ಕೊರೊನಾ ಸೋಂಕಿತ ವ್ಯಕ್ತಿ ಕರೆತಂದಿದ್ದಕ್ಕೆ ಕ್ರಿಮಿನಲ್ ಕೇಸ್
ಕೊಪ್ಪಳ, ಏಪ್ರಿಲ್ 15 : ಕೊರೊನಾ ಸೋಂಕಿತ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಯನ್ನು ಕೊಪ್ಪಳಕ್ಕೆ ಕರೆತಂದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಅನುಮತಿ ಪಡೆಯದೇ ಕರೆತಂದ ಬಗ್ಗೆ ಪೊಲೀಸ್ ತನಿಖೆ ನಡೆಯಲಿದೆ.
ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ಪಿ194 (ಧಾರವಾಡ) ಇವರು ಮಾರ್ಚ್ 19ರಂದು ವಿ. ಆರ್. ಎಲ್ ಟ್ರಾವೆಲ್ಸ್ ಬಸ್ ಮೂಲಕ ಮುಂಬೈನಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿದ್ದರು. ಶಿಖಾ ಶೇಖ್ (29) ಎಂಬುವವರು ಇವರ ಜೊತೆಗೆ ಒಂದೇ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು.
ಇವರು ಸೋಂಕಿತ ವ್ಯಕ್ತಿ ಜೊತೆ ಪ್ರಾಥಮಿಕ ಸಂಪರ್ಕವನ್ನು ಹೊಂದಿರುತ್ತಾರೆ. ಇವರು ಮಾರ್ಚ್ 20ರಂದು ಆಟೋ ಮೂಲಕ ಹುಬ್ಬಳ್ಳಿಯಲ್ಲಿ ಪರಿಚಯಸ್ಥರ ಮನೆಗೆ ತಲುಪಿ ಅಲ್ಲಿಯೇ ತಂಗಿದ್ದರು. ಏಪ್ರಿಲ್ 13 ರಂದು ಹಾಲಿನ ಡೈರಿ ವಾಹನದಲ್ಲಿ ಹುಬ್ಬಳ್ಳಿಯಿಂದ ಪ್ರಯಾಣ ಬೆಳೆಸಿದ್ದು, ರಾತ್ರಿ ಸುಮಾರು 8.30ಕ್ಕೆ ಕೊಪ್ಪಳಕ್ಕೆ ಆಗಮಿಸಿದ್ದಾರೆ.

ಗುರುಬಸವ ಹೊಳಗುಂದಿ ಎಂಬುವವರು ಮುಂಬೈಗೆ ಹೋಗಲು ಪಾಸ್ ಕೊಡಿಸುವ ಭರವಸೆ ನೀಡಿದ್ದರಿಂದ ಕೊಪ್ಪಳಕ್ಕೆ ಆಗಮಿಸಿದ್ದಾಗಿ ಶಿಖಾ ಶೇಖ್ ಹೇಳಿದ್ದಾರೆ. ಹುಬ್ಬಳ್ಳಿಯಿಂದ ಸ್ಕೂಟಿಯಲ್ಲಿ ಗುರುಬಸವ ಹೊಳಗುಂದಿ ಹಾಲಿನ ವಾಹನದ ತನಕ ಡ್ರಾಪ್ ಮಾಡಿದ್ದರು. ಪ್ರಸ್ತುತ ಶಿಖಾ ಶೇಖ್ ಅವರನ್ನು ಆರೋಗ್ಯ ತಪಾಸಣೆ ನಡೆಸಿ, ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ.
ಗುರುಬಸವ ಹೊಳಗುಂದಿಗೆ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲು ಹೋದಾಗ ಪ್ರತಿರೋಧಿಸಿದ್ದರಿಂದ ಇವರನ್ನು ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.











Click it and Unblock the Notifications