ಉತ್ತರ ಪ್ರದೇಶ ಚುನಾವಣೆ: ಏನಿದು ಬಿಜೆಪಿಯ ವಿಶೇಷ 'ಧಾರ್ಮಿಕ' ರಣತಂತ್ರ?
ಲಕ್ನೋ, ಡಿ 10: ಎಲ್ಲಾ ಬಹುದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗೆಲ್ಲುವ ಸಲುವಾಗಿ. ಈಗಾಗಲೇ, ಹೊಸಹೊಸ ಯೋಜನೆಗಳನ್ನು ಘೋಷಿಸುತ್ತಿರುವ ಕೇಂದ್ರ ಸರಕಾರ ಮತ್ತೊಂದು ವಿಶಿಷ್ಟ ಯೋಜನೆಯನ್ನು ರೂಪಿಸಿದೆ.
ಶನಿವಾರ (ಡಿ 11) ಮತ್ತೆ ಉತ್ತರ ಪ್ರದೇಶಕ್ಕೆ ಪ್ರವಾಸ ಹೊರಡಲಿರುವ ಪ್ರಧಾನಿ ನರೇಂದ್ರ ಮೋದಿ, ಬಲರಾಂಪುರ ಜಿಲ್ಲೆಯಲ್ಲಿ 9,802 ಕೋಟಿ ರೂಪಾಯಿ ವೆಚ್ಚದ ಸರಯೂ ನಾಲೆ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದಾರೆ.
ಈಗಾಗಲೇ ರಾಸಾಯನಿಕ ಗೊಬ್ಬರ ಕಾರ್ಖಾನೆ ಸೇರಿದಂತೆ ಹಲವು ಬೃಹತ್ ಯೋಜನೆಗಳಿಗೆ ಕೇಂದ್ರ ಸರಕಾರ ಚಾಲನೆ ನೀಡಿದೆ. ಇದೊಂದು ಕಡೆಯಾದರೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕಾರ್ಯವೂ ಭರದಿಂದ ಸಾಗುತ್ತಿದೆ.
ಮುಂದಿನ ವರ್ಷದ ಆದಿಯಲ್ಲಿ ಉತ್ತರ ಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ. ಇದಕ್ಕೆ ಪೂರ್ವ ತಯಾರಿ ಎನ್ನುವಂತೆ, ಬಿಜೆಪಿ ರಾಜ್ಯವಿರುವ ಮುಖ್ಯಮಂತ್ರಿಗಳ ಸಭೆಯನ್ನು ಆಯೋಜಿಸಿದೆ. ಖುದ್ದು ಪಕ್ಷವೇ ಈ ಸಭೆಯನ್ನು ನಡೆಸುತ್ತಿರುವುದು ವಿಶೇಷವಾಗಿದೆ.

ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದದಲ್ಲಿ
ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಸಭೆಯನ್ನು ವಾರಣಾಸಿಯಲ್ಲಿ ಪಕ್ಷ ಆಯೋಜಿಸಿದೆ. ಡಿಸೆಂಬರ್ ಹದಿಮೂರರಂದು ಪ್ರಧಾನಿ ಮೋದಿಯವರು ಈ ಸಭೆಯನ್ನು ಉದ್ಘಾಟಿಸಲಿದ್ದಾರೆ. ಕುಟುಂಬ ಸಮೇತ ಆಗಮಿಸಬೇಕು ಎನ್ನುವ ಫರ್ಮಾನು ಪಕ್ಷದಿಂದ ಬಂದಿರುವ ಹಿನ್ನಲೆಯಲ್ಲಿ ಈ ಸಭೆಯ ಹಿಂದೆ, ಇದು ಚುನಾವಣೆ ಗೆಲ್ಲುವ ರಣತಂತ್ರದ ಭಾಗ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅಂದೇ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದದಲ್ಲಿ ಆರಂಭವಾಗಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಾರಣಾಸಿಗೆ
ಅಧಿವೇಶನದ ಆರಂಭದ ಕಲಾಪದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಾರಣಾಸಿಗೆ ತೆರಳುವ ಕಾರ್ಯಕ್ರಮ ನಿಗದಿಯಾಗಿದೆ. ಪಕ್ಷದ ಸೂಚನೆಯಂತೆ, ಕುಟುಂಬ ಸಮೇತ ಅವರು ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಸಭೆಯ ಜೊತೆಗೆ ಧಾರ್ಮಿಕ ಯಾತ್ರೆಯನ್ನೂ ಬಿಜೆಪಿ ಆಯೋಜಿಸಿದೆ. ಧಾರ್ಮಿಕ ಸ್ಥಳಗಳಿಗೆ ಮುಖ್ಯಮಂತ್ರಿಗಳು ಮತ್ತವರ ಕುಟುಂಬದವರ ದರ್ಶನ ಮಾಡಿಸಿ, ಶಕ್ತಿ ಪ್ರದರ್ಶನ ಮಾಡಿಸುವುದು ಬಿಜೆಪಿಯ ಚುನಾವಣಾ ತಂತ್ರಗಾರಿಕೆ.

ಡಿಸೆಂಬರ್ ಹದಿಮೂರರಂದು ಗಂಗಾರತಿಯಲ್ಲೂ ಭಾಗಿ
ಧಾರ್ಮಿಕ ಯಾತ್ರೆ ನಡೆಸಿದರೆ ಮಹಿಳೆಯರು ಮತ್ತು ಯುವಕರನ್ನು ಸೆಳೆಯಲು ಅನುಕೂಲವಾಗಲಿದೆ ಎನ್ನುವುದು ಬಿಜೆಪಿಯ ನಂಬಿಕೆ. ಹಾಗಾಗಿ, ಡಿಸೆಂಬರ್ ಹದಿಮೂರರಂದು ಗಂಗಾರತಿಯಲ್ಲೂ ಭಾಗವಹಿಸಲು ಸೂಚಿಸಲಾಗಿದೆ. ಇದರ ಜೊತೆಗೆ, ಸಾರಾನಾಥದಲ್ಲಿರುವ ಬೌದ್ದ ದೇವಾಲಯ, ವಾರಣಾಸಿಯಲ್ಲಿರುವ ದೀನ್ ದಯಾಳ್ ಉಪಾಧ್ಯಾಯರ ಸ್ಮಾರಕದಲ್ಲಿ ನಮ ಸಲ್ಲಿಸುವ ಕಾರ್ಯಕ್ರಮವೂ ಆಯೋಜನೆಗೊಂಡಿದೆ.

ರಾಮಲಲ್ಲಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಆಯೋಜನೆ
ಇದರ ಜೊತೆಗೆ, ಮೂರು ದಿನಗಳ ಕಾರ್ಯಕ್ರಮದ ಕೊನೆಯ ದಿನ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮೈಲೇಜ್ ಸಿಗಬಹುದೆಂದು ಹೇಳಲಾಗುವ ಅಯೋಧ್ಯೆಗೂ ಭೇಟಿ ನೀಡುವ ಕಾರ್ಯಕ್ರಮವಿದೆ. ಅಲ್ಲಿ, ರಾಮಲಲ್ಲಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಆಯೋಜನೆಗೊಂಡಿದೆ. ಇದರ ಜೊತೆಗೆ, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications