ದೇಶಭ್ರಷ್ಟ ಉದ್ಯಮಿ ನೀರವ್ ಮೋದಿಗೆ ಮತ್ತೆ ಜಾಮೀನು ನಿರಾಕರಣೆ
ಲಂಡನ್, ಮೇ 8: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 13,000 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ, ವಜ್ರ ವ್ಯಾಪಾರಿ ನೀರವ್ ಮೋದಿಗೆ ಮತ್ತೆ ಸಂಕಟ ಮುಂದುವರಿದಿದೆ.
ಲಂಡನ್ ಜೈಲಿನಲ್ಲಿ ಬಂಧನದಲ್ಲಿರುವ ನೀರವ್ ಮೋದಿಗೆ ಇಂಗ್ಲೆಂಡ್ನ ವೆಸ್ಟ್ಮಿನಿಸ್ಟರ್ ಕೋರ್ಟ್ ಜಾಮೀನು ನಿರಾಕರಿಸಿದೆ. ಮುಂದಿನ ವಿಚಾರಣೆಯನ್ನು ಮೇ 30ಕ್ಕೆ ನಿಗದಿಪಡಿಸಲಾಗಿದ್ದು, ಅಂದು ವೆಸ್ಟ್ ಮಿನಿಸ್ಟರ್ ಕೋರ್ಟ್ ಮುಂದೆ ನೀರವ್ ಮೋದಿ ಹಾಜರಾಗಬೇಕಿದೆ.
ಪಿಎನ್ಬಿಗೆ ವಂಚನೆ ಎಸಗಿ ಭಾರತದಿಂದ ಪಾರಾಗಿದ್ದ ನೀರವ್ ಮೋದಿಯನ್ನು ಮಾರ್ಚ್ 19ರಂದು ಸ್ಕಾಟ್ಲಾಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದರು.

ನೀರವ್ ಮೋದಿಯ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದು ಇದು ನಾಲ್ಕನೆಯ ಬಾರಿ. ಬಂಧನವಾದ ದಿನದಿಂದ ಆತ ನಾಲ್ಕು ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದ.
ಉದ್ದೇಶಪೂರ್ವಕ ಸುಸ್ತಿದಾರ ನೀರವ್ ಮೋದಿ 6,400 ಕೋಟಿ ರೂ ಹಣ ವರ್ಗಾವಣೆ ಅವ್ಯವಹಾರದಲ್ಲಿ ತೊಡಗಿದ್ದಾಗಿ ಜಾರಿ ನಿರ್ದೇಶನಾಲಯವು ತನ್ನ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13 ಸಾವಿರ ಕೋಟಿ ರೂ. ವಂಚಿಸಿದ ಆರೋಪವನ್ನು ಹೊತ್ತುಕೊಂಡಿರುವ ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಭಾರತದಿಂದ ಪರಾರಿಯಾಗಿದ್ದು, ವಿವಿಧ ತನಿಖಾ ಸಂಸ್ಥೆಗಳು ಇವರಿಬ್ಬರನ್ನು ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲು ಯತ್ನಿಸುತ್ತಿವೆ.












Click it and Unblock the Notifications