ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಯುಕೆ ಜಡ್ಜ್ ಆದೇಶ
ಲಂಡನ್, ಡಿಸೆಂಬರ್ 10:ಭಾರತದ ಹತ್ತಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಗಳನ್ನು ಸಾಲದ ರೂಪದಲ್ಲಿ ಪಡೆದು, ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಯುಕೆ ಕೋರ್ಟಿನಲ್ಲಿ ಭಾರಿ ಹಿನ್ನಡೆಯುಂಟಾಗಿದೆ. ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಯುಕೆ ಕೋರ್ಟ್ ಜಡ್ಜ್ ಸೋಮವಾರ(ಡಿಸೆಂಬರ್ 10) ಆದೇಶಿಸಿದ್ದಾರೆ.
ಮದ್ಯ ದೊರೆ, ಆರ್ಥಿಕ ಅಪರಾಧಿ ವಿಜಯ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತಂತೆ ಲಂಡನ್ನಿನ ನ್ಯಾಯಾಲಯದಲ್ಲಿ ತೀರ್ಪು ಹೊರ ಬಂದ ಸಂದರ್ಭದಲ್ಲಿ ಮಲ್ಯ ಅವರು ಕೋರ್ಟಿನಲ್ಲಿ ಹಾಜರಿದ್ದರು.
ತೀರ್ಪಿನ ಬಗ್ಗೆ ತಮ್ಮ ತಕ್ಷಣದ ಪ್ರತಿಕ್ರಿಯೆ ನೀಡಿ, ಕಾನೂನು ತಜ್ಞರು ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವೆ ಎಂದಿದ್ದಾರೆ.
ಮಲ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ಹಸ್ತಾಂತರ ಮಾಡುವಂತೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಲಂಡನ್ ನ್ಯಾಯಾಲಯವನ್ನು ಕೋರಿವೆ.
ಸಿಬಿಐನ ಒಂದು ತಂಡವು ಲಂಡನ್ನಿನ ವೆಸ್ ಮಿನಿಸ್ಟರ್ ಕೋರ್ಟ್ ನಲ್ಲಿ ಇಂದು ವಿಚಾರಣೆ ಸಂದರ್ಭದಲ್ಲಿ ಹಾಜರಿತ್ತು. ಸಿಬಿಐ ಜಂಟಿ ನಿರ್ದೇಶಕ ಎ. ಸಾಯಿ ಮನೋಹರ್ ನೇತೃತ್ವದಲ್ಲಿ ಸಿಬಿಐ ಹಾಗೂ ಇ.ಡಿ ಅಧಿಕಾರಿಗಳ ತಂಡ ಸದ್ಯ ಲಂಡನ್ನಿನಲ್ಲಿದೆ.

ಮಲ್ಯ ಗಡಿಪಾರು ಮಾಡುವಂತೆ ಕೋರ್ಟ್ ತೀರ್ಪು ನೀಡಿದೆ
ಉದ್ಯಮಿ ವಿಜಯ್ ಮಲ್ಯ ಮಲ್ಯ ಗಡಿಪಾರು ಮಾಡುವಂತೆ ಕೋರ್ಟ್ ತೀರ್ಪು ನೀಡಿದೆ. ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಪ್ರತಿ ಬ್ರಿಟನ್ ಗೃಹ ಕಾರ್ಯದರ್ಶಿಗೆ ತಲುಪುತ್ತದೆ. ಅವರು ಬ್ರಿಟಿಷ್ ಸರ್ಕಾರದ ಪರವಾಗಿ ಕಾರ್ಯದರ್ಶಿ ಗಡಿಪಾರು ಆದೇಶ ಹೊರಡಿಸಿ, ಹಸ್ತಾಂತರ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ. ಈ ಆದೇಶ ಹೊರಡಿಸಿದ 28 ದಿನಗಳ ಒಳಗೆ ಮಲ್ಯ ಬ್ರಿಟನ್ ತೊರೆಯಬೇಕಾಗುತ್ತದೆ. ಮಲ್ಯರನ್ನು ಭಾರತಕ್ಕೆ ಕರೆ ತರಲು ಸಿಬಿಐ ತಂಡವೊಂದು ಲಂಡನ್ನಿನಲ್ಲಿ ಬೀಡು ಬಿಟ್ಟಿದೆ.

