ಪೊಲೀಸ್ ವಶದಲ್ಲಿದ್ದ ಮಗ ತಾಯಿಯ ಎದುರೇ ಸಾವು: ಠಾಣೆಯ ವಿರುದ್ಧ ದೂರು
ಆಗ್ರಾ, ನವೆಂಬರ್ 24: ಪೊಲೀಸರ ವಶದಲ್ಲಿದ್ದಾಗ ಯುವಕನೊಬ್ಬ ಮೃತಪಟ್ಟಿದ್ದು, ಈ ಸಂಬಂಧ ಇಡೀ ಪೊಲೀಸ್ ಠಾಣೆಯ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ.
ಆಗ್ರಾ ನಗರದ ಸಿಕಂದರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಒಬ್ಬ ಇನ್ ಸ್ಪೆಕ್ಟರ್ ಮತ್ತು ಇಬ್ಬರು ಸಬ್ ಇನ್ ಸ್ಪೆಕ್ಟರ್ಗಳನ್ನು ಅಮಾನತು ಮಾಡಲಾಗಿದೆ.
ಕಳ್ಳತನ ಆರೋಪದಲ್ಲಿ ಬಂಧಿಸಲಾಗಿದ್ದ 32 ವರ್ಷದ ಮಗನನ್ನು ತಮ್ಮ ಕಣ್ಣೆದುರೇ ಹಿಂಸಿಸಿ ಸಾಯಿಸಲಾಗಿದೆ ಎಂದು ಮೃತನ 55 ವರ್ಷದ ತಾಯಿ ಆರೋಪಿಸಿದ್ದಾರೆ.

ಗೈಲಾನಾ ರಸ್ತೆಯ ನರೇಂದ್ರ ಎನ್ಕ್ಲೇವ್ನಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಹೇಮಂತ್ ಕುಮಾರ್ ಅಲಿಯಾಸ್ ರಾಜು ಗುಪ್ತಾ ಎಂಬಾತನನ್ನು ಪಕ್ಕದ ಮನೆಯಿಂದ 7 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಕಳವು ಮಾಡಿದ ಆರೋಪದಲ್ಲಿ ಪೊಲೀಸರು ಬುಧವಾರ ಸಂಜೆ ಎಳೆದೊಯ್ದಿದ್ದರು.
'ನನ್ನ ಮಗ ಮಾನಸಿಕವಾಗಿ ದುರ್ಬಲನಾಗಿದ್ದ. ಆತ ನೆರೆಮನೆಯ ಅನ್ಶುಲ್ ಎಂಬುವವರ ಕೆಮಿಕಲ್ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಬುಧವಾರ ಅನ್ಶುಲ್, ನನ್ನ ಮಗ ಅವರ ಮನೆಯಿಂದ ಚಿನ್ನಾಭರಣ ಕದ್ದಿದ್ದಾನೆ ಎಂದು ಆರೋಪಿಸಿ ಅವನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆತನನ್ನು ಲಾಕಪ್ಗೆ ಹಾಕಿದ ಪೊಲೀಸರು ಲಾಠಿಯಿಂದ ಮನಬಂದಂತೆ ಹಿಗ್ಗಾಮುಗ್ಗ ಥಳಿಸಿದರು. ಕರುಣೆ ತೋರಿಸುವಂತೆ ನಾನು ಬೇಡಿಕೊಂಡರೂ ಬಿಡಲಿಲ್ಲ' ಎಂದು ಆತನ ತಾಯಿ ರೀನಾ ಲತಾ ತಿಳಿಸಿದ್ದಾರೆ.
ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ಆಗಿದ್ದ ರೀನಾ ಅವರ ಪತಿ ಓಂ ಪ್ರಕಾಶ್ ಗುಪ್ತಾ 2001 ರಲ್ಲಿ ಮೃತಪಟ್ಟಿದ್ದರು. ತಾಯಿ ಮತ್ತು ಮಗ ಇಬ್ಬರೂ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರ ಇಬ್ಬರು ಹೆಣ್ಣುಮಕ್ಕಳಿಗೆ ವಿವಾಹವಾಗಿದೆ.
'ಗುರುವಾರ ಬೆಳಿಗ್ಗೆಯೂ ಅವರು ನನ್ನನ್ನು ಠಾಣೆಗೆ ಕರೆದೊಯ್ದು ನನ್ನ ಮಗನಿಗೆ ಹಿಂಸೆ ನೀಡಿದ್ದಾರೆ. ಅದನ್ನು ನಾನು ನೋಡುವಂತೆ ಮಾಡಿದ್ದಾರೆ. ಸಂಜೆ ಆರು ಗಂಟೆ ಸುಮಾರಿಗೆ ನನ್ನನ್ನು ಮನೆಗೆ ಮರಳಿ ತಂದು ಬಿಟ್ಟಿದ್ದಾರೆ. ಆದರೆ, ಮಗನನ್ನು ಮಾತ್ರ ಲಾಕಪ್ನಲ್ಲಿಯೇ ಉಳಿಸಿಕೊಂಡಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ನನ್ನ ಮಗ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ನನ್ನ ಕಣ್ಣೆದುರೇ ಮಗನನ್ನು ಕೊಂದಿದ್ದಾರೆ' ಎಂದು ಆಕೆ ಆರೋಪಿಸಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ರಾಜುವಿನ ಸಾವು ಹೃದಯಾಘಾತದಿಂದ ಸಂಭವಿಸಿದ್ದು, ಆತನ ಭುಜ, ಕೈ ಹಾಗೂ ಕಾಲುಗಳಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಪೊಲೀಸ್ ಠಾಣೆಯ ವಿರುದ್ಧ ದೂರು ದಾಖಲಿಸಲಾಗಿದ್ದು, ಮೂವರನ್ನು ಅಮಾನತು ಮಾಡಲಾಗಿದೆ. ನೆರೆಮನೆಯವರಾದ ಅನ್ಶುಲ್ ಪ್ರತಾಪ್ ಮತ್ತು ವಿವೇಕ್ ಎಂಬುವವರ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications