂಗ್, ಆಂಬುಲೆನ್ಸ್ ಚಾಲಕ ಯಾದವ್ ಮನೆಗೆ ತೆರಳುವ ವ್ಯವಸ್ಥೆ ಮಾಡಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications