ಕಾರಟಗಿಯಲ್ಲಿ ಶಾಸಕರ ಕಾರು ಡಿಕ್ಕಿಯಾಗಿ ಬಡ ಕುಟುಂಬದ ವಯೋವೃದ್ಧೆ ಸಾವು, ಶಾಸಕರು ಹೇಳಿದ್ದೇನು?
ಕೊಪ್ಪಳ, ಜನವರಿ, 11: ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಅವರು ಸಂಚರಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ವಯೋವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ಕಾರಟಗಿ ಬಳಿ ನಡೆದಿದೆ. ಮರಿಯಮ್ಮ ನಾಯಕ (70) ಮೃತಪಟ್ಟ ದುರ್ದೈವಿ ಆಗಿದ್ದಾರೆ.
ಮೈಲಾಪೂರ ಕ್ರಾಸ್ ಬಳಿಯ ಬಸ್ ನಿಲ್ದಾಣದಿಂದ ಮರಿಯಮ್ಮ ರಸ್ತೆ ದಾಟುತಿದ್ದಳು. ಅದೇ ಸಮಯಕ್ಕೆ ಶಾಸಕ ಬಸವರಾಜ ದಢೇಸುಗೂರು ಅವರು ಕಾರಿನಲ್ಲಿ ತೆರಳುತ್ತಿದ್ದರು. ಏಕಾಏಕಿ ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಯೋವೃದ್ಧೆಗೆ ಅದೇ ಕಾರು ಡಿಕ್ಕಿ ಹೊಡೆದಿದೆ. ಆಗ ಕೂಡಲೇ ಶಾಸಕ ದಢೇಸುಗೂರು ಮರಿಯಮ್ಮಳನ್ನು ತಮ್ಮದೇ ಕಾರಿನಲ್ಲಿ ಚಿಕಿತ್ಸೆಗಾಗಿ ಕಾರಟಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವೃದ್ಧೆ ಮರಿಯಮ್ಮನನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.
ಮಾರ್ಗದ ಮಧ್ಯೆ ಉಸಿರು ನಿಲ್ಲಿಸಿದ ವೃದ್ಧೆ
ಅಲ್ಲಿಯೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮರಿಯಮ್ಮನನ್ನು ಬಳ್ಳಾರಿ ವಿಮ್ಸ್ಗೆ ಸಾಗಿಸಲಾಗುತ್ತಿತ್ತು. ಆದರೆ ಮಾರ್ಗದ ಮಧ್ಯೆಯೇ ಮರಿಯಮ್ಮ ನಾಯಕ ಮೃತಪಟ್ಟಿದ್ದಾಳೆ ಎನ್ನುವ ಮಾಹಿತಿ ತಿಳಿದುಬಂದಿದೆ. ಮೂಲತಃ ಚಳ್ಳೂರು ಗ್ರಾಮದ ನಿವಾಸಿಯಾಗಿರುವ ಮರಿಯಮ್ಮ ನಾಯಕ ಮೈಲಾಪೂರ ಗ್ರಾಮದ ಮಗಳ ಮನೆಯಲ್ಲೇ ವಾಸ ಮಾಡುತ್ತಿದ್ದಳು. ವೃದ್ಧಾಪ್ಯ ವೇತನ ಪಡೆಯುವ ಸಲುವಾಗಿ ಚಳ್ಳೂರು ಗ್ರಾಮಕ್ಕೆ ತೆರಳಿದ್ದಳು. ನಂತರ ಮೈಲಾಪೂರ ಗ್ರಾಮದ ಮಗಳ ಮನೆಗೆ ಆಗಮಿಸುವಾಗ ಘಟನೆ ನಡೆದಿದ್ದು, ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈಯಕ್ತಿಕ ಸಹಾಯ ಮಾಡುವುದಾಗಿ ಭರವಸೆ
ಇನ್ನು ಈ ಬಗ್ಗೆ ಗಂಗಾವತಿಯಲ್ಲಿ ಪ್ರತಿಕ್ರಿಯಿಸಿದ ಕೊಪ್ಪಳದ ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಅವರು, ನನ್ನ ಕಾರು ವೃದ್ಧೆಗೆ ಡಿಕ್ಕಿಯಾಗಿಲ್ಲ. ಡಿಕ್ಕಿ ಹೊಡೆದಿದ್ದು ನಾಯಿಗೆ, ಆಗ ನಾಯಿ ಅಜ್ಜಿಯ ಮೇಲೆ ಬಿದ್ದಿದೆ. ನಾಯಿ ಬಿದ್ದ ಪರಿಣಾಮ ಮರಿಯಮ್ಮಗೆ ಗಾಯವಾಗಿದ್ದು, ನಾನು ಕಾರಿನಿಂದ ಇಳಿದು ಅವರನ್ನು ತಕ್ಷಣ ಕಾರಟಗಿ ಆಸ್ಪತ್ರೆಗೆ ಕಳುಹಿಸಿದ್ದೇನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯದಲ್ಲಿ ಅವರು ಮೃತಪಟ್ಟಿದ್ದಾರೆ. ಹಾಗೆಯೇ ಮೃತ ವೃದ್ಧೆ ಕುಟುಂಬಕ್ಕೆ ವೈಯಕ್ತಿಕ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.












Click it and Unblock the Notifications