ಉತ್ತರ ಪ್ರದೇಶವನ್ನು ಬೆಚ್ಚಿ ಬೀಳಿಸಿದ ರೌಡಿ ವಿಕಾಸ್ ದುಬೆ ಯಾರು?
ಲಕ್ನೋ, ಜುಲೈ 03 : ಶುಕ್ರವಾರ ಬೆಳ್ಳಂಬೆಳಗ್ಗೆ ಉತ್ತರ ಪ್ರದೇಶ ಬೆಚ್ಚಿ ಬಿದ್ದಿದೆ. ರೌಡಿಗಳನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆದಿದೆ. ಡಿವೈಎಸ್ಪಿ ದೇವೇಂದ್ರ ಮಿಶ್ರಾ ಸೇರಿದಂತೆ 8 ಪೊಲೀಸ್ ಸಿಬ್ಬಂದಿಗಳು ಹತ್ಯೆಯಾಗಿದ್ದಾರೆ.
Recommended Video
ಉತ್ತರ ಪ್ರದೇಶದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಮತ್ತು ಆತನ ಸಹಚರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ಹೋಗಿದ್ದರು.
ಸುಮಾರು 60 ಕ್ರಿಮಿನಲ್ ಪ್ರಕರಣಗಳಲ್ಲಿ ವಿಕಾಸ್ ದುಬೆ ಪೊಲೀಸರಿಗೆ ಬೇಕಾಗಿದ್ದ. ಜೈಲಿನಲ್ಲಿದ್ದಾಗಲೇ ಶಿವರಾಜ್ಪುರ ಪಂಚಾಯತ್ ಚುನಾವಣೆಗೆ ನಿಂತು, ಗೆದ್ದು ಬಂದಿದ್ದ ಈತ ಪ್ರಭಾವಶಾಲಿ ರೌಡಿ. ದರೋಡೆ, ಅಪಹರಣ, ಕೊಲೆ ಸೇರಿದಂತೆ ವಿವಿಧ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.
ಮೂರು ಪೊಲೀಸ್ ಠಾಣೆಗಳ ಸಿಬ್ಭಂದಿ ದಿಕ್ರು ಗ್ರಾಮದಲ್ಲಿ ವಿಕಾಸ್ ದುಬೆ ಮತ್ತು ಆತನ ಸಹಚರರು ಅಡಗಿದ ಮಾಹಿತಿ ಪಡೆದು ಗುರುವಾರ ತಡರಾತ್ರಿ ದಾಳಿ ನಡೆಸಿದ್ದರು. ಆಗ ಕಟ್ಟಡದ ಮೇಲೆ ಅವಿತುಕುಳಿತಿದ್ದ ಗುಂಪು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದೆ.

ಪ್ರಸಿದ್ಧಿ ಪಡೆದ ವಿಕಾಸ್ ದುಬೆ
2001ರಲ್ಲಿ ವಿಕಾಸ್ ದುಬೆ ಹೆಸರು ದೇಶದಲ್ಲಿ ಎಲ್ಲರಿಗೂ ಪರಿಚಿತವಾಯಿತು. ಉತ್ತರ ಪ್ರದೇಶದ ಬಿಜೆಪಿ ನಾಯಕ ಸಂತೋಷ್ ಶುಕ್ಲಾರನ್ನು ದುಬೆ ಹತ್ಯೆ ಮಾಡಿದ್ದ. ಹತ್ಯೆಯಾಗುವ ಸಮಯದಲ್ಲಿ ಸಂತೋಷ್ ಶುಕ್ಲಾ ಉತ್ತರ ಪ್ರದೇಶದ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ದುಬೆ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಸೆಷನ್ಸ್ ನ್ಯಾಯಾಲಯ ಆತನನ್ನು ಆರೋಪ ಮುಕ್ತ ಎಂದು ಆದೇಶ ನೀಡಿತು.

ಹಲವು ಪ್ರಕರಣದಲ್ಲಿ ಹೆಸರು
ರೌಡಿ ವಿಕಾಸ್ ದುಬೆ ವಿರುದ್ಧ ಬೆದರಿಕೆ, ಅಪಹರಣ, ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. 2000ದಲ್ಲಿ ನಡೆದ ಥಾರಾಚಂದ್ ಕಾಲೇಜು ಪ್ರಿನ್ಸಿಪಾಲ್ ಮತ್ತು ಸಹಾಯಕ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿಯೂ ಈತನ ಹೆಸರು ಕೇಳಿ ಬಂದಿತ್ತು. (ಇಂದು ಗುಂಡಿನ ದಾಳಿ ನಡೆದ ಸ್ಥಳ)

ಸಂಬಂಧಿಕರ ಹತ್ಯೆಗೆ ಸಂಚು
ವಿಕಾಸ್ ದುಬೆ ಹಲವು ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದ. 2018ರಲ್ಲಿ ಜೈಲಿನಿಂದಲೇ ಸಂಬಂಧಿಕ ಅನುರಾಗ್ ಹತ್ಯೆಗೆ ಸಂಚು ರೂಪಿಸಿದ್ದ. ಅನುರಾಗ್ ಪತ್ನಿ ವಿಕಾಸ್ ದುಬೆ ಸೇರಿದಂತೆ ನಾಲ್ವರು ವಿರುದ್ಧ ದೂರು ನೀಡಿದ್ದಳು. (ಪೊಲೀಸರ ಹತ್ಯೆ ನಡೆದ ಸ್ಥಳ)

ಜೈಲಿನಿಂದಲೇ ಸಂಚು
2000ದಲ್ಲಿ ನಡೆದ ರಾಮ್ ಬಾಬು ಯಾದವ್ ಹತ್ಯೆ ಪ್ರಕರಣ, 2004ರಲ್ಲಿ ನಡೆದ ದಿನೇಶ್ ದುಬೆ ಹತ್ಯೆ ಪ್ರಕರಣದಲ್ಲಿಯೂ ವಿಕಾಸ್ ದುಬೆ ಹೆಸರು ಕೇಳಿ ಬಂದಿದೆ. ಈ ಹತ್ಯೆಗಳು ನಡೆಯವಾಗ ಜೈಲಿನಲ್ಲಿದ್ದ ವಿಕಾಸ್ ದುಬೆ ಅಲ್ಲಿಂದಲೇ ಸಹಚರರ ಮೂಲಕ ಸಂಚು ರೂಪಿಸಿದ್ದ. (ರೌಡಿಗಳು ಅಡಗಿದ್ದ ಸ್ಥಳ)












Click it and Unblock the Notifications