ಲಕ್ಷಾಂತರ ಜನರ ಸಮಾಗಮದಲ್ಲಿ ನಾಳೆಯಿಂದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ
ಕೊಪ್ಪಳ, ಜನವರಿ 11: ನಾಳೆ, ಜನವರಿ 12ರಿಂದ ಆರಂಭಗೊಳ್ಳಲಿರುವ "ದಕ್ಷಿಣ ಭಾರತ ಕುಂಭಮೇಳ" ಖ್ಯಾತಿಯ ಗವಿಸಿದ್ದೇಶ್ವರ ಜಾತ್ರೆಗೆ ಕೊಪ್ಪಳದಲ್ಲಿ ಭರ್ಜರಿ ಸಿದ್ಧತೆ ಸಾಗಿದೆ. ಜನವರಿ 14ರವರೆಗೂ ಮೂರು ದಿನಗಳ ಕಾಲ ನಡೆಯುವ ಈ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಸೇರಲಿದ್ದಾರೆ. ಜನವರಿ 9ರಂದು ಬಸವಪಟ ಆರೋಹಣ ಮಾಡುವ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಗಿದ್ದು, ಹಲವು ಕಾರ್ಯಕ್ರಮದೊಂದಿಗೆ ಜಾತ್ರೆಯ ಕಳೆ ಹೆಚ್ಚುತ್ತಿದೆ.
ವರ್ಷದಿಂದ ವರ್ಷಕ್ಕೆ ರಂಗು ಹೆಚ್ಚಿಸಿಕೊಳ್ಳುತ್ತಿರುವ ಈ ಅಜ್ಜನ ಜಾತ್ರೆ ನೋಡಲು ಬರುವವರ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಯಾತ್ರಿಕರಿಗೂ ಈ ಬಾರಿ ಸಕಲ ಸೌಕರ್ಯಗಳನ್ನು ಒದಗಿಸಲಾಗಿದೆ. ಜಾತ್ರೆಯ ಅಂಗವಾಗಿ ಇಂದು ಲಘು ರಥೋತ್ಸವ ನಡೆಯಲಿದ್ದು, ಏಕಲವ್ಯ ಅರ್ಜುನ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಅವರು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಲಕ್ಷಾಂತರ ಭಕ್ತರಿಗೆ ಪ್ರಸಾದ ನೀಡುವ ಸಂಪ್ರದಾಯವನ್ನು ಜಾತ್ರೆಯಲ್ಲಿ ಹಲವು ವರ್ಷಗಳಿಂದಲೂ ನಡೆಸಿಕೊಂಡುಬಂದಿದ್ದು, ಇದಕ್ಕಾಗಿ ಮಹಾದಾಸೋಹ ಭವನವನ್ನು ಪ್ರತ್ಯೇಕವಾಗಿ ಸಿದ್ಧ ಮಾಡಲಾಗಿದೆ. ಈ ವರ್ಷ ಜ.12ರಿಂದ ಜ. 24 ರಾತ್ರಿ ಅಮಾವಾಸ್ಯೆವರೆಗೂ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ದಾಸೋಹದ ಹೊರತಾಗಿ ಜಾತ್ರೆಯಲ್ಲಿ ಗವಿಮಠದ ಆವರಣದಲ್ಲಿ ಸಾಹಸ, ದಾಲಪಟ ಹಾಗೂ ಕರಾಟೆ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಜೊತೆಗೆ ಗವಿಸಿದ್ಧೇಶ್ವರ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಮಹಿಳೆಯರ ವಾಲಿಬಾಲ್ ಪಂದ್ಯಾವಳಿಗಳೂ ಇರಲಿವೆ.

ಕ್ಯೂಆರ್ ಕೋಡ್ ನಲ್ಲಿ ಅಜ್ಜನ ಜಾತ್ರೆ: ವರ್ಷದಿಂದ ವರ್ಷಕ್ಕೆ ಜಾತ್ರೆ ಹೈಟೆಕ್ ಆಗುತ್ತಿದೆ. ಈ ಮೊದಲು ಅಧೀಕೃತ ಫೇಸ್ ಬುಕ್ ಪುಟದ ಮೂಲಕ ಜಾತ್ರೆಯ ಮಾಹಿತಿ ಲಭ್ಯವಾಗುತ್ತಿತ್ತು. ಈ ಬಾರಿ ಕ್ಯೂ ಆರ್ ಕೋಡ್ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಜಾತ್ರೆಯ ಆಹ್ವಾನ ಪತ್ರದೊಂದಿಗೆ ಕ್ಯೂಆರ್ ಕೋಡ್ ಇದ್ದು, ಅದನ್ನು ಸ್ಕ್ಯಾನ್ ಮಾಡಿದರೆ ಜಾತ್ರೆಯ ಆಮಂತ್ರಣ, ಪಾರ್ಕಿಂಗ್, ಲೈವ್ ದರ್ಶನ ಹೀಗೆ ಹಲವು ಮಾಹಿತಿಗಳು ಇರಲಿವೆ. ಈ ಬಾರಿ ಟ್ರೇಲರ್ ಸಾಂಗ್ ಕೂಡ ಮಾಡಲಾಗಿದೆ.
ವೃಕ್ಷ ಸಂಕಲ್ಪ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಮಠದ ವತಿಯಿಂದ ವಿನೂತನ ವೃಕ್ಷ ಸಂಕಲ್ಪ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, "ಲಕ್ಷ ವೃಕ್ಷೋತ್ಸವ" - ದೈವ ಸಾಕ್ಷಾತ್ಕಾರಕ್ಕೆ ಲಕ್ಷ ದೀಪೋತ್ಸವ, ಪ್ರಕೃತಿ ಸಾಕ್ಷಾತ್ಕಾರಕ್ಕೆ ಲಕ್ಷ ವೃಕ್ಷೋತ್ಸವ ಎಂಬ ಘೋಷವಾಕ್ಯದೊಂದಿಗೆ ಕೊಪ್ಪಳದ ಸಾರ್ವಜನಿಕ ಮೈದಾನದಿಂದ ಜಾಥಾ ನಡೆಯಲಿದೆ.











Click it and Unblock the Notifications