5 ವರ್ಷದಿಂದ ಮುಚ್ಚಲಾಗಿದ್ದ ಮಳಿಗೆಯಿಂದ 140 ಕೋಟಿಯಷ್ಟು ಚಿನ್ನ, ವಜ್ರ ಕಳವು
ಲಖನೌ (ಉತ್ತರಪ್ರದೇಶ), ಅಕ್ಟೋಬರ್ 24: 140 ಕೋಟಿ ರುಪಾಯಿ ಮೌಲ್ಯದ ಚಿನ್ನ ಹಾಗೂ ಆಭರಣಗಳು ಕಳವು ಆಗಿರುವ ಬಗ್ಗೆ ಉತ್ತರಪ್ರದೇಶದ ಆಭರಣ ವ್ಯಾಪಾರಿ ದೂರು ನೀಡಿದ್ದು, ಕಾನ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾನ್ಪುರ್ ನ ಬಿರ್ಹಾನಾ ರಸ್ತೆಯಲ್ಲಿ ರಸ್ತೆಯಲ್ಲಿ ಆಭರಣ ಮಳಿಗೆ ಹೊಂದಿರುವ ವ್ಯಾಪಾರಿಯು ದೂರು ದಾಖಲಿಸಿದ್ದಾರೆ. ಪಾಲುದಾರರ ಮಧ್ಯೆ ವ್ಯಾಜ್ಯ ಬಂದಿದ್ದರಿಂದ ಈ ಮಳಿಗೆ ಕಳೆದ ಐದು ವರ್ಷಗಳಿಂದ ಮುಚ್ಚಿತ್ತು. ಸದ್ಯಕ್ಕೆ ತನಿಖೆ ಜಾರಿಯಲ್ಲಿದೆ ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಾಜ್ ಕುಮಾರ್ ಅಗರ್ ವಾಲ್ ಹೇಳಿದ್ದಾರೆ.
ಆಭರಣ ಮಳಿಗೆಯ ಸುತ್ತಮುತ್ತ ಇರುವ ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಆಭರಣ ಮಳಿಗೆಗೆ ಸಮಾನ ಪಾಲುದಾರರಿದ್ದು, ವ್ಯಾಜ್ಯ ಆದ ನಂತರ ಮೇ 30, 2013ರಲ್ಲಿ ಮಳಿಗೆಯನ್ನು ಮುಚ್ಚಲಾಗಿತ್ತು. ಪಾಲುದಾರರ ಸಮ್ಮುಖದಲ್ಲಿ ಪೊಲೀಸರ ಮಳಿಗೆಯನ್ನು ತೆರೆಯುವಂತೆ ಕೆಲ ಸಮಯದ ಹಿಂದೆ ಕೋರ್ಟ್ ಆದೇಶ ನೀಡಿತ್ತು.

ಇದೀಗ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಳವಾಗಿರುವುದು ಮಳಿಗೆಯನ್ನು ಮತ್ತೆ ತೆರೆಯುವ ಮುಂಚೆಯೇ ಎಂಬುದು ತಿಳಿದುಬಂದಿದೆ. ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, 10,000 ಕ್ಯಾರಟ್ ವಜ್ರಗಳು, 500 ಕೇಜಿ ಬೆಳ್ಳಿ, 100 ಕೇಜಿ ಚಿನ್ನ ಮತ್ತು 5000 ಕ್ಯಾರಟ್ ಮೌಲ್ಯದ ಆಭರಣಗಳು ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ಕೆಲವು ಮುಖ್ಯ ದಾಖಲೆಗಳು ಕಳವಾಗಿವೆ ಎಂದು ತಿಳಿಸಲಾಗಿದೆ.












Click it and Unblock the Notifications