ಕೆ. ಕಲ್ಯಾಣ್ ದಾಂಪತ್ಯ ಕಲಹ ಪ್ರಕರಣ; ಆರೋಪಿ ಗಂಗಾ ಕುಲಕರ್ಣಿ ಆತ್ಮಹತ್ಯೆ
ಕೊಪ್ಪಳ, ಅಕ್ಟೋಬರ್ 29: ಚಿತ್ರ ಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣವಾಗಿದ್ದ, ಮನೆ ಕೆಲಸ ಮಾಡುವ ನೆಪದಲ್ಲಿ ಕೆ.ಕಲ್ಯಾಣ್ ಪತ್ನಿ ತವರು ಮನೆಯವರ ಆಸ್ತಿ ಲಪಟಾಯಿಸಿದ ಆರೋಪ ಹೊತ್ತಿದ್ದ ಗಂಗಾ ಕುಲಕರ್ಣಿ ಕೋರ್ಟ್ ನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಷ್ಟಗಿಯಲ್ಲಿ ನಡೆದಿದೆ.
ಇತ್ತೀಚೆಗೆ ಕೆ.ಕಲ್ಯಾಣ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನದವರೆಗೂ ಪ್ರಕರಣ ತಲುಪಿತ್ತು. ಈ ಕುರಿತು ಕೆ.ಕಲ್ಯಾಣ್ ಅವರು ದೂರು ದಾಖಲಿಸಿದ್ದರು. ತನ್ನ ಪತ್ನಿ ಅಮಾಯಕಳಾಗಿದ್ದು, ಆಕೆಯೊಂದಿಗೆ ಮಾತನಾಡಲೂ ಬಿಡುತ್ತಿಲ್ಲ ಎಂದು ದೂರಿದ್ದರು. ಆ ನಂತರ ವಿಚಾರಣೆ ನಡೆಸಿದಾಗ, ಇದರ ಹಿಂದೆ ಶಿವಾನಂದ ವಾಲಿ ಎಂಬ ವ್ಯಕ್ತಿ ಹಾಗೂ ಕಲ್ಯಾಣ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಗಂಗಾ ಕುಲಕರ್ಣಿ ಅವರು ಇದ್ದರು ಎಂದು ತಿಳಿದುಬಂದಿತ್ತು.
ಶಿವಾನಂದ ಜೊತೆ ಸೇರಿ ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಅವರ ತವರು ಮನೆಯ ಆಸ್ತಿ ಲಪಟಾಯಿಸಲು ಹೊಂಚು ಹಾಕಿದ್ದರು ಎಂಬ ವಿಷಯ ಬೆಳಕಿಗೆ ಬಂದಿತ್ತು. ಮಾಟ ಮಂತ್ರದ ವಿಷಯವನ್ನು ಅಶ್ವಿನಿ ಅವರ ತಲೆಗೆ ತುಂಬಿ ಈ ಮೂಲಕ ಹಣ ವರ್ಗಾವಣೆ ಮಾಡಿಕೊಂಡಿದ್ದರು, ಅಲ್ಲದೇ ಯುವಕನೊಬ್ಬನಿಗೂ ಇವರು ಮೂರು ಲಕ್ಷ ರೂಪಾಯಿ ವಂಚಿಸಿದ್ದರು ಎನ್ನಲಾಗಿದೆ.

ಈಚೆಗೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಶಿವಾನಂದ ವಾಲಿಗೆ ಜಾಮೀನು ದೊರೆತಿತ್ತು. ಗುರುವಾರ ಪ್ರಕರಣವೊಂದರ ಸಂಬಂಧ ಕುಷ್ಟಗಿ ನ್ಯಾಯಾಲಯಕ್ಕೆ ಗಂಗಾ ಕುಲಕರ್ಣಿ ಹಾಜರಾಗಿದ್ದರು. ಈ ವೇಳೆ ಕೋರ್ಟ್ ಆವರಣದಲ್ಲಿಯೇ ಅವರು ವಿಷ ಸೇವಿಸಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.












Click it and Unblock the Notifications