Vande Bharat Express: ಬೆಂಗಳೂರು-ಕೊಪ್ಪಳ ವಂದೇ ಭಾರತ್ ರೈಲಿಗಾಗಿ ಬೇಡಿಕೆ
ಕೊಪ್ಪಳ, ಜುಲೈ 11: ಕರ್ನಾಟಕದಲ್ಲಿ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಇದೆ. ಆದರೆ ಭಾರತೀಯ ರೈಲ್ವೆ ರಾಜ್ಯಕ್ಕೆ ಹೊಸದಾದ ಯಾವುದೇ ರೈಲು ಘೋಷಣೆ ಮಾಡಿಲ್ಲ. ಬೆಂಗಳೂರು-ಮಧುರೈ ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆ ಮುಗಿದಿದ್ದು, ಈ ಮಾರ್ಗದ ಸಂಚಾರ ಆರಂಭ ಬಾಕಿ ಇದೆ.
ಕೊಪ್ಪಳ ಸಂಸದ ಡಾ. ಬಸವರಾಜ ಕ್ಯಾವಟರ್ ದೆಹಲಿಯಲ್ಲಿ ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭೇಟಿ ಮಾಡಿದರು. ಕೊಪ್ಪಳದ ರೈಲು ಯೋಜನೆಗಳ ಕುರಿತು ಸಚಿವರಿಗೆ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಅವರು ಕೊಪ್ಪಳ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ರೈಲ್ವೆ ಇಲಾಖೆ ಈ ಕುರಿತು ಯಾವಾಗ ತೀರ್ಮಾನ ಕೈಗೊಳ್ಳಲಿದೆ? ಎಂದು ಕಾದು ನೋಡಬೇಕಿದೆ.
ಯಾವ ಮಾರ್ಗದಲ್ಲಿ ಸಂಚಾರ?: ಸದ್ಯ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ. ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಅಲ್ಲದೇ ಪ್ರಾಯೋಗಿಕ ಸಂಚಾರವೂ ಪೂರ್ಣಗೊಂಡಿದೆ. ಆದರೆ ಇನ್ನೂ ರೈಲು ಸೇವೆ ಆರಂಭವಾಗಿಲ್ಲ.
ಈಗ ಕೊಪ್ಪಳ-ಬೆಂಗಳೂರು ನಡುವೆ ಹೊಸ ವಂದೇ ಭಾರತ ರೈಲನ್ನು ಆರಂಭಿಸಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿದೆ. ಈ ರೈಲು ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ ಮಾರ್ಗದಲ್ಲಿ ಸಂಚಾರ ನಡೆಸಬೇಕು ಎಂದು ಮನವಿಯಲ್ಲಿ ಉಲ್ಲೇಖ ಮಾಡಲಾಗಿದೆ. ಬಳ್ಳಾರಿ-ಬೆಂಗಳೂರು ನಡುವೆ ಹೊಸ ವಂದೇ ಭಾರತ್ ರೈಲು ಆರಂಭಿಸಬೇಕು ಎಂಬ ಬೇಡಿಕೆಯೂ ಇದೆ.
ಸಚಿವರ ಭೇಟಿ ಬಳಿಕ ಮಾತನಾಡಿದ ಕೊಪ್ಪಳ ಸಂಸದ ಡಾ. ಬಸವರಾಜ ಕ್ಯಾವಟರ್, "ಕೊಪ್ಪಳ ಜಿಲ್ಲೆಯ ರೈಲ್ವೆ ಅಭಿವೃದ್ಧಿ ಕಾಮಗಾರಿ ಸ್ಥಿತಿಗತಿ, ಅಗತ್ಯ ಕಾಮಗಾರಿ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಜಿಲ್ಲೆಗೆ ಸಂಬಂಧಿಸಿದ ರೈಲ್ವೆ ಯೋಜನೆಗಳ ಬಗ್ಗೆ ಮನವಿಯನ್ನು ಮಾಡಲಾಗಿದೆ" ಎಂದು ಹೇಳಿದ್ದಾರೆ.
"ಕುಷ್ಟಗಿಯಲ್ಲಿ ರೈಲ್ವೆ ಹಳಿ ಹಾಕಲಾಗಿದೆ. ಪ್ರತಿನಿತ್ಯ ಹುಬ್ಬಳ್ಳಿ-ಕುಷ್ಟಗಿ ರೈಲು ಸಂಚಾರ ನಡೆಸಿದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಗಂಗಾವತಿ-ದರೋಜಿ ಹಾಗೂ ಗಂಗಾವತಿ-ಬಾಗಲಕೋಟೆ ರೈಲು ಸಂಚಾರಕ್ಕೆ ಸಮೀಕ್ಷೆ ನಡೆಸಲಾಗಿದ್ದು, ಇಲಾಖೆಗೆ ವರದಿ ಸಲ್ಲಿಕೆಯಾಗಿದೆ" ಎಂದರು.
"ಬೆಳಗಾವಿ-ಭದ್ರಾಚಲ ನಡುವೆ ರೈಲು ಸಂಚಾರ ಮರು ಆರಂಭಿಸಬೇಕು. ಯಲಬುರ್ಗಾ ಕ್ಷೇತ್ರದ ವ್ಯಾಪ್ತಿಯ ಬನ್ನಿಕೊಪ್ಪ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಗಳಕೇರಾ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕು" ಎಂದು ಸಚಿವ ವಿ. ಸೋಮಣ್ಣಗೆ ಮನವಿ ಸಲ್ಲಿಕೆ ಮಾಡಲಾಗಿದೆ.
"ಎಲ್ಲಾ ಬೇಡಿಕೆಗಳ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ ಶೀಘ್ರವೇ ಈಡೇರಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ" ಎಂದು ಸಂಸದ ಡಾ. ಬಸವರಾಜ ಕ್ಯಾವಟರ್ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮನಾ ಸೀತಾರಾಮನ್ ಜುಲೈ 23ರಂದು 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದಾರೆ. ಸಾಮಾನ್ಯ ಬಜೆಟ್ನಲ್ಲಿಯೇ ರೈಲ್ವೆ ಬಜೆಟ್ ಸೇರಿಸಲಾಗಿದೆ. ಆದ್ದರಿಂದ ಹೊಸ ರೈಲುಗಳ ಘೋಷಣೆಯಾಗ ಬೇಕಾದರೂ ಸಹ ಬಜೆಟ್ನಲ್ಲಿ ಘೋಷಣೆ ಮಾಡಲಾಗುತ್ತದೆ.












Click it and Unblock the Notifications