ಕೊಪ್ಪಳ: ರಾಹುಲ್ ಗಾಂಧಿಗಾಗಿ ಅರ್ಧ ಗಂಟೆ ನಿಂತ ಗೂಡ್ಸ್ ರೈಲು
ಕೊಪ್ಪಳ, ಫೆಬ್ರವರಿ 10 : ಹೊಸಪೇಟೆಯಲ್ಲಿ ಜನಾಶೀರ್ವಾದ ಸಮಾವೇಶ ಮುಗಿಸಿ ಕೊಪ್ಪಳದ ಹುಲುಗಿಯ ದೇವಿ ದರ್ಶನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅರ್ಧ ಗಂಟೆಗಳ ಕಾಲ ಗೂಡ್ಸ್ ರೈಲನ್ನು ತಡೆದು ನಿಲ್ಲಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.
ರೈಲ್ವೆ ಕ್ರಾಸಿಂಗ್ ಗಳಲ್ಲಿ ಜನತೆ, ವಾಹನ ಕಾದು ನಿಲ್ಲುವುದು ಸಹಜ. ಆದರೆ, ರಾಹುಲ್ ಗಾಂಧಿ ವಾಹನ ಹೋಗುವುದಕ್ಕೆ ಅನುಕೂಲ ಕಲ್ಪಿಸಲು ಗೂಡ್ಸ್ ರೈಲೇ ಕಾದುನಿಂತ ಘಟನೆ ಮುನಿರಾಬಾದ ಲೇವಲ್ ಕ್ರಾಸ್ ನಲ್ಲಿ ಶನಿವಾರ ಸಂಜೆ ನಡೆಯಿತು.
ಹೊಸಪೇಟೆಯಲ್ಲಿ ರಾಹುಲ್ ಗಾಂಧಿ ಚುನಾವಣಾ ಅಬ್ಬರ
ಹೊಸಪೇಟೆಯಲ್ಲಿ ಜನಾಶೀರ್ವಾದ ಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ ಕೊಪ್ಪಳ ತಾಲೂಕು ಹುಲುಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಆಗಮಿಸುತ್ತಿದ್ದರು. ರಾಹುಲ್ ಇದ್ದ ವಾಹನಕ್ಕೆ ಅಡ್ಡಿಯಾಗಬಾರದೆಂದು ಅದೇ ಸಮಯದಲ್ಲಿ ಕೂಡಗಿಗೆ ಹೊರಟಿದ್ದ ಗೂಡ್ಸ್ ರೈಲು 3.50 ರಿಂದ 4.22 ರ ವರೆಗೆ ಅರ್ಧ ಗಂಟೆಗೂ ಹೆಚ್ಚುಕಾಲ ನಿಂತಿತ್ತು.
ರಾಹುಲ್ ಗಾಂಧಿ ಇದ್ದ ವಿಶೇಷ ಬಸ್, ಬೆಂಗಾವಲು ಪಡೆ, ಮುಖ್ಯಮಂತ್ರಿ, ಮಂತ್ರಿಗಳ, ಸಂಸದರು, ಕಾರ್ಯಕರ್ತರ ನೂರಾರು ವಾಹನಗಳು ಲೇವಲ್ ಕ್ರಾಸ್ ನಿಂದ ಪಾಸಾದ ಬಳಿಕ ಗೂಡ್ಸ್ ರೈಲು ಮುಂದೆ ಸಾಗಿತು.
'ರಾಹುಲ್ ಗಾಂಧಿ ದೇಗುಲ ದರ್ಶನ ಹಿಂದೆ ರಾಜಕೀಯ ಇಲ್ಲ'!
ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ರೈಲನ್ನು ತಡೆಯಲು ಹೇಳಿದ್ದಾರೆ. ಆದರೆ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ರಾಜೇಶ್ ಮೋಹನ ತಾಂತ್ರಿಕ ಕಾರಣದಿಂದಾಗಿ ರೈಲು ನಿಂತಿದೆ ಎಂದು ಸಮಜಾಯಿಸಿ ನೀಡಿದ್ದಾರೆ.