ಕೊಪ್ಪಳ : ಮಾದರಿ ಘನ ತ್ಯಾಜ್ಯ ಘಟಕಕ್ಕೆ ಪರಮೇಶ್ವರ ಭೇಟಿ
ಕೊಪ್ಪಳ, ಜೂನ್ 27 : 'ಹುಲಿಗಿಯಲ್ಲಿ ಸ್ಥಾಪಿಸಲಾಗಿರುವ ಬಹುಗ್ರಾಮ ಘನತ್ಯಾಜ್ಯ ಕಸ ವಿಲೇವಾರಿ ಘಟಕ ಅತ್ಯುತ್ತಮ ಘಟಕವಾಗಿದೆ. ಇಡೀ ರಾಜ್ಯಕ್ಕೆ ಮಾದರಿಯಾಗುವ ಎಲ್ಲಾ ಅರ್ಹತೆಯನ್ನು ಇದು ಹೊಂದಿದೆ' ಎಂದು ಉಪ ಮುಖ್ಯಮಂತ್ರಿ, ಗೃಹ ಸಚಿವ ಡಾ. ಜಿ. ಪರಮೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದರು.
ಬುಧವಾರ ಅವರು ಕೊಪ್ಪಳ ಪ್ರವಾಸ ಕೈಗೊಂಡಿದ್ದರು. ಹುಲಿಗಿ-ಹೊಸಳ್ಳಿಯಲ್ಲಿ ಸ್ಥಾಪಿಸಲಾಗಿರುವ ಘನತ್ಯಾಜ್ಯ ಕಸ ವಿಲೇವಾರಿ ಘಟಕಕ್ಕೆ ಅವರು ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
ಬೆಂಗಳೂರಲ್ಲಿ ಕಿರು ತ್ಯಾಜ್ಯ ಸಂಸ್ಕರಣಾ ಘಟಕ ತೆರೆಯಲು ಚಿಂತನೆ: ಪರಮೇಶ್ವರ್
'ಹಲವು ಗ್ರಾಮ ಪಂಚಾಯತಿಗಳ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿರುವ ಈ ಘನತ್ಯಾಜ್ಯ ಕಸ ವಿಲೇವಾರಿ ಘಟಕ ಅತ್ಯುತ್ತಮವಾಗಿದೆ. ರಾಜ್ಯದ ಬಹುತೇಕ ಜಿಲ್ಲಾ ಪಂಚಾಯತಿ, ತಾ.ಪಂ. ಹಾಗೂ ಗ್ರಾಮ ಪಂಚಾಯತಿಯ ಜನಪ್ರತಿನಿಧಿಗಳು ಈ ಘಟಕಕ್ಕೆ ಭೇಟಿ ನೀಡಿ ಇಲ್ಲಿನ ಅತ್ಯುತ್ತಮ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಎಂಬುದಾಗಿ ನಾನು ಹಲವರಿಂದ ಕೇಳಿ ತಿಳಿದುಕೊಂಡಿದ್ದೆ' ಎಂದರು.
'ಈ ಘಟಕಕ್ಕೆ ಭೇಟಿ ನೀಡಬೇಕು ಎನ್ನುವ ಕುತೂಹಲವಿತ್ತು. ಇಂದು ಈ ಘಟಕಕ್ಕೆ ಖುದ್ದು ಭೇಟಿ ನೀಡಿದ್ದೇನೆ. ಇಲ್ಲಿ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯವನ್ನು ಪ್ರತ್ಯೇಕಿಸುವ ವ್ಯವಸ್ಥೆ, ಎರೆಹುಳು ಗೊಬ್ಬರ ತಯಾರಿಕೆ ಘಟಕ, ಪ್ಲಾಸ್ಟಿಕ್ ತ್ಯಾಜ್ಯದಿಂದ ಫ್ಲೋರ್ ಬ್ರಿಕ್ಸ್ ತಯಾರಿಕೆ, ತರಬೇತಿ ಕೇಂದ್ರ ವ್ಯವಸ್ಥೆ ಇಲ್ಲಿದೆ. ಇದು ರಾಜ್ಯಕ್ಕೆ ಮಾದರಿ' ಎಂದು ಹೇಳಿದರು.
ಸ್ವಚ್ಛನಗರಗಳ ಪಟ್ಟಿಯಲ್ಲಿ ಕುಸಿದ ಬೆಂಗಳೂರು, ಮೇಯರ್ ಬೇಸರ
'ಇಂತಹ ಅತ್ಯುತ್ತಮ ಘಟಕ ಸ್ಥಾಪಿಸಲು ಶ್ರಮಿಸಿದ ಎಲ್ಲ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬೆಂಗಳೂರು ನಗರದಲ್ಲಿಯೂ ಕಸ ವಿಲೇವಾರಿಯದ್ದೇ ಪ್ರಮುಖ ಸಮಸ್ಯೆಯಾಗಿದೆ. ಬೆಂಗಳೂರು ನಗರ ಪ್ರದೇಶ ವ್ಯಾಪ್ತಿಗೆ ಸುಮಾರು 110 ಗ್ರಾಮಗಳ ಸೇರ್ಪಡೆಯಾಗುತ್ತಿದ್ದು, ಇಲ್ಲಿನ ಮಾದರಿಯಲ್ಲಿಯೇ ಹಲವು ಗ್ರಾಮಗಳ ಜೊತೆಗೂಡಿ, 8 ರಿಂದ 10 ಗ್ರಾಮಗಳಿಗೊಂದರಂತೆ, ಇದೇ ಮಾದರಿಯ ಘನತ್ಯಾಜ್ಯ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು' ಎಂದರು.
ಕೊಪ್ಪಳ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಘನತ್ಯಾಜ್ಯ ವಿಲೇವಾರಿ ಘಟಕದ ಎಲ್ಲ ವಿಭಾಗಗಳ ಕುರಿತು ಪರಿಚಯಿಸಿದರು. ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ್ ರಾಜಾ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.