ವಿಜಯ್ ಮಲ್ಯ ಅವರು ಏನು ಮಾಡಬಹುದು?
ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ಗಡಿಪಾರು ಆದೇಶ ಪ್ರಶ್ನಿಸಿ ವಿಜಯ್ ಮಲ್ಯ ಪರವಾಗಿ ಹೈಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಬಹುದು. ಕೋರ್ಟ್ ಆದೇಶ ಪ್ರಶ್ನಿಸಿ ಬ್ರಿಟಿಷ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಲು ಮಲ್ಯ ಅವರಿಗೆ 14 ದಿನಗಳ ಕಾಲಾವಕಾಶವಿದೆ.
ಭಾರತದ ಹತ್ತಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಗಳನ್ನು ಸಾಲದ ರೂಪದಲ್ಲಿ ಪಡೆದು, ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಸಾಲದ ಅಸಲು ತೀರಿಸಲು ಸಿದ್ಧ ಎಂದು ಕೋರ್ಟ್ ಆವರಣದಲ್ಲಿ ಇಂದು ಮತ್ತೊಮ್ಮೆ ಹೇಳಿದರು.

ಭಾರತದ ಜೈಲುಗಳ ಪರಿಸ್ಥಿತಿ ಬಗ್ಗೆ ಕಳವಳವಿತ್ತು
ಭಾರತದ ಜೈಲುಗಳ ಪರಿಸ್ಥಿತಿಯ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು. ಮುಂಬೈ ಜೈಲಿನಲ್ಲಿ ಗಾಳಿ ಬೆಳಕು ಸರಿಯಾಗಿಲ್ಲ ಎಂದು ಮಲ್ಯ ತಮ್ಮನ್ನು ಭಾರತಕ್ಕೆ ಹಸ್ತಾಂತರ ಮಾಡುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಕೋರ್ಟಿನ ಆವರಣ, ಮಲ್ಯ ಅವರು ಉಳಿದುಕೊಳ್ಳಲು ಸಿದ್ಧವಾಗಿರುವ ಸೆಲ್ ನ ಚಿತ್ರಗಳು, ವಿಡಿಯೋಗಳನ್ನು ಕೋರ್ಟಿಗೆ ಸಲ್ಲಿಸಲಾಗಿತ್ತು. ಈ ಬಗ್ಗೆ ಮಲ್ಯ ಕೂಡಾ ಸಂತೃಪ್ತಿ ವ್ಯಕ್ತಪಡಿಸಿದ್ದರು.

ನಾನು ಪಲಾಯನ ಮಾಡಿಲ್ಲ ಆರ್ಥಿಕ ಅಪರಾಧಿಯಲ್ಲ
ನಾನು 1988ರಿಂದ ನಾನು ಅನಿವಾಸಿ ಭಾರತೀಯನಾಗಿದ್ದೇನೆ. ನಾನು ಜಾಗತಿಕವಾಗಿ ಆಲ್ಕೋಹಾಲ್ ಪಾನೀಯ ಉದ್ಯಮವನ್ನು ಬೆಳೆಸಲು ಸಾಕಷ್ಟು ಶ್ರಮಿಸಿದ್ದೇನೆ. ನಾನು ಪಲಾಯಾನವಾದಿಯಲ್ಲ. ನನ್ನ ದುರಾದೃಷ್ಟಕ್ಕೆ ಮಾಧ್ಯಮಗಳು, ನನ್ನ ಉದ್ಯಮವನ್ನು ಅರಿಯಲಿಲ್ಲ, ಪ್ರೋತ್ಸಾಹಿಸಲಿಲ್ಲ. ನಾನು ನ್ಯಾಯಯುತವಾಗಿ ನನ್ನ ವಾದ ಮಂಡಿಸಿ, ಗೌರವಯುತವಾಗಿ ನನ್ನನ್ನು ನೀವು ನಡೆಸಿಕೊಳ್ಳುತ್ತೀರಿ ಎಂಬ ಭರವಸೆ ಹೊಂದಿದ್ದೇನೆ ಎಂದು ಪ್ರಧಾನಿ ಮೋದಿ ಅವರಿಗೆ 2016ರಲ್ಲೇ ಮಲ್ಯ ಅವರು ಪತ್ರ ಬರೆದಿದ್ದರು. ಇತ್ತೀಚೆಗೆ ಉದ್ದೇಶಪೂರ್ವಕ ಸುಸ್ತಿದಾರ ಎಂಬುದರ ಜತೆಗೆ ಆರ್ಥಿಕ ಅಪರಾಧಿ ಎಂಬ ಟ್ಯಾಗ್ ತಗುಲಿಕೊಂಡಿದ್ದನ್ನು ಪ್ರಶ್ನಿಸಿ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications