ಗಂಗಾವತಿ-ದರೋಜಿ ನೂತನ ರೈಲು ಮಾರ್ಗ ಬಾಗಲಕೋಟೆ ತನಕ ವಿಸ್ತರಣೆ?
ಕೊಪ್ಪಳ, ಆಗಸ್ಟ್ 31; ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಬಳ್ಳಾರಿ ಜಿಲ್ಲೆಯ ದರೋಜಿ ತನಕ ಹೊಸ ರೈಲು ಮಾರ್ಗ ನಿರ್ಮಾಣ ಮಾಡಲು ಪ್ರಾಥಮಿಕ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಲಾಗಿತ್ತು. ಈಗ ಈ ರೈಲು ಮಾರ್ಗವನ್ನು ಬಾಗಲಕೋಟೆ ತನಕ ವಿಸ್ತರಣೆ ಮಾಡುವ ಸಾಧ್ಯತೆ ಇದೆ.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಈ ಕುರಿತು ಮಾತನಾಡಿದ್ದಾರೆ. ಗಂಗಾವತಿ-ದರೋಜಿ ನೂತನ ರೈಲು ಮಾರ್ಗವನ್ನು ಕನಕಗಿರಿ, ಕುಷ್ಟಗಿ, ಇಲಕಲ್ ಮತ್ತು ಹುನಗುಂದ ಮಾರ್ಗವಾಗಿ ಬಾಗಲಕೋಟ ತನಕ ವಿಸ್ತರಿಸಲು ನೂತನ ಸುಮಾರು 157 ಕಿ. ಮೀ. ಉದ್ದದ ಮಾರ್ಗದ ಸರ್ವೇ ಕಾರ್ಯಕ್ಕಾಗಿ ಕೇಂದ್ರ ಸರ್ಕಾರ ರೂ.78.50 ಲಕ್ಷಗಳನ್ನು ಮಂಜೂರು ಮಾಡಿದೆ" ಎಂದು ಹೇಳಿದ್ದಾರೆ.
ಕೊಪ್ಪಳದ ಸಂಸದರು ನೂತನ ರೈಲು ಮಾರ್ಗ ವಿಸ್ತರಿಸಲು ಹುಬ್ಬಳ್ಳಿಯ ನೈಋತ್ಯ ರೈಲ್ವೇ ವಿಭಾಗದ ಮುಖ್ಯ ಪ್ರಬಂಧಕರಿಗೆ ಮನವಿ ಮಾಡಿದ್ದರು. ಸಂಸದರ ಮನವಿಯಂತೆ ನೈಋತ್ಯ ರೈಲ್ವೇ ವಿಭಾಗದಿಂದ ಕೇಂದ್ರ ಸರ್ಕಾರಕ್ಕೆ ನೂತನ ರೈಲು ಮಾರ್ಗ ವಿಸ್ತರಣೆ ಕುರಿತು ಶಿಫಾರಸ್ಸು ಮಾಡಲಾಗಿತ್ತು.

ಈ ಪ್ರಸ್ತಾವನೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ನೂತನ ಸುಮಾರು 157 ಕಿ. ಮೀ. ಉದ್ದದ ರೈಲು ಮಾರ್ಗದ ಸರ್ವೇ ಕಾರ್ಯಕ್ಕೆ ಅನುದಾನ ಮಂಜೂರು ಮಾಡಿದೆ. ನೂತನ ಮಾರ್ಗದಿಂದ ಕೊಪ್ಪಳ ಜಿಲ್ಲೆ ಮಾತ್ರವಲ್ಲ ಬಾಗಲಕೋಟೆ ಭಾಗದ ಪ್ರಯಾಣಿಕರಿಗೆ ಬೆಂಗಳೂರು, ತಿರುಪತಿ ಪ್ರಯಾಣದ ದೂರ ಮತ್ತು ಸಮಯ ಕಡಿಮೆಯಾಗಲಿದೆ.
ಜುಲೈನಲ್ಲಿ ಒಪ್ಪಿಗೆ; ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಈ ವರ್ಷದ ಜುಲೈನಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಬಳ್ಳಾರಿ ಜಿಲ್ಲೆಯ ದರೋಜಿ ತನಕ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಎಂಜಿನಿಯರಿಂಗ್ ಹಾಗೂ ಟ್ರಾಫಿಕ್ ಪ್ರಾಥಮಿಕ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಿದ್ದರು.
36 ಕಿ. ಮೀ. ಅಂತರದ ಈ ಮಾರ್ಗದ ಸಮೀಕ್ಷೆಗೆ 18 ಲಕ್ಷ ರೂ. ನಿಗದಿ ಮಾಡಲಾಗಿದೆ. ಆರು ತಿಂಗಳಿನಲ್ಲಿ ಈ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಸಮೀಕ್ಷೆಯ ವರದಿ ಕೈ ಸೇರಿದ ಬಳಿಕ ರೈಲ್ವೆ ಮಂಡಳಿ ಮಾರ್ಗ ನಿರ್ಮಾಣದ ಕುರಿತು ಮುಂದಿನ ತೀರ್ಮಾನ ಕೈಗೊಳ್ಳಲಿದೆ.

