ಸಾಲ ಕೇಳಲು ಹೋಗಿದ್ದ ರೈತ ಅದೇ ಅಂಗಡಿಯಲ್ಲಿ ವಿಷ ಸೇವಿಸಿ ಸಾವು
ಕೊಪ್ಪಳ, ಜುಲೈ 31 : ಕೃಷಿಗಾಗಿ ಸಾಲ ಕೇಳಲು ಹೋಗಿದ್ದ ರೈತ ಅದೇ ಅಂಗಡಿಯಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಎಪಿಎಂಸಿಯಲ್ಲಿರುವ ಪಾರಸ್ ಫರ್ಟಿಲೈಜರ್ ಎಂಬ ಅಂಗಡಿಯಲ್ಲಿ ಕ್ರಿಮಿನಾಶಕ ಸೇವಿಸಿದ್ದ ರೈತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ರೈತ ವಿಷ ಸೇವಿಸಿ ಸಾವನ್ನಪ್ಪಿದ್ದಕ್ಕೆ ಅಂಗಡಿಯವರೇ ಕಾರಣ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ವಿಷ ಸೇವಿಸಿದ್ದ ಕೊಪ್ಪಳ ತಾಲೂಕಿನ ಹನಕುಂಟಿ ಗ್ರಾಮದ ರೈತ ರವಿ ಲಕ್ಕುಂಡಿ (38) ಎಂಬ ರೈತ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ. ರೈತ ರವಿ ಲಕ್ಕುಂಡಿ ತಾನು ಬೆಳೆದ ಮೆಕ್ಕೆ ಜೋಳ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಕೊಪ್ಪಳದ ಎಪಿಎಂಸಿಯಲ್ಲಿರುವ ಪಾರಸ್ ಫರ್ಟಿಲೈಜರ್ಸ್ ಎಂಬ ಅಂಡಗಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಾರಾಟ ಮಾಡುತ್ತಿದ್ದರು.
ಅದೇ ಅಂಗಡಿಯಲ್ಲಿ ಬೀಜ, ಗೊಬ್ಬರಕ್ಕೆ ಬೇಕಾದ ಹಣಕಾಸಿನ ಲೇವಾದೇವಿ ಇಟ್ಟುಕೊಂಡಿದ್ದಎನ್ನಲಾಗಿದ್ದು, ತಾನು ಲೇವಾದೇವಿ ಇಟ್ಟುಕೊಂಡಿದ್ದ ಅಂಗಡಿಗೆ ಎರಡು ದಿನಗಳ ಹಿಂದೆ ಬಂದ ರೈತ ರವಿ ಕೃಷಿಗಾಗಿ ಮತ್ತೆ ಸಾಲ ಕೇಳಿದ್ದು, ಅಂಗಡಿಯವರು ಸಾಲ ನೀಡಲು ನಿರಾಕರಿಸಿದ್ದಾರೆ.

ಇದರಿಂದಾಗಿ ರೈತ ಅಂಗಡಿಯಲ್ಲಿಯೇ ಕ್ರಿಮಿನಾಶಕ ಸೇವಿಸಿದ್ದಾನೆ ಎನ್ನಲಾಗಿದೆ. ಕ್ರಿಮಿನಾಶಕ ಸೇವಿಸಿದ್ದ ರವಿಯನ್ನು ಅಂಗಡಿಯ ಮಾಲೀಕರು ಕೊಪ್ಪಳ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿ ಶನಿವಾರ ಸಾವನ್ನಪ್ಪಿದ್ದಾನೆ. ಆತನ ಸಾವಿಗೆ ಅಂಗಡಿಯವರೇ ಕಾರಣ ಎಂದು ಮೃತ ರೈತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಆದರೆ ಈ ಬಗ್ಗೆ ಅಂಗಡಿ ಮಾಲೀಕರನ್ನು ಕೇಳಿದರೆ " ರೈತ ರವಿ ನಮ್ಮ ಅಂಗಡಿಯಲ್ಲಿ ಕಳೆದ ಮೂರ್ನಾಲ್ಕು ವರ್ಷದಿಂದ ವ್ಯವಹಾರ ಇಟ್ಟುಕೊಂಡಿದ್ದರು. ಅವರ ಬೆಳೆಗಳನ್ನು ನಮ್ಮ ಹತ್ತಿರ ಸಾಲ ತೆಗೆದುಕೊಂಡು ಬೆಳೆ ಬಂದ ನಂತರ ನಮಗೆ ಮಾರಾಟ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಅಂಗಡಿಗೆ ಬಂದಿದ್ದಾಗ ಬೀಜ, ಗೊಬ್ಬರಕ್ಕಾಗಿ ಹಣಕ್ಕಾಗಿ ಬಂದಿದ್ದರು, ನಾವು ಸಾಲ ಬಾಕಿ ಇರುವ ಕಾರಣ ಕೊಟ್ಟಿರಲಿಲ್ಲ. ನಂತರ ಅಂಗಡಿಯ ಹೊರಗೆ ವಿಷ ಕುಡಿದಿದ್ದರು, ನಾವೇ ಮಾನವೀಯತೆ ದೃಷ್ಟಿಯಿಂದ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸಿದ್ದೆವು ಎಂದು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ ಸ್ಥಳಕ್ಕೆ ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ್, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕುಟುಂಬಸ್ಥರು ಮಾಲೀಕರಿಂದ ಪರಿಹಾರ ಕೊಡಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ; ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications