ಪುಲ್ವಾಮಾ ದಾಳಿ, ಬಾಲಾಕೋಟ್ ವಾಯು ದಾಳಿ ಮತ್ತೊಮ್ಮೆ ಪ್ರಸ್ತಾಪಿಸಿದ ಮೋದಿ
ವಾರಾಣಸಿ (ಉತ್ತರಪ್ರದೇಶ), ಏಪ್ರಿಲ್ 26: ಪುಲ್ವಾಮಾದಲ್ಲಿ ನಮ್ಮ ನಲವತ್ತು ಸೈನಿಕರನ್ನು ಅವರು ಹುತಾತ್ಮರನ್ನಾಗಿ ಮಾಡಿದರು. ಆ ದಾಳಿ ನಂತರ ಆ ಪ್ರದೇಶದಲ್ಲಿ ನಲವತ್ತೆರಡು ಉಗ್ರರನ್ನು ನಾವು ಕೊಂದೆವು. ಇದು ನಾವು ಕೆಲಸ ಮಾಡುವ ರೀತಿ ಎಂದು ಮೋದಿ ಗುರುವಾರ ವಾರಾಣಸಿಯಲ್ಲಿ ತಮ್ಮ ಚುನಾವಣೆ ಪ್ರಚಾರದ ವೇಳೆ ಹೇಳಿದ್ದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪುಲ್ವಾಮಾ ದಾಳಿ ಇರಬಹುದು, ಉರಿ ದಾಳಿ ಆಗಿರಬಹುದು ಅಥವಾ ಯಾವುದೇ ವಿಷಯ ಇರಬಹುದು, ನನ್ನ ಬಳಿ ಒಂದೇ ಮಂತ್ರ- ದೇಶ ಮೊದಲು, ಭಾರತ ಮೊದಲು ಎಂದು ವಾರಾಣಸಿಯ ದಶಾಶ್ವಮೇಧ ಘಾಟ್ ನಲ್ಲಿ ರೋಡ್ ಶೋ ನಂತರ ಅವರು ಹೇಳಿದರು.
ಮೋದಿ ವಿರುದ್ಧದ ದೂರು ನಾಪತ್ತೆ; ತಾಂತ್ರಿಕ ದೋಷ ಅಂತಿದೆ ಚು.ಆಯೋಗ
ಪುಲ್ವಾಮಾ ದಾಳಿಯ ನಂತರ ಭಾರತೀಯ ವಾಯು ಸೇನೆಯು ಜೈಷ್ ಇ ಮೊಹ್ಮದ್ ಉಗ್ರ ನೆಲೆ ಮೇಲೆ ನಡೆಸಿದ ದಾಳಿ ಬಗ್ಗೆ ಪ್ರಸ್ತಾವ ಮಾಡಿದ ಅವರು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಡೀ ಜಗತ್ತು ಈಗ ಭಾರತದ ಬೆನ್ನಿಗೆ ಇದೆ ಎಂದರು.
ಚುನಾವಣಾ ಪ್ರಚಾರದ ವೇಳೆ ಸಶಸ್ತ್ರ ಬಲದ ಹೆಸರನ್ನು ಬಳಸಿಕೊಂಡರೆ ಕ್ರಮಕ್ಕೆ ಮುಂದಾಗುವುದಾಗಿ ಚುನಾವಣೆ ಆಯೋಗ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಾಯು ಸೇನೆ ದಾಳಿ ಹಾಗೂ ಪುಲ್ವಾಮಾ ದಾಳಿ ವಿಚಾರವನ್ನು ಒಂದಕ್ಕಿಂತ ಹೆಚ್ಚು ಬಾರಿ ಪ್ರಸ್ತಾಪಿಸಿದ್ದು, ರಾಷ್ಟ್ರೀಯ ಭದ್ರತೆ ವಿಚಾರವಾಗಿ ತಮ್ಮ ಪಕ್ಷದ ನಿಲವನ್ನು ಪ್ರದರ್ಶಿಸಲು ಆ ಘಟನೆಗಳ ಉದಾಹರಣೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯೋ ಅಥವಾ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದರೂ ಆ ವೇಳೆ ಆಯೋಗವು ಕುರುಡಾಗಿ ವರ್ತಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿವೆ.
ಮೋದಿ ಚಿತ್ರವಾಯ್ತು, ಇದೀಗ ವೆಬ್ ಸೀರೀಸ್ ಗೂ ತಡೆ ನೀಡಿದ ಆಯೋಗ
ನರೇಂದ್ರ ಮೋದಿ ಅವರು ಶುಕ್ರವಾರ ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅದಕ್ಕೂ ಮುನ್ನ ಗುರುವಾರದಂದು ರೋಡ್ ಶೋ ನಡೆಸಿದ್ದಾರೆ. ಇನ್ನು ಶ್ರೀಲಂಕಾದಲ್ಲಿ ನಡೆದ ಉಗ್ರ ದಾಳಿ ಬಗ್ಗೆ ಪ್ರಸ್ತಾವ ಮಾಡಿ, ಗಡೆಯಾಚೆಗಿನ ಭಯೋತ್ಪಾದನೆಯು ರಾಷ್ಟ್ರೀಯ ಭದ್ರತೆಗೆ ಅಪಾಯ ಎಂದು ಹೇಳಿದ್ದಾರೆ.