ಸಮೀಕ್ಷೆಗೆ ಒಪ್ಪಿಗೆ ಸಿಕ್ಕಿದಾಗ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ನಾಯಕ ಎಚ್. ಆರ್. ಶ್ರೀನಾಥ ಗಂಗಾವತಿ-ಬಾಗಲಕೋಟೆ ಹೊಸ ರೈಲ್ವೆ ಮಾರ್ಗದ ಸಮೀಕ್ಷೆಗೆ ಸಹ ಒಪ್ಪಿಗೆ ನೀಡಬೇಕು ಎಂದು ಆಗ್ರಹಿಸಿದ್ದರು.
ಗಂಗಾವತಿ-ಬಾಗಲಕೋಟೆ ಮಾರ್ಗದ ಸಮೀಕ್ಷೆ ನಡೆದು ಮಾರ್ಗ ನಿರ್ಮಾಣಗೊಂಡರೆ ವ್ಯಾಪಾರ, ವಹಿವಾಟು ಜೊತೆಗೆ ಜನರಿಗೂ ಅನುಕೂಲವಾಗಲಿದೆ ಎಂದು ಗಮನ ಸೆಳೆದಿದ್ದರು. ಅಂತಿಮವಾಗಿ ಈಗ ಕೇಂದ್ರ ಸರ್ಕಾರ ಈಗ ಮಾರ್ಗದ ಸಮೀಕ್ಷೆಗೂ ಒಪ್ಪಿಗೆ ನೀಡಿದೆ.
ಗಂಗಾವತಿ ಅಕ್ಕಿ ಸಾಗಣೆ; ಕೊಪ್ಪಳ ಜಿಲ್ಲೆಯ ಗಂಗಾವತಿ ಭತ್ತದ ಕಣಜವಾಗಿದೆ. ಇಲ್ಲಿ ಬೆಳೆಯುವ ಸೋನಾ ಮಸೂರಿ ಅಕ್ಕಿ ಬರೀ ರಾಜ್ಯವಲ್ಲ ವಿದೇಶಗಳಿಗೆ ಸಹ ರಫ್ತಾಗುತ್ತದೆ. ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಗಂಗಾವತಿ ಸಹ ಒಂದಾಗಿದೆ.
ನೈಋತ್ಯ ರೈಲ್ವೆ ವಲಯ ಸರಕು ಸಾಗಣೆಗಾಗಿಯೇ ಗಂಗಾವತಿ ರೈಲು ನಿಲ್ದಾಣದಲ್ಲಿ ಪ್ರತ್ಯೇಕ ರೈಲ್ವೆ ಫ್ಲಾಟ್ ಫಾರ್ಮ್ ನಿರ್ಮಾಣ ಮಾಡಿದೆ. ಈ ವರ್ಷದ ಫೆಬ್ರವರಿಯಲ್ಲಿ ಪ್ರಥಮ ಬಾರಿಗೆ ಇಲ್ಲಿಂದ 1326 ಟನ್ ಅಕ್ಕಿಯನ್ನು ಗುವಾಹಟಿ ಸಮೀಪದ ಅಜ್ರಾಕ್ಕೆ ಸಾಗಣೆ ಮಾಡಲಾಗಿತ್ತು.
ಇಂತಹ ಪ್ರಮುಖ ಕೇಂದ್ರ ಗಂಗಾವತಿಯಿಂದ ಹೊಸ ರೈಲು ಮಾರ್ಗವನ್ನು ದರೋಜಿಗೆ ನಿರ್ಮಾಣ ಮಾಡಲು ಸಮೀಕ್ಷೆ ನಡೆಸಲಾಗುತ್ತಿದೆ. ಈ ಮಾರ್ಗವನ್ನು ಕನಕಗಿರಿ, ಕುಷ್ಟಗಿ, ಇಲಕಲ್ ಮತ್ತು ಹುನಗುಂದ ಮಾರ್ಗವಾಗಿ ಬಾಗಲಕೋಟ ತನಕ ವಿಸ್ತರಿಸಲು ಈಗ ಸಮೀಕ್ಷೆ ನಡೆಸಲು ಒಪ್ಪಿಗೆ ಕೊಡಲಾಗಿದೆ.












Click it and Unblock the Notifications