ಲೋಕಸಭಾ ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ
ಲಕ್ನೋ ಮಾರ್ಚ್ 22: ಸಮಾಜವಾದಿ ಪಕ್ಷದ (ಎಸ್ಪಿ) ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಇಂದು ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಲು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದರು. ಕರ್ಹಾಲ್ನಿಂದ ಶಾಸಕರಾಗಿ ಮುಂದುವರಿಯಲು ಅಜಮ್ಗಢದ ಲೋಕಸಭಾ ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ ನೀಡಿದರು.
ಅಖಿಲೇಶ್ ಅವರು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಜಂಗಢ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮುಕ್ತಾಯಗೊಂಡ ಚುನಾವಣೆಯಲ್ಲಿ ಅಖಿಲೇಶ್ ಅವರು ಮೈನ್ಪುರಿ ಜಿಲ್ಲೆಯ ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲಿ 67,504 ಮತಗಳ ಅಂತರದಿಂದ ಜಯ ಸಾಧಿಸಿದ್ದು 1,48,196 ಮತಗಳನ್ನು ಗಳಿಸಿದ್ದಾರೆ. ಅವರ ವಿರುದ್ಧ ಸ್ಪರ್ಧಿಸಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇಂದ್ರ ಸಚಿವ ಎಸ್ಪಿ ಸಿಂಗ್ ಬಘೇಲ್ ಅವರು 80,692 ಮತಗಳನ್ನು ಪಡೆದಿದು ಸೋತಿದ್ದಾರೆ.
ಕರ್ಹಾಲ್ ಎಸ್ಪಿಯ ಭದ್ರಕೋಟೆ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಯಾದವ್ ಶೇ.60.12ರಷ್ಟು ಮತಗಳನ್ನು ಪಡೆದರೆ, ಬಘೇಲ್ ಶೇ.32.74ರಷ್ಟು ಮತಗಳನ್ನು ಪಡೆದಿದ್ದಾರೆ. ಯಾದವ್ ಅವರು ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಮೈನ್ಪುರಿ ಸಂಸದೀಯ ಸ್ಥಾನವನ್ನು ಪ್ರಸ್ತುತ ಅಖಿಲೇಶ್ ಅವರ ತಂದೆ ಮತ್ತು ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೊಂದಿದ್ದಾರೆ. 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಮಾಜವಾದಿ ಪಕ್ಷದ ಮುಸ್ಲಿಂ ಮುಖ ಅಜಂ ಖಾನ್ ಕೂಡ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಖಾನ್ ಅವರು ರಾಂಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ.
JUST IN: @yadavakhilesh resigns as Lok Sabha MP pic.twitter.com/rv6Jn8pHxp
— Aditi A (@AditiAnarayanan) March 22, 2022
ಉತ್ತರ ಪ್ರದೇಶದ ಮಾಜಿ ಕ್ಯಾಬಿನೆಟ್ ಸಚಿವ ಮತ್ತು ಒಂಬತ್ತು ಅವಧಿಯ ಶಾಸಕರಾಗಿರುವ ಖಾನ್, ರಾಮ್ಪುರ ಕ್ಷೇತ್ರದಿಂದ ಬಿಜೆಪಿಯ ಸಮೀಪದ ಪ್ರತಿಸ್ಪರ್ಧಿ ಆಕಾಶ್ ಸಕ್ಸೇನಾ (ಹನಿ) ವಿರುದ್ಧ 55,000 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಎಣಿಕೆಯಾದ ಒಟ್ಟು ಮತಗಳಲ್ಲಿ ಖಾನ್ 1.31 ಲಕ್ಷ (ಅಥವಾ 59.71 ಪ್ರತಿಶತ) ಪಡೆದರೆ ಸಕ್ಸೇನಾ 76,084 (ಅಥವಾ 34.62 ಪ್ರತಿಶತ) ಮತಗಳನ್ನು ಪಡೆದರು. ಕಳ್ಳತನ, ಕ್ರಿಮಿನಲ್ ಬೆದರಿಕೆ ಮತ್ತು ಭೂಮಿ ಅತಿಕ್ರಮಣ ಸೇರಿದಂತೆ ಹಲವು ಆರೋಪಗಳ ಮೇಲೆ ಖಾನ್ ಪ್ರಸ್ತುತ ಸೀತಾಪುರ ಜೈಲಿನಲ್ಲಿದ್ದಾರೆ.
ಬಿಜೆಪಿಯು ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ. ರಾಜ್ಯದ 403 ಸ್ಥಾನಗಳಲ್ಲಿ ಬಹುಮತವನ್ನು ಪಡೆದುಕೊಂಡಿದೆ ಮತ್ತು ಮತ್ತೊಮ್ಮೆ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಮುಂದುವರಿಸಲು ಸಜ್ಜಾಗಿದೆ. ಕೇಸರಿ ಪಕ್ಷವು 255 ಸ್ಥಾನಗಳನ್ನು ಪಡೆದುಕೊಂಡಿದೆ. ಅದರ ಪಾಲುದಾರರಾದ ಅಪ್ನಾ ದಳ (ಎಸ್) ಮತ್ತು ನಿಶಾದ್ ಕ್ರಮವಾಗಿ 12 ಮತ್ತು 6 ಸ್ಥಾನಗಳನ್ನು ಪಡೆದುಕೊಂಡಿದೆ. ಸಮಾಜವಾದಿ ಪಕ್ಷ 111 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ.